ಉಡುಪಿ : ಆನ್ಲೈನ್ ಮೂಲಕ ಪರಿಚಯವಾದ ಲಂಡನ್ ಮಹಿಳೆಯನ್ನು ನಂಬಿ ಪಾಂಡು ಎಂಬ ವ್ಯಕ್ತಿ ಬರೊಬ್ಬರಿ 1.13 ಲಕ್ಷ ರೂ. ಮೌಲ್ಯದ ಹಣ ಕಳೆದುಕೊಂಡು ಪಂಗನಾಮ ಹಾಕಿಸಿಕೊಂಡ ಘಟನೆ ಉಡುಪಿ ಜಿಲ್ಲೆಯಲ್ಲಿ ಕಂಡುಬಂದಿದೆ.
ಮಂಗಳೂರಿನ ಲೇಡಿಹಿಲ್ನಲ್ಲಿ ಶೆಫ್ ಆಗಿ ಕೆಲಸ ಮಾಡುವ ಪಾಂಡು ಕರಿಯಪ್ಪ ಪೂಜಾರಿ ಎಂಬುವರಿಗೆ ವಾಟ್ಸಪ್ ಮೂಲಕ ಏಮಿಲ್ಡಾ ವಿಲಿಯಂ ಎಂಬುವರು ಪರಿಚಯವಾಗಿದ್ದು, ತಾನು ಲಂಡನ್ ನಿವಾಸಿ ಎಂದು ಆಕೆ ತಿಳಿಸಿದ್ದಾಳೆ.ಏ.7ರಂದು ಏಮಿಲ್ಡಾ ವಿಲಿಯಂ, ಪಾಂಡುಗೆ ಲಂಡನ್ನಿಂದ ದೆಹಲಿಗೆ ಬರುವ ವಿಮಾನದ ಟಿಕೆಟ್ನ್ನು ವಾಟ್ಸಾಪ್ನಲ್ಲಿ ಕಳುಹಿಸಿದ್ದಳು. ಏ.8ರಂದು ಪಾಂಡುಗೆ ಮಹಿಳೆಯೊಬ್ಬರು ಕರೆ ಮಾಡಿ, ನಿಮ್ಮ ಸ್ನೇಹಿತೆ ಏಮಿಲ್ಲಾ ವಿಲಿಯಂ ದೆಹಲಿ ವಿಮಾನ ನಿಲ್ದಾಣದಲ್ಲಿ 5 ಕೋಟಿ ಡಿಮಾಂಡ್ ಡ್ರಾಫ್ಟ್ ಹಾಗೂ ಅಧಿಕ ವಸ್ತುಗಳನ್ನು ಹೊಂದಿದ್ದು, ಈ ಸಂಬಂಧ ನೀವು ಕೂಡಲೇ 70,000ರೂ. ಹಣವನ್ನು ಪಾವತಿಸುವಂತೆ ತಿಳಿಸಿದ್ದಳು.
ಆನಂತರ ಏಮಿಲ್ಡಾ ವಿಲಿಯಂ ಪಾಂಡು ಜೊತೆ ಅಳುತ್ತಾ ಮಾತನಾಡಿದ್ದು,ಇದನ್ನು ನಂಬಿದ ಪಾಂಡು ವಿವಿಧ ಹಂತಗಳಲ್ಲಿ ಒಟ್ಟು 1,13,300 ರೂ. ಹಣವನ್ನು ಸ್ಕ್ಯಾನರ್ ಮೂಲಕ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿದ್ದಾರೆ ಎಂದು ದೂರಲಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಅರ್ಥಪೂರ್ಣ ಅಂಬೇಡ್ಕರ್ ಜಯಂತಿ.. ಕರ್ನಾಟಕ ದಸಂಸಕ್ಕೆ ಭೀಮ ಘರ್ಜನೆ ಸಾಥ್


















