ನವದೆಹಲಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಬುಧವಾರ ತಡರಾತ್ರಿ ಭದ್ರತಾ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ದಿಢೀರ್ ಭೀಕರ ಸಂಘರ್ಷ ಏರ್ಪಟ್ಟಿದೆ. ಉದ್ವಿಗ್ನ ಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದ್ದಾರೆ. ಈ ಹಿಂಸಾತ್ಮಕ ಘಟನೆಯಲ್ಲಿ ಇಬ್ಬರು ಎಸಿಪಿ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಕನಿಷ್ಠ ಆರು ಮಂದಿ ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳದ ದೃಶ್ಯಾವಳಿಗಳನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ಉದ್ರಿಕ್ತ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಕೆಲವು ಪ್ರತಿಭಟನಾಕಾರರು ಗುಂಪನ್ನು ಸಮಾಧಾನಪಡಿಸಲು ಮತ್ತು ತಡೆಯಲು ಯತ್ನಿಸಿದರಾದರೂ, ಪರಿಸ್ಥಿತಿ ಕೈಮೀರಿ ಹೋಗಿತ್ತು. ಕನಿಷ್ಠ ಒಬ್ಬ ಭದ್ರತಾ ಸಿಬ್ಬಂದಿಯನ್ನು ಪ್ರತಿಭಟನಾಕಾರರ ಗುಂಪು ಸುತ್ತುವರಿದು ಹಿಗ್ಗಾಮುಗ್ಗಾ ಥಳಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಹಿಂಸಾಚಾರದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಪ್ರದೇಶದಲ್ಲಿ ಇಂಟರ್ನೆಟ್ ಜ್ಯಾಮರ್ಗಳನ್ನು ಅಳವಡಿಸಲಾಗಿದ್ದು, ಭದ್ರತೆಯನ್ನು ತೀವ್ರಗೊಳಿಸಲಾಗಿದೆ.
ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ದಾಖಲು
ಸಂಘರ್ಷದಲ್ಲಿ ಗಾಯಗೊಂಡ ಎಸಿಪಿ ವಿವೇಕ್ ಭಗತ್ ಮತ್ತು ಎಸಿಪಿ ಜೈ ಪ್ರಕಾಶ್ ಅವರನ್ನು ತಕ್ಷಣವೇ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ವರದಿಗಳ ಪ್ರಕಾರ, ಎಸಿಪಿ ಭಗತ್ ಅವರ ಕೈಗಳು, ಕಾಲುಗಳು ಹಾಗೂ ಹೆಗಲಿಗೆ ತೀವ್ರ ಏಟು ಬಿದ್ದಿದ್ದು, ತಲೆಯ ಹಿಂಭಾಗದಲ್ಲಿ ಬಾಪು ಬಂದಿದೆ.
ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಗಾಯಾಳು ಎಸಿಪಿ ಜೈ ಪ್ರಕಾಶ್, “ನಾವು ಜಂತರ್ ಮಂತರ್ನಲ್ಲಿ ಕರ್ತವ್ಯದಲ್ಲಿದ್ದಾಗ ಕೆಲವು ಪ್ರತಿಭಟನಾಕಾರರು ದಿಢೀರನೆ ಪಾರ್ಲಿಮೆಂಟ್ ಸ್ಟ್ರೀಟ್ ಕಡೆಗೆ ನುಗ್ಗಲು ಯತ್ನಿಸಿದರು. ಬ್ಯಾರಿಕೇಡ್ಗಳನ್ನು ಹಾಕಿ, ಮಾನವ ಸರಪಳಿ ರಚಿಸಿ ಅವರನ್ನು ಸಮಾಧಾನಪಡಿಸಿ ತಡೆಯಲು ನಾವು ಪ್ರಯತ್ನಿಸಿದೆವು. ಆದರೆ, ಗುಂಪಿನಲ್ಲಿದ್ದ ಕೆಲವರು ಇದ್ದಕ್ಕಿದ್ದಂತೆ ಪ್ಲಾಸ್ಟಿಕ್ ವಾಟರ್ ಬಾಟಲಿ ಹಾಗೂ ಕಲ್ಲುಗಳನ್ನು ತೂರಲು ಪ್ರಾರಂಭಿಸಿದರು. ತೂರಿಬಂದ ಕಲ್ಲೊಂದು ನನ್ನ ಹಣೆಗೆ ಬಲವಾಗಿ ತಾಗಿದ್ದು, ಸಣ್ಣ ಪ್ರಮಾಣದಲ್ಲಿ ಮೂಳೆ ಮುರಿತ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ” ಎಂದು ವಿವರಿಸಿದ್ದಾರೆ.
ಹೆಚ್ಚಿದ ಆರೋಪ-ಪ್ರತ್ಯಾರೋಪ
ಕಳೆದ ಸೋಮವಾರ ಸಂಸತ್ ಭವನದತ್ತ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ತಡೆದಾಗಿನಿಂದಲೂ ದೆಹಲಿಯಲ್ಲಿ ವಾತಾವರಣ ತೀವ್ರ ಹದಗೆಟ್ಟಿದೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ನಡಸಿದ ಲಾಠಿಚಾರ್ಜ್ ಹಾಗೂ ದೌರ್ಜನ್ಯದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಆದರೆ, ಈ ಆರೋಪಗಳನ್ನು ನಿರಾಕರಿಸಿರುವ ಪೊಲೀಸರು, ತಾವು ಸಂಪೂರ್ಣ ಸಂಯಮದಿಂದ ವರ್ತಿಸಿದ್ದೇವೆ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡಲು ಮಾತ್ರ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆಯಲ್ಲಿ ತಮ್ಮ ಕಡೆಯ 100ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಘಟನಾ ಸ್ಥಳದಲ್ಲಿ ಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ : ಪರೀಕ್ಷಾ ಅಕ್ರಮ ತನಿಖೆಗೆ ‘ತ್ವರಿತಗತಿ ನ್ಯಾಯಾಲಯ’ ಸ್ಥಾಪನೆ : ಪ್ರಧಾನಿ ಮೋದಿ ಘೋಷಣೆ



















