ಕೋಲ್ಕತ್ತಾ : ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅವರು ಪ್ರಮಾಣ ವಚನ ಸ್ವೀಕರಿಸಿದ ಐತಿಹಾಸಿಕ ಸಮಾರಂಭವು ಒಂದು ಅಪರೂಪದ ಹಾಗೂ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಕೊಲ್ಕತ್ತಾದಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 97 ವರ್ಷದ ವೃದ್ಧರೊಬ್ಬರನ್ನು ಅಪ್ಪಿಕೊಂಡು, ಅವರ ಪಾದಗಳಿಗೆ ಭಕ್ತಿಭಾವದಿಂದ ನಮಸ್ಕರಿಸಿ ಆಶೀರ್ವಾದ ಪಡೆದರು.
ಪ್ರಧಾನಿಯವರ ಈ ನಡೆ ನೆರೆದಿದ್ದವರ ಗಮನ ಸೆಳೆಯಿತು. ಅಷ್ಟಕ್ಕೂ ಪ್ರಧಾನಿ ಮೋದಿಯವರಿಂದ ನಮಸ್ಕರಿಸಲ್ಪಟ್ಟ ಈ ಹಿರಿಯ ಜೀವ ಬೇರಾರೂ ಅಲ್ಲ, ಅವರು ಸಿಲಿಗುರಿ ಮೂಲದ ಹಾಗೂ ಬಂಗಾಳದಲ್ಲಿ ಬಿಜೆಪಿಯ ಆರಂಭಿಕ ದಿನಗಳ ಅತಿ ಹಿರಿಯ ನಾಯಕ ಮಖನ್ ಲಾಲ್ ಸರ್ಕಾರ್.
ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಒಡನಾಡಿ
ಮಖನ್ ಲಾಲ್ ಸರ್ಕಾರ್ ಅವರು ಜನಸಂಘದ ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಆಪ್ತ ಸಹಾಯಕರಾಗಿದ್ದವರು. 1952ರಲ್ಲಿ ಜಮ್ಮು ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಐತಿಹಾಸಿಕ ಹೋರಾಟದಲ್ಲಿ ಮುಖರ್ಜಿ ಅವರೊಂದಿಗೆ ಪಾಲ್ಗೊಂಡಿದ್ದ ಸರ್ಕಾರ್, ಆ ವೇಳೆ ಬಂಧನಕ್ಕೂ ಒಳಗಾಗಿದ್ದರು. ಕಾಶ್ಮೀರದ ಜೈಲಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಮುಖರ್ಜಿ ಅವರ ಕೊನೆಯ ಪಯಣದಲ್ಲೂ ಜೊತೆಯಾಗಿದ್ದ ಈ ಹಿರಿಯ ಜೀವ, ಇಂದು ಬಂಗಾಳದ ಮೊದಲ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದುದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು ಎಂದು ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಸ್ಮರಿಸಿಕೊಂಡಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದ ರಾಷ್ಟ್ರೀಯವಾದಿ ಚಳವಳಿಯ ಆರಂಭಿಕ ತಳಮಟ್ಟದ ನಾಯಕರಲ್ಲಿ ಇಂದಿಗೂ ಬದುಕಿರುವವರ ಪೈಕಿ ಸರ್ಕಾರ್ ಪ್ರಮುಖರಾಗಿದ್ದಾರೆ.
