ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಕೇವಲ 2 ದಿನಗಳು ಬಾಕಿ ಇರುವಂತೆಯೇ, ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಭದ್ರತೆ ಕುರಿತಂತೆ ಗುರುವಾರ ತಡರಾತ್ರಿ ಭಾರಿ ಹೈಡ್ರಾಮಾ ನಡೆದಿದೆ. ರಾಜಕೀಯ ಪಕ್ಷಗಳ ಅಧಿಕೃತ ಪ್ರತಿನಿಧಿಗಳ ಗೈರಿನಲ್ಲಿಯೇ ಸ್ಟ್ರಾಂಗ್ ರೂಮ್ಗಳನ್ನು ತೆರೆಯಲಾಗಿದೆ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ, ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಂಟೆಗಳ ಕಾಲ ಸ್ಟ್ರಾಂಗ್ ರೂಮ್ ಒಳಗೆ ಕುಳಿತು ಪರಿಶೀಲನೆ ನಡೆಸುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಾರೆ.

4 ಗಂಟೆಗಳ ಕಾಲ ಸ್ಟ್ರಾಂಗ್ ರೂಮ್ನಲ್ಲಿ ಸಿಎಂ
ರಾಜ್ಯದಲ್ಲಿ ಎರಡನೇ ಹಾಗೂ ಅಂತಿಮ ಹಂತದ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಈ ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಭವಾನಿಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವಾಗಿರುವ ಕೋಲ್ಕತ್ತಾದ ಸಖಾವತ್ ಮೆಮೋರಿಯಲ್ ಶಾಲೆಗೆ ಗುರುವಾರ ಸಂಜೆ ತಮ್ಮ ಚುನಾವಣಾ ಏಜೆಂಟ್ ಜೊತೆ ಆಗಮಿಸಿದ ಮಮತಾ ಬ್ಯಾನರ್ಜಿ, ಭದ್ರತಾ ಲೋಪದ ಶಂಕೆ ವ್ಯಕ್ತಪಡಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ಸ್ಟ್ರಾಂಗ್ ರೂಮ್ ಒಳಗೆಯೇ ಇದ್ದರು.
ಮಧ್ಯರಾತ್ರಿ 12:07ರ ಸುಮಾರಿಗೆ ಹೊರಬಂದ ಅವರು, ಮತ ಎಣಿಕೆ ಪ್ರಕ್ರಿಯೆಯನ್ನು ತಿರುಚುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಗುಡುಗಿದರು. ಅಭ್ಯರ್ಥಿ ಅಥವಾ ಏಜೆಂಟ್ಗೆ ಒಳಗೆ ಉಳಿಯಲು ಅವಕಾಶವಿದೆ. ಜನರ ಮತಗಳನ್ನು ರಕ್ಷಿಸುವ ಉದ್ದೇಶದಿಂದ ದೂರು ಬಂದ ತಕ್ಷಣ ನಾನು ಇಲ್ಲಿಗೆ ಧಾವಿಸಿದೆ. ಆರಂಭದಲ್ಲಿ ಕೇಂದ್ರ ಪಡೆಗಳು ನನಗೆ ಪ್ರವೇಶ ನೀಡಲಿಲ್ಲ. ಪಾರದರ್ಶಕತೆಗಾಗಿ ಮಾಧ್ಯಮಗಳಿಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆಯೂ ನಾನು ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.
