ಬೆಂಗಳೂರು : ಸಾರ್ವಜನಿಕರಿಂದ ಅಕ್ರಮ ಹಣ ಸಂಗ್ರಹಣೆ, ಬಹುಮಟ್ಟದ ಹಣ ಚಲಾವಣೆ ವ್ಯವಸ್ಥೆ, ಸದಸ್ಯ ಸೇರ್ಪಡೆ ಆಧಾರಿತ ಕಮಿಷನ್ ವಹಿವಾಟು ಹಾಗೂ ಗಂಭೀರ ಹಣಕಾಸು ಅಕ್ರಮಗಳ ಆರೋಪ ಎದುರಿಸುತ್ತಿರುವ ಡ್ರೀಮ್ & ಡೀಲ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 38/2026 ಪ್ರಕರಣವು ಸಾಮಾನ್ಯ ವಂಚನೆ ಪ್ರಕರಣವಲ್ಲದೆ, ರಾಜ್ಯದ ವಿವಿಧ ಭಾಗಗಳ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿರುವ ಶಂಕೆಯನ್ನು ಒಳಗೊಂಡಿರುವ ಸಂಘಟಿತ ಆರ್ಥಿಕ ಅಪರಾಧವಾಗಿದೆ ಎಂದು ದೂರಿನಲ್ಲಿ ದಿನೇಶ್ ಕಲ್ಲಹಳ್ಳಿ ಅವರು ಉಲ್ಲೇಖಿಸಿದ್ದಾರೆ.
ಡ್ರೀಮ್ & ಡೀಲ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹಾಗೂ ಡ್ರೀಮ್ ಡೀಲ್ ಗ್ರೂಪ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ, ಡೈರೆಕ್ಟ್ ಸೆಲಿಂಗ್ ವ್ಯವಹಾರದ ಹೆಸರಿನಲ್ಲಿ ಮಾಸಿಕ ಉಳಿತಾಯ ಯೋಜನೆ, ಲಕ್ಕಿ ಡ್ರಾ, ಖಚಿತ ಬಹುಮಾನ, ವಿದೇಶ ಪ್ರವಾಸ ಹಾಗೂ ಭವಿಷ್ಯ ಲಾಭ ಯೋಜನೆಗಳ ಆಮಿಷ ಒಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವ ಆರೋಪ ಕೇಳಿಬಂದಿದ್ದು, ಪ್ರತಿ ತಿಂಗಳು 1,500 ರೂ. ಕಂತುಗಳ ರೂಪದಲ್ಲಿ ಹಣ ಸಂಗ್ರಹಿಸಿ, ಅದಕ್ಕೆ ಪ್ರತಿಯಾಗಿ ಆರ್ಥಿಕ ಲಾಭ ಹಾಗೂ ಮೌಲ್ಯಯುತ ಉಡುಗೊರೆಗಳ ಭರವಸೆ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಕರಣದಲ್ಲಿ ಕಂಪನಿಯ ನಿರ್ದೇಶಕರು, ಶಾಖಾ ವ್ಯವಸ್ಥಾಪಕರು, ಪ್ರಚಾರಕರು ಹಾಗೂ ಹಣ ಸಂಗ್ರಹಣೆ ಏಜೆಂಟ್ಗಳ ಪಾತ್ರವನ್ನು ತನಿಖೆಗೊಳಪಡಿಸುವ ಅಗತ್ಯವಿದೆ. ಬ್ಯಾಂಕ್ ಖಾತೆಗಳು, ಡಿಜಿಟಲ್ ಹಣ ವರ್ಗಾವಣೆ, ಜಿಎಸ್ಟಿ ದಾಖಲೆಗಳು, ಆದಾಯ ತೆರಿಗೆ ವಿವರಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿರುವ ಪ್ರಚಾರಗಳ ಬಗ್ಗೆ ತಾಂತ್ರಿಕ ತನಿಖೆ ನಡೆಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸ್ಥಳೀಯ ಪೊಲೀಸ್ ಠಾಣೆ ಮಟ್ಟದಲ್ಲಿ ಪ್ರಕರಣದ ಸಂಪೂರ್ಣ ವ್ಯಾಪ್ತಿಯನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ, ರಾಜ್ಯ ಮಟ್ಟದ ತನಿಖಾ ಸಂಸ್ಥೆಯಾದ ಸಿಐಡಿಗೆ ಪ್ರಕರಣವನ್ನು ವರ್ಗಾಯಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಇದಲ್ಲದೆ, ಸಂಸ್ಥೆಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳು, ಡಿಜಿಟಲ್ ಪಾವತಿ ವ್ಯವಸ್ಥೆಗಳು, ಆಸ್ತಿಪಾಸ್ತಿಗಳು ಹಾಗೂ ಹಣಕಾಸು ದಾಖಲೆಗಳನ್ನು ತಕ್ಷಣ ಪರಿಶೀಲಿಸಿ ಅಗತ್ಯವಿದ್ದರೆ ಫ್ರೀಜ್ ಮಾಡುವ ಮೂಲಕ ಸಾರ್ವಜನಿಕರ ಹಣವನ್ನು ರಕ್ಷಿಸುವ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಆರ್ಥಿಕ ಅಪರಾಧ ವಿಭಾಗ, ಸೈಬರ್ ತಜ್ಞರು ಹಾಗೂ ಹಣಕಾಸು ಪರಿಶೋಧಕರ ಸಹಯೋಗದಲ್ಲಿ ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.


















