ಭುವನೇಶ್ವರ: ಹಲವಾರು ವರ್ಷಗಳ ಹಿಂದೆ ತನ್ನನ್ನು ಬಿಟ್ಟು ಹೋಗಿದ್ದ ಪತ್ನಿ ಮತ್ತೆ ತನ್ನ ಬಳಿಗೆ ಮರಳಬೇಕೆಂಬ ಮೂಢನಂಬಿಕೆಯಿಂದ ನೆರೆಮನೆಯ ವ್ಯಕ್ತಿಯೊಬ್ಬನನ್ನು ಊಟಕ್ಕೆ ಕರೆದು, ಆತನ ಶಿರಚ್ಛೇದ ಮಾಡಿ ಕತ್ತರಿಸಿದ ರುಂಡವನ್ನು ಮನೆಯ ಪೂಜಾ ಕೋಣೆಯಲ್ಲಿ ಹೂತಿಟ್ಟ ಭೀಕರ ನರಬಲಿ ಪ್ರಕರಣವೊಂದು ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಶತ್ರುಘ್ನ ಸಾಹು (40) ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆರೆಯಲ್ಲಿ ಪತ್ತೆಯಾದ ರುಂಡವಿಲ್ಲದ ಶವ
ಆ. 18 ರಿಂದ ನಾಪತ್ತೆಯಾಗಿದ್ದ 45 ವರ್ಷದ ಸಂತೋಷ್ ಖಾರ್ಸೆಲ್ ಎಂಬ ವ್ಯಕ್ತಿಯ ರುಂಡವಿಲ್ಲದ ಮೃತದೇಹವು ಆಗಸ್ಟ್ 20ರಂದು ಸಮೀಪದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ, ಮೃತ ಸಂತೋಷ್ ಕೊನೆಯ ಬಾರಿಗೆ ಶತ್ರುಘ್ನ ಸಾಹು ಜೊತೆ ಕಾಣಿಸಿಕೊಂಡಿದ್ದ ಮಾಹಿತಿ ಲಭ್ಯವಾಗಿತ್ತು. ಈ ಸುಳಿವಿನ ಆಧಾರದ ಮೇಲೆ ಸಾಹುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೆಚ್ಚಿಬೀಳಿಸುವ ಸತ್ಯಾಂಶಗಳು ಬಯಲಿಗೆ ಬಂದಿವೆ.
ಊಟಕ್ಕೆ ಕರೆದು ಕತ್ತು ಸೀಳಿದ ಕಿರಾತಕ
ಮೃತ ಸಂತೋಷ್ ಹಾಗೂ ಆರೋಪಿ ಸಾಹು ನಡುವೆ ಈ ಹಿಂದೆ ಯಾವುದೇ ರೀತಿ ಪರಿಚಯವಿರಲಿಲ್ಲ. ಆಗಸ್ಟ್ 18ರಂದು ಪರಿಚಯವಾದ ಸಂತೋಷ್ ಅವರನ್ನು ಸಾಹು ಊಟದ ನೆಪವೊಡ್ಡಿ ತನ್ನ ಮನೆಗೆ ಕರೆದೊಯ್ದಿದ್ದ. ಊಟ ಮುಗಿಸಿ ಆತ ನಿದ್ರೆಗೆ ಜಾರಿದ ನಂತರ, ಸಾಹು ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಆತನ ತಲೆಯನ್ನು ಕತ್ತರಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಮುಂಡವನ್ನು ಕೆರೆಗೆ ಎಸೆದು, ಕತ್ತರಿಸಿದ ತಲೆಯನ್ನು ತನ್ನ ಮನೆಯ ಪೂಜಾ ಕೋಣೆಯ ನೆಲದಲ್ಲಿ ಸಾಹು ಹೂತುಹಾಕಿದ್ದ ಎಂದು ಬಲಂಗೀರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಲಾಷ್ ಜಿ ಹೇಳಿದ್ದಾರೆ.
ಮಾಟ-ಮಂತ್ರದ ನರಬಲಿ ಸಂಚು ಬಯಲು
ಆರಂಭದಲ್ಲಿ ಮದ್ಯಪಾನದ ವೇಳೆ ನಡೆದ ಜಗಳದಿಂದ ಹತ್ಯೆ ನಡೆದಿರುವುದಾಗಿ ಆರೋಪಿ ಪೊಲೀಸರನ್ನು ದಾರಿತಪ್ಪಿಸಲು ಯತ್ನಿಸಿದ್ದನು. ಆದರೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಪೂಜಾ ಕೋಣೆಯಲ್ಲಿ ಹೂತಿಟ್ಟಿದ್ದ ರುಂಡವನ್ನು ಹೊರತೆಗೆಯಲಾಯಿತು. ಇದರಿಂದಾಗಿ ಇದು ನರಬಲಿ ಉದ್ದೇಶದಿಂದ ನಡೆದ ಕೊಲೆ ಎಂಬುದು ಖಚಿತವಾಯಿತು. ಆರೋಪಿ ಸಾಹುವಿನ ಮಾಟ-ಮಂತ್ರ ಹಾಗೂ ಅಂಧಶ್ರದ್ಧೆಯ ನಡವಳಿಕೆಯಿಂದ ಬೇಸತ್ತು ಆತನ ಪತ್ನಿ ಇಬ್ಬರು ಮಕ್ಕಳೊಂದಿಗೆ ಕಳೆದ 10 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆಕೆ ಮರಳಿ ಮನೆಗೆ ಬರಲೆಂದು ಆರೋಪಿ ಈ ಘೋರ ಕೃತ್ಯ ಎಸಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆಗೆ ಬಳಸಲಾದ ರಕ್ತಸಿಕ್ತ ಮಾರಕಾಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕೃತ್ಯದಲ್ಲಿ ಸಾಹುವಿನ ತಾಯಿ, ಸಹೋದರ ಮತ್ತು ಅತ್ತಿಗೆಯ ಪಾತ್ರದ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಗಾಗಿ ಪೊಲೀಸರು ಘಟನಾ ಸ್ಥಳದ ಮರುಸೃಷ್ಟಿಯನ್ನೂ ನಡೆಸಿದ್ದಾರೆ.



















