ನಾಸಿಕ್ : ಮಹಾರಾಷ್ಟ್ರದ ನಾಸಿಕ್ನಲ್ಲಿ ಭೀತಿ ಹುಟ್ಟಿಸುವ ಘಟನೆಯೊಂದರಲ್ಲಿ, ಪಾಲಿಕೆಯ ಲಸಿಕಾ ಶಿಬಿರದಲ್ಲಿ ಧನುರ್ವಾಯು ಮತ್ತು ಡಿಫ್ತೀರಿಯಾ (Td) ಲಸಿಕೆ ಪಡೆದ ಕೆಲವೇ ಕ್ಷಣಗಳಲ್ಲಿ 17 ವರ್ಷದ ಯುವತಿಯೊಬ್ಬಳು ಅಲ್ಲೇ ಕುಸಿದು ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಬುಧವಾರ ಮಧ್ಯಾಹ್ನ ನಾಸಿಕ್ ಮಹಾನಗರ ಪಾಲಿಕೆ ಆಯೋಜಿಸಿದ್ದ ನಿಯಮಿತ ಲಸಿಕಾ ಅಭಿಯಾನದ ವೇಳೆ ಈ ದುರಂತ ಸಂಭವಿಸಿದ್ದು, ಇಡೀ ಘಟನೆಯು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವತಿಯ ಸಾವಿನ ಬೆನ್ನಲ್ಲೇ ಎಚ್ಚೆತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಲಸಿಕೆಯ ನಿರ್ದಿಷ್ಟ ಬ್ಯಾಚ್ನ ಬಳಕೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಲಸಿಕೆ ಪಡೆದ ಬೆನ್ನಲ್ಲೇ ತಲೆಸುತ್ತು ಬಂದು ಕ್ಷಣಮಾತ್ರದಲ್ಲಿ ಸಾವು
ಮೃತ ಯುವತಿಯು ಬುಧವಾರ ಮಧ್ಯಾಹ್ನ ಸುಮಾರು 12.40ರ ವೇಳೆಗೆ ಲಸಿಕಾ ಕೇಂದ್ರದಲ್ಲಿ ಬೂಸ್ಟರ್ ಡೋಸ್ ಪಡೆದಿದ್ದಳು. ಲಸಿಕೆ ಪಡೆದ ತಕ್ಷಣ ಆಕೆಗೆ ತೀವ್ರ ತಲೆಸುತ್ತು ಕಾಣಿಸಿಕೊಂಡಿದ್ದು, ಶಿಬಿರದ ಸಮೀಪದಲ್ಲಿದ್ದ ವೈದ್ಯಕೀಯ ಅಂಗಡಿಯೊಂದರ ಮುಂದೆ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ರಸ್ತೆಗೆ ಬೀಳುವಾಗ ಆಕೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣವೇ ಸ್ಥಳೀಯರು ಆಕೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಲಸಿಕೆಯಿಂದಲೇ ಮಗಳು ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿರುವ ಯುವತಿಯ ಪೋಷಕರು, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಪಾಯದಿಂದ ಪಾರಾದ ಇತರ ಫಲಾನುಭವಿಗಳು
ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಮೃತ ಯುವತಿಗೆ ಬಳಸಲಾದ ಅದೇ ಲಸಿಕೆ ಸೀಸೆಯಿಂದ (Vial) ಶಿಬಿರದಲ್ಲಿದ್ದ ಇತರ ಆರು ಜನರಿಗೂ ಲಸಿಕೆ ನೀಡಲಾಗಿತ್ತು. ಇದರಲ್ಲಿ ನಾಲ್ವರು ಗರ್ಭಿಣಿಯರು, ಒಬ್ಬ 16 ವರ್ಷದ ಯುವತಿ ಹಾಗೂ 10 ವರ್ಷದ ಬಾಲಕ ಸೇರಿದ್ದು, ಇವರಲ್ಲಿ ಯಾರಿಗೂ ಯಾವುದೇ ರೀತಿಯ ಅಡ್ಡಪರಿಣಾಮಗಳು ಕಾಣಿಸಿಕೊಂಡಿಲ್ಲ. ಆದಾಗ್ಯೂ, ಮುಂಜಾಗ್ರತಾ ಕ್ರಮವಾಗಿ ಸದರಿ ಲಸಿಕೆಯ ಸಂಪೂರ್ಣ ಬ್ಯಾಚ್ ಅನ್ನು ಸದ್ಯಕ್ಕೆ ತಡೆಹಿಡಿಯಲಾಗಿದ್ದು, ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಪ್ರಕಾರ, ಈ ಬ್ಯಾಚ್ನಿಂದ ಸ್ವೀಕರಿಸಲಾದ 24 ಸೀಸೆಗಳಲ್ಲಿ 12 ಸೀಸೆಗಳನ್ನು ಈಗಾಗಲೇ ಬಳಸಲಾಗಿದ್ದು, ಸುಮಾರು 120ಕ್ಕೂ ಹೆಚ್ಚು ಜನರಿಗೆ ಯಾವುದೇ ತೊಂದರೆಯಿಲ್ಲದೆ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ತನಿಖೆ
ನಾಸಿಕ್ ಮಹಾನಗರ ಪಾಲಿಕೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ವಿಜಯ್ ದೇವ್ಕರ್ ಅವರು ಮಾತನಾಡಿ, ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಪ್ರತಿವರ್ಷ ನಾಸಿಕ್ ಒಂದರಲ್ಲೇ ಸುಮಾರು 30000 ಗರ್ಭಿಣಿಯರು ಹಾಗೂ ಅಷ್ಟೇ ಸಂಖ್ಯೆಯ ಹದಿಹರೆಯದವರಿಗೆ ಇದನ್ನು ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ವಿಶ್ವ ಆರೋಗ್ಯ ಸಂಸ್ಥೆ (WHO) ಯ ಸಂಯೋಜಕರು ಮತ್ತು ಲಸಿಕಾ ನಂತರದ ಅಡ್ಡಪರಿಣಾಮಗಳ ತನಿಖಾ ಸಮಿತಿ (AEFI) ಈ ಕುರಿತು ಪ್ರಾಥಮಿಕ ವಿವರಗಳನ್ನು ಕಲೆಹಾಕುತ್ತಿವೆ. ಸದ್ಯ ಅಂಬಾಡ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಹಾಗೂ ವಿಶ್ಲೇಷಣಾ ವರದಿಗಳು ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಲಸಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಯಾವುದೇ ಅಪಪ್ರಚಾರ ಅಥವಾ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ‘ನನ್ನ ಮಗಳೇ ಅಪರಾಧಿಯಾಗಿದ್ದರೆ ಅವಳನ್ನು ಆ ಕೋಟೆಯಿಂದಲೇ ಕೆಳಗೆ ತಳ್ಳಿ’ : ಸಿಯಾ ಪೋಷಕರು



