ಬೀದಿಗಿಳಿದು ಟಿಎಂಸಿ ನಾಯಕರ ಪ್ರತಿಭಟನೆ
ಇನ್ನೊಂದೆಡೆ, ಇವಿಎಂ ತಿರುಚುವಿಕೆ ಕುರಿತು ಎಚ್ಚರಿಕೆ ವಹಿಸುವಂತೆ ಕಾರ್ಯಕರ್ತರಿಗೆ ಸಿಎಂ ಮಮತಾ ವಿಡಿಯೋ ಸಂದೇಶ ರವಾನಿಸಿದ ಬೆನ್ನಲ್ಲೇ, ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿರುವ ಸ್ಟ್ರಾಂಗ್ ರೂಮ್ ಹೊರಗೆ ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರು ಧರಣಿ ಆರಂಭಿಸಿದ್ದಾರೆ. ಉತ್ತರ ಕೋಲ್ಕತ್ತಾದ ಹಲವು ಕ್ಷೇತ್ರಗಳ ಇವಿಎಂಗಳನ್ನು ಇಲ್ಲಿರಿಸಲಾಗಿದ್ದು, ಬಂಗಾಳದ ಸಚಿವೆ ಶಶಿ ಪಂಜಾ ಮತ್ತು ಟಿಎಂಸಿ ವಕ್ತಾರ ಕುನಾಲ್ ಘೋಷ್ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಮಧ್ಯಾಹ್ನ 3.30ರವರೆಗೆ ಸ್ಟ್ರಾಂಗ್ ರೂಮ್ ಹೊರಗೆ ನಮ್ಮ ಕಾರ್ಯಕರ್ತರಿದ್ದರು. ಆದರೆ ಸಂಜೆ 4 ಗಂಟೆಗೆ ಸ್ಟ್ರಾಂಗ್ ರೂಮ್ ಅನ್ನು ಮತ್ತೆ ತೆರೆಯುವುದಾಗಿ ದಿಢೀರನೆ ಇಮೇಲ್ ಮೂಲಕ ತಿಳಿಸಲಾಯಿತು. ನಾವು ಇಲ್ಲಿಗೆ ಧಾವಿಸಿದರೆ ನಮಗೆ ಪ್ರವೇಶ ನೀಡುತ್ತಿಲ್ಲ, ಬದಲಾಗಿ ಬಿಜೆಪಿಯವರನ್ನು ಆಹ್ವಾನಿಸಲಾಗುತ್ತಿದೆ ಎಂದು ಕುನಾಲ್ ಘೋಷ್ ಆರೋಪಿಸಿದರು. ಸ್ಟ್ರಾಂಗ್ ರೂಮ್ನಂತಹ ಅತಿ ಸೂಕ್ಷ್ಮ ಪ್ರದೇಶವನ್ನು ತೆರೆಯುವಾಗ ಎಲ್ಲಾ ರಾಜಕೀಯ ಪಕ್ಷಗಳಿಗೂ ಏಕೆ ಮಾಹಿತಿ ನೀಡಿಲ್ಲ ಎಂದು ಅಭ್ಯರ್ಥಿಯೂ ಆಗಿರುವ ಶಶಿ ಪಂಜಾ ಆಕ್ರೋಶ ವ್ಯಕ್ತಪಡಿಸಿದರು.
ಆರೋಪ ತಳ್ಳಿಹಾಕಿದ ಆಯೋಗ, ಬಿಜೆಪಿ ತಿರುಗೇಟು
ಟಿಎಂಸಿಯ ಈ ಎಲ್ಲಾ ಆರೋಪಗಳನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿದೆ. ನಿಯಮಾನುಸಾರವೇ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಗಿದ್ದು, ಸ್ಟ್ರಾಂಗ್ ರೂಮ್ಗಳು ಸಂಪೂರ್ಣ ಸುರಕ್ಷಿತವಾಗಿವೆ ಮತ್ತು ಸೀಲ್ ಆಗಿವೆ. ಅಂಚೆ ಮತಪತ್ರಗಳಿಗಾಗಿಯೇ ಪ್ರತ್ಯೇಕ ಸ್ಟ್ರಾಂಗ್ ರೂಮ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲವೂ ಸುಭದ್ರವಾಗಿದೆ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಇನ್ನು, ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿಗಳು ಯಾವುದೇ ಅಕ್ರಮ ಎಸಗದಂತೆ ಅವರ ಮೇಲೆ ನನ್ನ ಚುನಾವಣಾ ಏಜೆಂಟ್ ತೀವ್ರ ನಿಗಾ ಇರಿಸಿದ್ದರು. ಅವರು ಎಷ್ಟೇ ಪ್ರಯತ್ನಪಟ್ಟರೂ ನಿಯಮ ಮೀರಿ ಏನನ್ನೂ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಈ ಘಟನೆಯನ್ನು ಟೀಕಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಮಮತಾ ಬ್ಯಾನರ್ಜಿ ಅವರ ಈ ನಾಟಕವೇ ಪಶ್ಚಿಮ ಬಂಗಾಳದ ಸ್ಪಷ್ಟ ‘ಎಕ್ಸಿಟ್ ಪೋಲ್’ ಆಗಿದೆ. ಸೋಲಿನ ಭೀತಿಯಿಂದ ಹುಟ್ಟಿಕೊಂಡಿರುವ ಅವರ ಹತಾಶೆ ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಮೇ 4ರಂದು ಬಿಗಿ ಭದ್ರತೆಯ ನಡುವೆ 294 ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ : ಗೃಹಬಳಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್.. ಇಂದಿನಿಂದಲೇ ಜಾರಿ!


















