ಬೆಂಗಳೂರು : ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್ ತಂಡದಿಂದ ಕೈಬಿಡಲ್ಪಟ್ಟಾಗ ತೀವ್ರ ನಿರಾಸೆ ಅನುಭವಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಅವರ ತಂದೆಯ ಅನಾರೋಗ್ಯ ಮತ್ತು ನಿಧನವು ಅವರ ದೃಷ್ಟಿಕೋನವನ್ನೇ ಸಂಪೂರ್ಣವಾಗಿ ಬದಲಾಯಿಸಿತು. ಈ ಬಗ್ಗೆ ಮೊದಲ ಬಾರಿಗೆ ಪಿಟಿಐ ಜೊತೆ ಮುಕ್ತವಾಗಿ ಮಾತನಾಡಿರುವ ಜಿತೇಶ್, ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಆ ಕಷ್ಟದ ಸಮಯದಲ್ಲಿ ತಮ್ಮ ತಂದೆಗೆ ತಮ್ಮ ಬೆಂಬಲದ ಅಗತ್ಯ ಹೆಚ್ಚಿತ್ತು ಎಂದು ಅತ್ಯಂತ ಭಾವುಕರಾಗಿ ನುಡಿದಿದ್ದಾರೆ.
ಇದೀಗ ಆ ನೋವಿನಿಂದ ಹೊರಬಂದಿರುವ ಅವರು, ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪರ ಕಣಕ್ಕಿಳಿಯಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ಪ್ರಕಟಿಸಿದಾಗ, ಅಂತಿಮ ಹದಿನೈದರ ಬಳಗದಿಂದ ಜಿತೇಶ್ ಶರ್ಮಾ ಹಾಗೂ ಯುವ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಕೈಬಿಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿತೇಶ್, “ತಂಡದಿಂದ ಹೊರಗುಳಿದ ಸುದ್ದಿ ಕೇಳಿದಾಗ ಸಹಜವಾಗಿಯೇ ನನಗೆ ಬೇಸರವಾಯಿತು. ನಾನೂ ಒಬ್ಬ ಮನುಷ್ಯ, ಹೀಗಾಗಿ ಆರಂಭದಲ್ಲಿ ದುಃಖವಾಗುವುದು ಸಹಜ. ಆದರೆ, ನನ್ನ ಕುಟುಂಬ ಹಾಗೂ ಸ್ನೇಹಿತರು ನನಗೆ ಅಪಾರ ಬೆಂಬಲ ನೀಡಿದರು. ದುರದೃಷ್ಟವಶಾತ್, ಅದೇ ಸಮಯದಲ್ಲಿ ನನ್ನ ತಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಫೆಬ್ರವರಿ 1ರಂದು ನಿಧನರಾದರು.
ಅವರ ಕೊನೆಯ ಏಳು ದಿನಗಳಲ್ಲಿ ನಾನು ಸಂಪೂರ್ಣವಾಗಿ ಅವರೊಂದಿಗಿದ್ದೆ. ವಿಶ್ವಕಪ್ಗಿಂತಲೂ ನನ್ನ ಅಪ್ಪನಿಗೆ ನನ್ನ ಅಗತ್ಯ ಹೆಚ್ಚಿತ್ತು ಎಂಬುದು ನನಗೆ ಆ ಕ್ಷಣದಲ್ಲಿ ಅರಿವಾಯಿತು. ಈ ಬಗ್ಗೆ ನನಗೆ ಈಗ ಯಾವುದೇ ಪಶ್ಚಾತ್ತಾಪವಿಲ್ಲ ಅಥವಾ ಯಾರ ಮೇಲೂ ಕೋಪವಿಲ್ಲ. ದೇವರ ದಯೆಯಿಂದ ಅವರ ಕೊನೆಯ ದಿನಗಳಲ್ಲಿ ನಾನು ಅವರ ಸೇವೆ ಮಾಡಲು ಸಾಧ್ಯವಾಯಿತು” ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸ್ಯಾಮ್ಸನ್ ಆಯ್ಕೆ
ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಸಂಜು ಸ್ಯಾಮ್ಸನ್ ಅವರನ್ನು ಪ್ರಮುಖ ಆಯ್ಕೆಯಾಗಿ ಪರಿಗಣಿಸಲಾಗಿತ್ತು. ಮತ್ತೊಂದೆಡೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಮೋಘ ಫಾರ್ಮ್ನಲ್ಲಿದ್ದ ಇಶಾನ್ ಕಿಶನ್ ಅವರನ್ನು ಅಗ್ರ ಕ್ರಮಾಂಕದ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಸೇರ್ಪಡೆಗೊಳಿಸಿದ್ದರು. ಸ್ಫೋಟಕ ಆಟಗಾರ ರಿಂಕು ಸಿಂಗ್ ಅವರಿಗೆ ಫಿನಿಶರ್ ಪಾತ್ರ ನೀಡಲು ಈ ತಂತ್ರಗಾರಿಕೆ ಮಾಡಲಾಗಿತ್ತು. ಈ ಕಾರಣದಿಂದಾಗಿ ಜಿತೇಶ್ ತಮ್ಮ ಸ್ಥಾನ ಕಳೆದುಕೊಳ್ಳಬೇಕಾಯಿತು. ಆದರೂ, ತಾವು ಮನೆಯಿಂದಲೇ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಿ ಆನಂದಿಸಿದ್ದಾಗಿ ಹೇಳಿರುವ ಜಿತೇಶ್, “ಮೈದಾನದಲ್ಲಿ ಆಡುವುದಕ್ಕಿಂತ ಮನೆಯಿಂದ ಟಿವಿ ಮುಂದೆ ಕುಳಿತು ಪಂದ್ಯ ನೋಡುವುದು ಹೆಚ್ಚು ಒತ್ತಡದಿಂದ ಕೂಡಿರುತ್ತದೆ. ನಮ್ಮ ತಂಡವು ಕೋಚ್ ಮತ್ತು ನಾಯಕನ ದೃಷ್ಟಿಕೋನವನ್ನು ಸಾಕಾರಗೊಳಿಸಿ, ಕಪ್ ಗೆದ್ದಿರುವುದು ನನಗೆ ಅತೀವ ಸಂತಸ ತಂದಿದೆ” ಎಂದು ಸಹ ಆಟಗಾರರ ಸಾಧನೆಯನ್ನು ಕೊಂಡಾಡಿದ್ದಾರೆ.
