ಮೈಸೂರು : ವೃದ್ಧೆಯೊಬ್ಬರನ್ನು ಕೊಲೆ ಮಾಡಿ, ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಮೃತದೇಹವನ್ನು ಹೂತು ಹಾಕಿ ಆರೋಪಿ ಪರಾರಿಯಾಗಿದ್ದ ಘಟನೆ ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣ ಇದೀಗ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.
ಗೌರಮ್ಮ (90) ಎಂಬ ವೃದ್ಧೆ ಗ್ರಾಮದ ಮನೆಯೊಂದರಲ್ಲಿ ವಾಸವಾಗಿದ್ದರು. ವೀರಭದ್ರ ಎಂಬಾತ ಗೌರಮ್ಮ ಜೊತೆ ಆತ್ಮೀಯವಾಗಿ ನಡೆದುಕೊಳ್ಳುತ್ತಾ, ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡಿ ಅವರ ವಿಶ್ವಾಸವನ್ನು ಗಳಿಸಿಕೊಂಡಿದ್ದ. ಗ್ರಾಮದವರಿಗೂ ಆತ ಕುಟುಂಬದವನಂತೆ ಕಾಣಿಸುತ್ತಿದ್ದ.
ಸುಮಾರು 15 ದಿನಗಳ ಹಿಂದೆ ಗೌರಮ್ಮ ಅವರ ಬ್ಯಾಂಕ್ ಖಾತೆಯಿಂದ 75 ಸಾವಿರ ರೂಪಾಯಿ ಹಣವನ್ನು ವೀರಭದ್ರ ಡ್ರಾ ಮಾಡಿಕೊಟ್ಟಿದ್ದ. ಬಳಿಕ ಎರಡು ದಿನಗಳಲ್ಲಿ ಹಣವನ್ನು ವಾಪಸ್ ನೀಡುತ್ತೇನೆ ಎಂದು ಹೇಳಿ ಗೌರಮ್ಮರಿಂದ ವೀರಭದ್ರ ಹಣ ಪಡೆದುಕೊಂಡಿದ್ದ ಎನ್ನಲಾಗಿದೆ. ಆದರೆ, ದಿನಗಳು ಕಳೆದರೂ ಹಣವನ್ನು ಮರಳಿ ನೀಡದೆ ಗೌರಮ್ಮನನ್ನು ಸತಾಯಿಸುತ್ತಿದ್ದ. ಒಂದು ವಾರದ ಬಳಿಕ ಗೌರಮ್ಮ ತಮ್ಮ ಹಣವನ್ನು ವಾಪಸ್ ಕೇಳಿದ್ದರು.
ಈ ವೇಳೆ ಗೌರಮ್ಮ ಒಬ್ಬರೇ ಮನೆಯಲ್ಲಿದ್ದ ಸಮಯವನ್ನು ಗಮನಿಸಿದ ವೀರಭದ್ರ ಮನೆಗೆ ಹೋಗಿದ್ದಾನೆ. ಹಣದ ವಿಚಾರವಾಗಿ ಮಾತುಕತೆ ನಡೆದ ವೇಳೆ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಂತೆ ಗೌರಮ್ಮ ಅವರ ಮೃತದೇಹವನ್ನು ಮನೆಯ ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹಾಕಿ ಮಣ್ಣು ಮುಚ್ಚಿದ್ದಾನೆ. ನಂತರ ಗ್ರಾಮದಿಂದ ಪರಾರಿಯಾಗಿದ್ದಾನೆ. ಈ ಘಟನೆ ನಡೆದ ನಂತರ ಗೌರಮ್ಮ ಹಲವು ದಿನಗಳಿಂದ ಕಾಣಿಸದೇ ಇದ್ದ ಕಾರಣ ಗ್ರಾಮಸ್ಥರು ಮತ್ತು ಕುಟುಂಬಸ್ಥರಿಗೆ ಅನುಮಾನ ಶುರುವಾಗಿದೆ.
ಗೌರಮ್ಮ 15 ದಿನಗಳಿಂದ ಕಾಣೆಯಾಗಿದ್ದ ಹಿನ್ನೆಲೆ ಅವರ ಮಕ್ಕಳು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ವೀರಭದ್ರ ಕೂಡ ಇದೇ ಅವಧಿಯಲ್ಲಿ ಗ್ರಾಮದಲ್ಲಿ ಕಾಣಿಸದೇ ಇದ್ದ ವಿಚಾರ ಗೊತ್ತಾಗಿದೆ. ಇದರಿಂದ ಪೊಲೀಸರ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ.
ಇದೀಗ ಪೊಲೀಸರು ವೀರಭದ್ರನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಗೌರಮ್ಮ ಅವರನ್ನು ಕೊಲೆ ಮಾಡಿ ಯುಜಿಡಿ ಗುಂಡಿಯಲ್ಲಿ ಹೂತು ಹಾಕಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಆರೋಪಿಯ ಮಾಹಿತಿ ಆಧಾರವಾಗಿ ಪೊಲೀಸರು ಯುಜಿಡಿ ಗುಂಡಿಯನ್ನು ತೆರವುಗೊಳಿಸಿ ಗೌರಮ್ಮ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಿದ್ದು, ಪ್ರಕರಣ ಸಂಬಂಧ ಪೊಲೀಸರು ಆರೋಪಿ ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಹೋಟೆಲ್ನಲ್ಲಿ ಭೀಕರ ಅಗ್ನಿ ಅವಘಡ – ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ!



















