ಟೊರೊಂಟೋ: ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಮಾರ್ಕ್ ಕಾರ್ನೆ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿರುವ ಕಾರಣ ಪರಿಸ್ಥಿತಿಯು ಜಸ್ಟಿನ್ ಟ್ರುಡ್ಯೂ ಸರ್ಕಾರಕ್ಕಿಂತ ಭಿನ್ನವಾಗಬಹುದೇ ಎಂಬ ನಿರೀಕ್ಷೆ ಹುಟ್ಟಿರುವಂತೆಯೇ, ಕೆನಡಾದ ಟೊರೊಂಟೊದ ಮಾಲ್ಟನ್ ಗುರುದ್ವಾರದಲ್ಲಿ ಭಾನುವಾರ ಹಿಂದೂ ವಿರೋಧಿ ಮೆರವಣಿಗೆ ನಡೆದಿದೆ. ಇದು ಕಾರ್ನೆ ಸರ್ಕಾರದ ಅವಧಿಯಲ್ಲೂ ಖಲಿಸ್ತಾನಿ(Canada Khalistan)ಗಳ ಅಟ್ಟಹಾಸ ಮುಂದುವರಿಯಲಿದೆಯೇ ಎಂಬ ಆತಂಕವನ್ನು ಹುಟ್ಟುಹಾಕಿದೆ.
ಮಾಲ್ಟನ್ ಗುರುದ್ವಾರದಲ್ಲಿ ಖಲಿಸ್ತಾನಿ ಪರ ಗುಂಪು ಭಾರೀ ಪ್ರತಿಭಟನೆಯನ್ನು ನಡೆಸಿದ್ದು, ಹಿಂದೂ ಸಮುದಾಯದ ಜನರನ್ನು ಭಾರತಕ್ಕೆ ಗಡೀಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಪ್ರತಿಭಟನೆಯನ್ನು ದೇಶದ ಖಲಿಸ್ತಾನಿ ಶಕ್ತಿಗಳು ಆಯೋಜಿಸಿದ್ದು, ಅದರ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಗಳನ್ನೂ ಖಲಿಸ್ತಾನಿಗಳು ಈ ಪ್ರತಿಭಟನೆ ವೇಳೆ ಮೆರವಣಿಗೆ ಮಾಡಿದ್ದಾರೆ.
ಸಿಖ್ ಗುರುದ್ವಾರ ಮತ್ತು ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿ ಪರ ಬರಹಗಳನ್ನು ಗೀಚಿ ವಿರೂಪಗೊಳಿಸಿದ ಘಟನೆಗಳ ಬೆನ್ನಲ್ಲೇ ಈ ಪ್ರತಿಭಟನೆ ನಡೆದಿದೆ.
ಇದೇ ವೇಳೆ, “ಟ್ರಿನಿಡಾಡ್, ಗಯಾನಾ, ಸುರಿನಾಮ್, ಜಮೈಕಾ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್, ಮಲೇಷ್ಯಾ, ಶ್ರೀಲಂಕಾ, ಸಿಂಗಾಪುರ್, ಕೀನ್ಯಾ ಮತ್ತು ಅದರಾಚೆ ಹರಡಿರುವ ಸುಮಾರು 8 ಲಕ್ಷ ಹಿಂದೂಗಳನ್ನು “ಹಿಂದೂಸ್ತಾನಕ್ಕೆ” ಗಡೀಪಾರು ಮಾಡಬೇಕೆಂದು ಮಾಲ್ಟನ್ ಗುರುದ್ವಾರದ (ಟೊರೊಂಟೊ) ಕೆ-ಗ್ಯಾಂಗ್ ಒತ್ತಾಯಿಸಿದೆ. ಇದೊಂದು ನಾಚಿಕೆಗೇಡಿನ ಸಂಗತಿ.
ಇದು ಭಾರತ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲ. ಇದು ಕೆನಡಾದಲ್ಲಿ ಹಲವು ದಾಳಿಗಳನ್ನು ನಡೆಸಿ ಕುಖ್ಯಾತವಾಗಿರುವ ಖಲಿಸ್ತಾನಿ ಭಯೋತ್ಪಾದಕ ಗುಂಪಿನ ಹಿಂದೂ ವಿರೋಧಿ ದ್ವೇಷವಾಗಿದೆ ಎಂದು ಶಾನ್ ಬಿಂದಾ ಎಂಬವರು ಟ್ವೀಟ್ ಮಾಡಿದ್ದಾರೆ. ಜತೆಗೆ ಅದಕ್ಕೆ #KhalistaniTerrorism” ಎಂಬ ಹ್ಯಾಷ್ ಟ್ಯಾಗ್ ಕೂಡ ಹಾಕಿದ್ದಾರೆ. ಈ ಟ್ವೀಟ್ ಬಗ್ಗೆಯೂ ಪರ-ವಿರೋಧ ಚರ್ಚೆ ಆರಂಭವಾಗಿದೆ.
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ ಮತ್ತು ಆಡಳಿತಾರೂಢ ಲಿಬರಲ್ ಪಾರ್ಟಿ ರಾಷ್ಟ್ರೀಯ ಚುನಾವಣೆಯಲ್ಲಿ ಗೆದ್ದ ಕೆಲವೇ ದಿನಗಳ ನಂತರ ಟೊರೊಂಟೊದಲ್ಲಿ ಹಿಂದೂ ವಿರೋಧಿ ಮೆರವಣಿಗೆ ನಡೆದಿದೆ. ಕಾರ್ನೆ ಹೊಸ ಜನಾದೇಶವನ್ನು ಪಡೆಯಲು ಸಂಸತ್ತನ್ನು ವಿಸರ್ಜಿಸಿದ ಕಾರಣ ಚುನಾವಣೆಯನ್ನು ಅವಧಿಪೂರ್ಣವಾಗಿ ನಡೆಸಲಾಗಿತ್ತು. ತಮ್ಮ ಪಕ್ಷದೊಳಗಿನ ಬೆಂಬಲವನ್ನು ಕಳೆದುಕೊಂಡ ನಂತರ ತಮ್ಮ ಅಧಿಕಾರಾವಧಿಯ ಕೊನೆಯಲ್ಲಿ ಅಧಿಕಾರದಿಂದ ಕೆಳಗಿಳಿದ ಜಸ್ಟಿನ್ ಟ್ರುಡ್ಯೂ ಅವರ ಸ್ಥಾನಕ್ಕೆ ಕಾರ್ನೆ ನೇಮಕಗೊಂಡಿದ್ದರು. ಈ ಚುನಾವಣೆಯಲ್ಲಿ ಕಾರ್ನೆ ಅವರಿಗೆ ಗೆಲುವು ದೊರೆತಿದ್ದು, ಅವರು ಪ್ರಧಾನಿಯಾಗಿ ಮುಂದುವರಿದಿದ್ದಾರೆ.



