ಈ ವರ್ಷದ ಜನವರಿಯಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡಾ ಪರ ಆಡಿದ ನಂತರ ಜಿತೇಶ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. ಇದೀಗ 32 ವರ್ಷದ ಈ ಆಟಗಾರ, ಐಪಿಎಲ್ 2026ಕ್ಕಾಗಿ ಆರ್ಸಿಬಿ ತಂಡದೊಂದಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. “ನನ್ನ ಐಪಿಎಲ್ ಸಿದ್ಧತೆಗಳು ಅತ್ಯುತ್ತಮವಾಗಿ ನಡೆಯುತ್ತಿವೆ. ಇತ್ತೀಚೆಗಷ್ಟೇ ಒಂದು ಸಣ್ಣ ಕ್ಯಾಂಪ್ ಮುಕ್ತಾಯಗೊಂಡಿದ್ದು, ಎಲ್ಲ ಆಟಗಾರರು ಅತ್ಯುತ್ತಮ ಲಯದಲ್ಲಿದ್ದಾರೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಆರ್ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಜಿತೇಶ್ ನಿರ್ಣಾಯಕ ಪಾತ್ರ ವಹಿಸಿದ್ದರು. ಫಿನಿಶರ್ ಆಗಿ ಮಿಂಚಿದ್ದ ಅವರು ಕೇವಲ 11 ಇನ್ನಿಂಗ್ಸ್ಗಳಲ್ಲಿ 176.35ರ ಅಮೋಘ ಸ್ಟ್ರೈಕ್ ರೇಟ್ನಲ್ಲಿ 261 ರನ್ ಸಿಡಿಸಿ ಮಿಂಚಿದ್ದರು. ಈ ಬಾರಿಯ ಗುರಿಯ ಬಗ್ಗೆ ಮಾತನಾಡಿದ ಅವರು, “ಕಳೆದ ವರ್ಷ ಕಪ್ ಗೆದ್ದ ನಂತರ ನಮ್ಮ ಸಿಇಒ ಅವರು, ನಾವು ಈ ಬಾರಿ ಕಪ್ ಉಳಿಸಿಕೊಳ್ಳಲು (ಡಿಫೆಂಡ್) ಆಡುತ್ತಿಲ್ಲ, ಬದಲಾಗಿ ಮತ್ತೆ ಕಪ್ ಗೆಲ್ಲಲು (ಚೇಸ್) ಆಡುತ್ತಿದ್ದೇವೆ ಎಂದಿದ್ದರು. ಇದು ತಂಡದ ಆಕ್ರಮಣಕಾರಿ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.
ಐಪಿಎಲ್ ಆಡಳಿತ ಮಂಡಳಿಯು ಬುಧವಾರವಷ್ಟೇ 2026ರ ಐಪಿಎಲ್ ಟೂರ್ನಿಯ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ ಈ ಪಂದ್ಯಗಳು ಜರುಗಲಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಟೂರ್ನಿಯ ಉದ್ಘಾಟನಾ ದಿನವಾದ ಮಾರ್ಚ್ 28ರಂದು ತವರಿನ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುವ ಮೂಲಕ ತನ್ನ ಐಪಿಎಲ್ ಅಭಿಯಾನವನ್ನು ಅಧಿಕೃತವಾಗಿ ಆರಂಭಿಸಲಿದೆ.
ಇದನ್ನೂ ಓದಿ : ‘ಮ್ಯಾಂಚೆಸ್ಟರ್’ ತಂಡ ಸೇರಿದ ರಿಚಾ ಘೋಷ್.. ಸ್ಮೃತಿ ಮಂಧಾನ ಜೊತೆ ಮತ್ತೆ ಒಗ್ಗೂಡಿದ RCB ತಾರೆ!



















