ನವದೆಹಲಿ: ದೇಶದ ಹಲವೆಡೆ ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ವಿಚಾರ ಚರ್ಚೆಯಲ್ಲಿರುವಾಗಲೇ, ಮಹಿಳೆಯರಿಗೆ ಋತುಚಕ್ರದ ರಜೆಯನ್ನು ಕಡ್ಡಾಯಗೊಳಿಸಿದರೆ, ಮುಂದಿನ ದಿನಗಳಲ್ಲಿ ಉದ್ಯೋಗದಾತರು ಅವರಿಗೆ ಕೆಲಸ ನೀಡಲು ಹಿಂದೇಟು ಹಾಕಬಹುದು. ಇದರಿಂದ ಮಹಿಳೆಯರ ಉದ್ಯೋಗಾವಕಾಶಗಳ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ರಜೆ ನೀಡುವುದನ್ನು ಕಡ್ಡಾಯಗೊಳಿಸಲು ರಾಜ್ಯಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಇಂದು ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ಈ ಎಚ್ಚರಿಕೆ ನೀಡಿದ್ದಾರೆ.
ಉದ್ಯೋಗ ನಷ್ಟದ ಅಪಾಯ
ಈ ಕುರಿತು ಕಳವಳ ವ್ಯಕ್ತಪಡಿಸಿದ ಸಿಜೆಐ ಸೂರ್ಯಕಾಂತ್, ಇಂತಹ ಕಾನೂನು ಜಾರಿಗೆ ಬಂದರೆ ಉದ್ಯೋಗಸ್ಥ ಮಹಿಳೆಯರಲ್ಲಿ ತಾವು ಪುರುಷರಿಗಿಂತ ‘ಕಡಿಮೆ’ ಎಂಬ ಮಾನಸಿಕ ಕೀಳರಿಮೆ ಅಥವಾ ಭಯ ಸೃಷ್ಟಿಯಾಗುವ ಅಪಾಯವಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವುದು ಬೇರೆ, ಆದರೆ ಋತುಚಕ್ರದ ರಜೆಯನ್ನು ಕಡ್ಡಾಯಗೊಳಿಸುವ ಕಾನೂನು ತಂದರೆ, ಉದ್ಯೋಗದಾತ ಕಂಪನಿಗಳು ಮಹಿಳೆಯರಿಗೆ ಕೆಲಸವನ್ನೇ ನೀಡುವುದಿಲ್ಲ. ಉದ್ಯೋಗದಾತರ ಮನಸ್ಥಿತಿ ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿಲ್ಲ. ಇಂತಹ ಅರ್ಜಿಗಳು ಮಹಿಳೆಯರನ್ನು ಕೀಳಾಗಿ ಕಾಣಲು ಹಾಗೂ ಋತುಚಕ್ರ ಎಂಬುದು ‘ಕೆಟ್ಟದ್ದು’ ಎಂಬ ತಪ್ಪು ಕಲ್ಪನೆ ಬಿತ್ತಲು ಕಾರಣವಾಗುತ್ತವೆ ಎಂದು ಹೇಳಿದರು.
ಸ್ವಯಂಪ್ರೇರಿತ ರಜೆಗಿಲ್ಲ ಅಭ್ಯಂತರ, ಕಡ್ಡಾಯವಷ್ಟೇ ತಪ್ಪು
ವಿಚಾರಣೆ ವೇಳೆ ಹಿರಿಯ ವಕೀಲ ಎಂ.ಆರ್. ಶಂಶಾದ್ ಅವರು, 2013ರಲ್ಲಿ ಕೇರಳ ಸರ್ಕಾರವು ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಿತ್ತು ಮತ್ತು ಇದು ಲಿಂಗ-ಸಮಾನ ಸಮಾಜ ನಿರ್ಮಾಣದ ಬದ್ಧತೆಯ ಭಾಗ ಎಂದು ಅಂದಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಅನೇಕ ಖಾಸಗಿ ಕಂಪನಿಗಳೂ ಇದೇ ರೀತಿಯ ರಿಯಾಯಿತಿ ನೀಡಿವೆ ಎಂದು ಉಲ್ಲೇಖಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಇವೆಲ್ಲವೂ ಸಂಸ್ಥೆಗಳ ಸ್ವಯಂಪ್ರೇರಿತ ಕ್ರಮಗಳಾಗಿವೆ. ಆದರೆ, ಯಾವಾಗ ಇದು ‘ಕಾನೂನಿನ ಮೂಲಕ ಕಡ್ಡಾಯ’ ಎಂದು ನೀವು ಹೇಳುತ್ತೀರೋ, ಆಗ ನ್ಯಾಯಾಂಗ ಅಥವಾ ಸರ್ಕಾರಿ ಹುದ್ದೆಗಳಲ್ಲೂ ಮಹಿಳೆಯರಿಗೆ ಅವಕಾಶ ನಿರಾಕರಿಸಬಹುದು. ಮಹಿಳೆಯರು ಮನೆಯಲ್ಲೇ ಕೂರಲಿ ಎಂದು ಹೇಳುವ ಮೂಲಕ ಅವರ ವೃತ್ತಿಜೀವನವೇ ಅಂತ್ಯಗೊಳ್ಳುವ ಅಪಾಯವಿರುತ್ತದೆ ಎಂದು ಸ್ಪಷ್ಟಪಡಿಸಿದರು.
ನೈರ್ಮಲ್ಯ, ಆರೋಗ್ಯದ ಹಕ್ಕು
ಕಳೆದ ಜನವರಿಯಲ್ಲಿ ಇದೇ ಸುಪ್ರೀಂ ಕೋರ್ಟ್ ಋತುಚಕ್ರದ ನೈರ್ಮಲ್ಯದ ಕುರಿತು ಐತಿಹಾಸಿಕ ತೀರ್ಪು ನೀಡಿತ್ತು. ಇದು ಹೆಣ್ಣುಮಕ್ಕಳ ಬದುಕುವ ಹಕ್ಕು, ಘನತೆ, ಆರೋಗ್ಯ ಮತ್ತು ಶಿಕ್ಷಣದ ಅವಿಭಾಜ್ಯ ಅಂಗ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತ್ತು. ಸಂವಿಧಾನದ 21ನೇ ವಿಧಿಯಡಿ ಮಹಿಳೆಯರ ಆರೋಗ್ಯದ ಹಕ್ಕನ್ನು ರಕ್ಷಿಸುವುದು ಸರ್ಕಾರಗಳ ಕರ್ತವ್ಯ ಎಂದಿದ್ದ ನ್ಯಾಯಾಲಯ, ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್, ಪ್ರತ್ಯೇಕ ಶೌಚಾಲಯ ಮತ್ತು ಋತುಚಕ್ರದ ನೈರ್ಮಲ್ಯದ ಬಗ್ಗೆ ಜಾಗೃತಿ ಅಭಿಯಾನಗಳನ್ನು ಖಚಿತಪಡಿಸುವಂತೆ ಎಲ್ಲಾ ಸರ್ಕಾರಗಳಿಗೂ ಕಡ್ಡಾಯ ನಿರ್ದೇಶನ ನೀಡಿತ್ತು.
ಇದನ್ನೂ ಓದಿ : ಸುಪ್ರೀಂ ಕೋರ್ಟ್ ಆಡಳಿತದಲ್ಲಿ ಎಐ ಕ್ರಾಂತಿ : ಸಿಜೆಐ ಸೂರ್ಯಕಾಂತ್ ಮಹತ್ವದ ಹೆಜ್ಜೆ



















