ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತೊಮ್ಮೆ ಪ್ರಶ್ನಾರ್ಹವಾಗಿದೆ. 2012ರ ಭೀಕರ ‘ನಿರ್ಭಯಾ’ ಘಟನೆಯನ್ನು ನೆನಪಿಸುವಂತಹ ಹೀನ ಕೃತ್ಯವೊಂದು ಸೋಮವಾರ ರಾತ್ರಿ ನಡೆದಿದ್ದು, ನಿಂತಿದ್ದ ಸ್ಲೀಪರ್ ಬಸ್ನಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಈ ಸಂಬಂಧ ದೆಹಲಿ ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಗುರುವಾರ ಬಂಧಿಸಿದ್ದಾರೆ.
ಪೀತಾಮ್ಪುರದ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ ಮಂಗಳಪುರಿಯ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೇ 11ರ ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಸರಸ್ವತಿ ವಿಹಾರ್ ಬಸ್ ನಿಲ್ದಾಣದ ಬಳಿ ನಿಂತಿದ್ದ ಸ್ಲೀಪರ್ ಬಸ್ವೊಂದನ್ನು ಕಂಡು ಸಮಯ ಕೇಳಲು ಹೋಗಿದ್ದರು. ಈ ವೇಳೆ ಬಸ್ಸಿನ ಬಾಗಿಲ ಬಳಿ ನಿಂತಿದ್ದ ವ್ಯಕ್ತಿ ಮಹಿಳೆಯನ್ನು ಬಲವಂತವಾಗಿ ಬಸ್ಸಿನೊಳಗೆ ಎಳೆದುಕೊಂಡಿದ್ದಾನೆ. ಬಳಿಕ ಬಸ್ಸನ್ನು ನಾಂಗ್ಲೋಯ್ ಕಡೆಗೆ ಚಲಾಯಿಸಿಕೊಂಡು ಹೋಗಿ, ಅಲ್ಲಿ ಇಬ್ಬರು ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ.
ಪೊಲೀಸರಿಂದ ಬಸ್ ವಶಕ್ಕೆ
ವಿವಾಹಿತೆಯೂ ಹಾಗೂ ಮೂರು ಮಕ್ಕಳ ತಾಯಿಯೂ ಆಗಿರುವ ಸಂತ್ರಸ್ತೆಯ ದೂರನ್ನು ಆಧರಿಸಿ ದೆಹಲಿಯ ರಾಣಿ ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಘಟನೆಗೆ ಬಳಸಲಾದ ಬಸ್ಸನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ಪೂರ್ಣಗೊಂಡಿದ್ದು, ಪ್ರಕರಣದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಜಕೀಯ ವಾಕ್ಸಮರ :
ಈ ಘಟನೆಯು ದೆಹಲಿಯಲ್ಲಿ ಭಾರೀ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷವು (AAP) ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಟೀಕಿಸಿದೆ. “ದೆಹಲಿಯಲ್ಲಿ ಮತ್ತೊಂದು ನಿರ್ಭಯಾ ಮಾದರಿಯ ಘಟನೆ ನಡೆದಿದೆ. ಹೆಣ್ಣುಮಕ್ಕಳಿಗೆ ಶಾಲೆಗಳಲ್ಲೂ ಸುರಕ್ಷತೆ ಇಲ್ಲ, ಬಸ್ಸುಗಳಲ್ಲೂ ರಕ್ಷಣೆ ಇಲ್ಲ” ಎಂದು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಎಕ್ಸ್ (X) ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ಆಪ್ ಮುಖ್ಯಸ್ಥ ಸೌರಭ್ ಭಾರದ್ವಾಜ್ ಕೂಡ ಘಟನೆಯನ್ನು ಖಂಡಿಸಿದ್ದು, ಸಮಯ ಕೇಳಲು ಹೋದ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
2012ರಲ್ಲಿ ನಡೆದ ನಿರ್ಭಯಾ ಪ್ರಕರಣದ ಮಾದರಿಯಲ್ಲೇ ಈ ಘಟನೆ ನಡೆದಿರುವುದು ದೆಹಲಿ ನಿವಾಸಿಗಳಲ್ಲಿ ಮತ್ತೆ ಆತಂಕಕ್ಕೆ ದೂಡಿದೆ. ಅಂದು 23 ವರ್ಷದ ವಿದ್ಯಾರ್ಥಿನಿಯ ಮೇಲೆ ಚಲಿಸುವ ಬಸ್ನಲ್ಲಿ ನಡೆದ ದೌರ್ಜನ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಇದನ್ನೂ ಓದಿ : ನೀಟ್ ರದ್ದುಗೊಳಿಸಿ, 12ನೇ ತರಗತಿ ಅಂಕದ ಮೇಲೆ ಪ್ರವೇಶ ನೀಡಿ ; ಕೇಂದ್ರಕ್ಕೆ ತಮಿಳುನಾಡು ಸಿಎಂ ವಿಜಯ್ ಆಗ್ರಹ



















