ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಹೀನಾ ಸೋಲು ಕಂಡ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (TMC) ನಾಯಕಿ ಮಮತಾ ಬ್ಯಾನರ್ಜಿ ಅವರು ಮತ್ತೆ ಕರಿಕೋಟು ಧರಿಸಿದ್ದಾರೆ. ಇಂದು(ಗುರುವಾರ) ಕಲ್ಕತ್ತಾ ಹೈಕೋರ್ಟ್ನಲ್ಲಿ ವಕೀಲರ ಕಪ್ಪು ಗೌನ್ ಧರಿಸಿ ಕಾಣಿಸಿಕೊಳ್ಳುವ ಮೂಲಕ ದೀದಿ ಎಲ್ಲರ ಗಮನ ಸೆಳೆದಿದ್ದಾರೆ.
ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ವರದಿಯಾದ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಪಕ್ಷದ ಪರವಾಗಿ ವಾದ ಮಂಡಿಸಿದ್ದಾರೆ. 15 ವರ್ಷಗಳ ಟಿಎಂಸಿ ಆಡಳಿತಕ್ಕೆ ತೆರೆ ಬಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ವಿವಿಧೆಡೆ ರಾಜಕೀಯ ಕಾರ್ಯಕರ್ತರ ಮೇಲೆ ದಾಳಿ ಮತ್ತು ಪಕ್ಷದ ಕಚೇರಿಗಳ ಧ್ವಂಸದಂತಹ ಘಟನೆಗಳು ನಡೆದಿದ್ದವು. ಈ ಹಿಂಸಾಚಾರದ ಕುರಿತು ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರ ಪುತ್ರ ಶೀರ್ಷಣ್ಯ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗಾಗಿ ಮಮತಾ ಅವರು ನ್ಯಾಯಾಲಯಕ್ಕೆ ಆಗಮಿಸಿದ್ದರು. ಮೇ 4 ರಂದು ಫಲಿತಾಂಶ ಬಂದ ನಂತರ ಬಂಗಾಳದ ಹಲವು ಜಿಲ್ಲೆಗಳಲ್ಲಿ ಬಾಂಬ್ ದಾಳಿ ಮತ್ತು ಸೇಡಿನ ದಾಳಿಗಳು ವರದಿಯಾಗಿದ್ದು, ಬಿಜೆಪಿ ಮತ್ತು ಟಿಎಂಸಿ ಪರಸ್ಪರ ಆರೋಪಗಳನ್ನು ಮಾಡಿಕೊಳ್ಳುತ್ತಿವೆ.
ಟಿಎಂಸಿ ಸಮರ್ಥನೆ
ಈ ಕುರಿತು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ತೃಣಮೂಲ ಕಾಂಗ್ರೆಸ್, ಮಮತಾ ಬ್ಯಾನರ್ಜಿ ಅವರ ಈ ನಡವಳಿಕೆಯನ್ನು ಶ್ಲಾಘಿಸಿದೆ. “ಬಂಗಾಳದ ಜನರು ಸಂಕಷ್ಟದಲ್ಲಿರುವಾಗ ಅವರು ಎಂದಿಗೂ ಕೈಬಿಡುವುದಿಲ್ಲ. ಸತ್ಯ, ನ್ಯಾಯ ಮತ್ತು ಸಾಂವಿಧಾನಿಕ ಮೌಲ್ಯಗಳಿಗಾಗಿ ಅವರು ಈ ಹೋರಾಟ ನಡೆಸುತ್ತಿದ್ದಾರೆ. ದ್ವೇಷದ ರಾಜಕಾರಣದ ವಿರುದ್ಧ ಅವರು ತೋರುತ್ತಿರುವ ಈ ಧೈರ್ಯವು ಅವರನ್ನು ದೇಶದ ಅದ್ವಿತೀಯ ನಾಯಕಿಯನ್ನಾಗಿ ಮಾಡಿದೆ” ಎಂದು ಪಕ್ಷ ಹೇಳಿಕೊಂಡಿದೆ.
ರಾಜಕೀಯ ಪ್ರಕ್ಷುಬ್ಧತೆ
ರಾಜ್ಯದಲ್ಲಿ ಅಧಿಕಾರ ಬದಲಾವಣೆಯ ನಂತರ ರಾಜಕೀಯ ಸ್ಥಿತಿ ತೀವ್ರ ಉದ್ವಿಗ್ನಗೊಂಡಿದೆ. ಮೇ 6 ರಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಆಪ್ತ ಚಂದ್ರನಾಥ್ ರಥ್ ಅವರ ಹತ್ಯೆಯಾದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಈ ಐತಿಹಾಸಿಕ ಸೋಲಿನ ನಂತರ ತೃಣಮೂಲ ಕಾಂಗ್ರೆಸ್ ಪಕ್ಷದ ಒಳಗೂ ಆಂತರಿಕ ಕಲಹಗಳು ಮತ್ತು ಟೀಕೆಗಳು ವ್ಯಕ್ತವಾಗುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಸ್ವತಃ ಮಮತಾ ಬ್ಯಾನರ್ಜಿ ಅವರೇ ವಕೀಲರ ಉಡುಪು ಧರಿಸಿ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ : ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ ; 10 ದಿನಗಳ ಕಾಯುವಿಕೆಗೆ ಕೊನೆಗೂ ತೆರೆ!



