ನ್ಯಾಯಾಲಯದಲ್ಲೇ ದೇಶಭಕ್ತಿ ಗೀತೆ ಹಾಡಿದ್ದ ಅಪ್ರತಿಮ ದೇಶಭಕ್ತ
ಒಮ್ಮೆ ದೇಶಭಕ್ತಿ ಗೀತೆಯನ್ನು ಹಾಡಿದ್ದಕ್ಕಾಗಿ ದೆಹಲಿ ಪೊಲೀಸರು ಮಖನ್ ಲಾಲ್ ಸರ್ಕಾರ್ ಅವರನ್ನು ಬಂಧಿಸಿದ್ದರು. ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕ್ಷಮೆಯಾಚಿಸುವಂತೆ ಸೂಚಿಸಲಾಗಿತ್ತು. ಆದರೆ, ತಾವು ಯಾವುದೇ ತಪ್ಪು ಮಾಡಿಲ್ಲ, ಕೇವಲ ದೇಶಭಕ್ತಿ ಗೀತೆ ಹಾಡಿದ್ದೇನೆ ಎಂದು ಹೇಳಿ ಕ್ಷಮೆ ಕೇಳಲು ಸರ್ಕಾರ್ ನಿರಾಕರಿಸಿದ್ದರು. ಆಗ, ಆ ಗೀತೆಯನ್ನು ಕೇಳಲು ಬಯಸಿದ ನ್ಯಾಯಾಧೀಶರ ಎದುರು, ಕೋರ್ಟ್ ಹಾಲ್ನಲ್ಲಿಯೇ ಮತ್ತೆ ಆ ಗೀತೆಯನ್ನು ಹಾಡಿದ್ದರು. ಅವರ ಧೈರ್ಯ ಹಾಗೂ ದೇಶಭಕ್ತಿಗೆ ಮೆಚ್ಚಿದ ನ್ಯಾಯಾಧೀಶರು, ಸರ್ಕಾರ್ ಅವರಿಗೆ ಪ್ರಥಮ ದರ್ಜೆಯ ರೈಲು ಟಿಕೆಟ್ ಹಾಗೂ ಪ್ರಯಾಣದ ಖರ್ಚಿಗೆ 100 ರೂಪಾಯಿಗಳನ್ನು ನೀಡಿ ಊರಿಗೆ ಕಳುಹಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು ಎಂಬ ರೋಚಕ ಘಟನೆಯನ್ನು ಭಟ್ಟಾಚಾರ್ಯ ನೆನಪಿಸಿಕೊಂಡಿದ್ದಾರೆ.
ಬಂಗಾಳದಲ್ಲಿ ಕಮಲ ಅರಳಲು ಶ್ರಮಿಸಿದ ಕಟ್ಟಾಳು
1980ರಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದಾಗ, ಪಶ್ಚಿಮ ಬಂಗಾಳದಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಕಟ್ಟುವಲ್ಲಿ ಸರ್ಕಾರ್ ಅವರ ಪಾತ್ರ ಮಹತ್ವದ್ದಾಗಿದೆ. ಸಿಲಿಗುರಿ ಸಾಂಸ್ಥಿಕ ಜಿಲ್ಲೆಯ ಮೊಟ್ಟಮೊದಲ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಇವರು, ಪಶ್ಚಿಮ ದಿನಾಜ್ಪುರ, ಜಲ್ಪೈಗುರಿ ಹಾಗೂ ಡಾರ್ಜಿಲಿಂಗ್ ಜಿಲ್ಲೆಗಳ ಸಾಂಸ್ಥಿಕ ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕೇವಲ ಒಂದು ವರ್ಷದ ಅಂತರದಲ್ಲಿ ಸುಮಾರು 10,000 ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ ಹೆಗ್ಗಳಿಕೆ ಇವರದ್ದು. 1981ರಿಂದ ಸತತ ಏಳು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರ ಸಾಧನೆ ಅಸಾಧಾರಣವಾದದ್ದು. ಇಂತಹ ತ್ಯಾಗ ಮತ್ತು ನಿರಂತರ ಹೋರಾಟದ ಮೂಲಕ ಬಂಗಾಳದಲ್ಲಿ ಕಮಲ ಅರಳಲು ಕಾರಣರಾದ ಈ ಹಿರಿಯ ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆ ಮೇಲೆಯೇ ಪಾದಮುಟ್ಟಿ ನಮಸ್ಕರಿಸುವ ಮೂಲಕ ಅಭೂತಪೂರ್ವ ಗೌರವ ಸಮರ್ಪಿಸಿದ್ದಾರೆ.
ಇದನ್ನೂ ಓದಿ : ಬಂಗಾಳದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ : ದೀದಿನಾಡಲ್ಲಿ ಇನ್ನು ಸುವೇಂದು ‘ಅಧಿಕಾರಿ’ ರಾಜ್ಯಭಾರ!


















