ಹೈದರಾಬಾದ್ : ಇಲ್ಲಿನ ವಸತಿ ಸಮುಚ್ಚಯವೊಂದರಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ರಾತ್ರಿ ಪಾಳಯದಲ್ಲಿ ಸೊಳ್ಳೆ ಪರದೆಯೊಳಗೆ ಕುಳಿತು ಕರ್ತವ್ಯ ನಿರ್ವಹಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ವಸತಿ ಸಮುಚ್ಚಯಗಳ ಕಾವಲುಗಾರರು ಎದುರಿಸುತ್ತಿರುವ ಕಷ್ಟಕರ ಪರಿಸ್ಥಿತಿಗಳು ಮತ್ತು ಜನರ ಮಾನವೀಯತೆಯ ಕೊರತೆಯ ಬಗ್ಗೆ ಈ ದೃಶ್ಯಾವಳಿಗಳು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ವೈರಲ್ ವಿಡಿಯೋದಲ್ಲೇನಿದೆ?
ಸೂರಜ್ ಕುಮಾರ್ ಬೌದ್ಧ್ ಎಂಬವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾತ್ರಿ ಪಾಳಿಯಲ್ಲಿ ಕಾವಲು ಕಾಯುತ್ತಿರುವ ಭದ್ರತಾ ಸಿಬ್ಬಂದಿಯೊಬ್ಬರು ಸೊಳ್ಳೆಗಳ ಕಾಟ ತಾಳಲಾರದೆ ಕುರ್ಚಿಯ ಮೇಲೆಯೇ ಸೊಳ್ಳೆ ಪರದೆಯನ್ನು ಹೊದ್ದು ಕುಳಿತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಮಹಿಳೆಯೊಬ್ಬರು ಅವರೊಂದಿಗೆ ಮಾತನಾಡುತ್ತಿರುವ ದೃಶ್ಯವೂ ಇದರಲ್ಲಿದ್ದು, ಆ ಕಾವಲುಗಾರ ನಿದ್ದೆಗೆಟ್ಟು, ಸೊಳ್ಳೆ ಪರದೆಯೊಳಗೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಸೂರಜ್ ಅವರು ಸಮಾಜದ ದ್ವಂದ್ವ ನೀತಿಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ವಸತಿ ಸಮುಚ್ಚಯದಲ್ಲಿರುವ ನಿವಾಸಿಗಳು ಹವಾನಿಯಂತ್ರಿತ (ಎಸಿ) ಕೊಠಡಿಗಳಲ್ಲಿ ಹಾಯಾಗಿ ನಿದ್ರಿಸುತ್ತಾರೆ, ಆದರೆ ತಮ್ಮದೇ ರಕ್ಷಣೆಗಾಗಿ ನಿಂತಿರುವ ಕಾವಲುಗಾರನಿಗೆ ಒಂದು ಸುರಕ್ಷಿತ ಮತ್ತು ಆರಾಮದಾಯಕ ಜಾಗವನ್ನು ಒದಗಿಸಲು ಅವರಿಗೆ ಸಾಧ್ಯವಿಲ್ಲವೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಇಲ್ಲಿನ ನಿಜವಾದ ಸಮಸ್ಯೆ ಎಂದರೆ ಕರುಣೆಯ ಕೊರತೆಯಾಗಿದ್ದು, ಬಡವರ ಬಗೆಗಿನ ದಯೆ, ಕರುಣೆಯನ್ನು ಜನ ಕಳೆದುಕೊಂಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ವಸತಿ ಸಮುಚ್ಚಯಗಳ ಆಡಳಿತ ಮಂಡಳಿಗಳ (ಸೊಸೈಟಿ ಮ್ಯಾನೇಜ್ಮೆಂಟ್) ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, “ಇದು ಕರ್ತವ್ಯವಲ್ಲ, ಇದು ಆಧುನಿಕ ಗುಲಾಮಗಿರಿ” ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು, “ಈ ಚಿತ್ರ ನಿಜಕ್ಕೂ ಕರುಳು ಹಿಂಡುವಂತಿದೆ” ಎಂದು ಕಂಬನಿ ಮಿಡಿದಿದ್ದಾರೆ. ಕಾವಲುಗಾರರ ಯೋಗಕ್ಷೇಮ ನೋಡಿಕೊಳ್ಳುವುದು ಸೊಸೈಟಿ ಆಡಳಿತ ಮಂಡಳಿಯ ಜವಾಬ್ದಾರಿ. ಆದರೆ ಅವರಿಗೆ ಇದರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಹಲವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ : ಬಯಲು ನಾಟಕ ನೋಡುತ್ತಿದ್ದ ವೇಳೆ ಕುಸಿದ ಕಮಾನು ; ಸ್ಥಳದಲ್ಲೇ ಪ್ರಾಣಬಿಟ್ಟ ಇಬ್ಬರು ಮಕ್ಕಳು



















