ರಾಮನಗರ : ರಾಮನಗರ ಜಿಲ್ಲೆಯ ಬಿಡದಿ ಟೌನ್ಶಿಪ್ ಯೋಜನೆ ವಿಚಾರ ದಿನದಿಂದ ದಿನಕ್ಕೆ ರಾಜಕೀಯ ಜಟಾಪಟಿಗೆ ಕಾರಣವಾಗುತ್ತಿದೆ. ಯೋಜನೆ ವಿರೋಧಿಸಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿರುವ ನಡುವೆಯೇ, ಯೋಜನೆ ಪರ ಇರುವವರಿಂದ ಕೌಂಟರ್ ಫ್ಲೆಕ್ಸ್ಗಳು ಅಳವಡಿಕೆಯಾಗಿವೆ.
ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಸಾಗುವ ಮಾರ್ಗದಲ್ಲಿರುವ ಅಂಚಿಪುರ ಕಾಲೋನಿ ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿಗರು ಹಾಗೂ ಯೋಜನೆ ಪರ ಹೋರಾಟಗಾರರು ಫ್ಲೆಕ್ಸ್ಗಳನ್ನು ಅಳವಡಿಸಿ, ಕೌಂಟರ್ ಕೊಟ್ಟಿದ್ದಾರೆ. “ನಮ್ಮ ಭೂಮಿ, ನಮ್ಮ ಹಕ್ಕು”, “ಯೋಜನೆಗೆ ಭೂಮಿ ನೀಡಲು ನಾವು ಸಿದ್ಧ”, “ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಭಿವೃದ್ಧಿ ಯೋಜನೆಗೆ ಅಡ್ಡಿಪಡಿಸಬೇಡಿ” ಎಂಬ ಸಂದೇಶಗಳಿರುವ ಫ್ಲೆಕ್ಸ್ಗಳು ಗಮನ ಸೆಳೆಯುತ್ತಿವೆ.
ಬಿಡದಿ ಟೌನ್ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಜೆಡಿಎಸ್ಗೆ ಇದು ನೇರ ಕೌಂಟರ್ ಎನ್ನಲಾಗುತ್ತಿದ್ದು, ಪಾದಯಾತ್ರೆಗೂ ಮುನ್ನವೇ ರಾಜಕೀಯ ವಾತಾವರಣ ಮತ್ತಷ್ಟು ಕಾವೇರಿದೆ.
ಒಂದು ಕಡೆ ಜೆಡಿಎಸ್ ಯೋಜನೆ ವಿರುದ್ಧ ಹೋರಾಟ ತೀವ್ರಗೊಳಿಸುತ್ತಿದ್ದರೆ, ಮತ್ತೊಂದು ಕಡೆ ಸ್ಥಳೀಯರ ಒಂದು ವಲಯ ಯೋಜನೆ ಪರ ನಿಂತು ಬೆಂಬಲ ಸೂಚಿಸುತ್ತಿರುವುದು ಬಿಡದಿ ಟೌನ್ಶಿಪ್ ವಿವಾದವನ್ನು ಮತ್ತಷ್ಟು ತಾರಕಕ್ಕೇರಿಸಿದೆ. ಇದೀಗ ಈ ರಾಜಕೀಯ ಕದನ ಯಾವ ದಿಕ್ಕಿಗೆ ಸಾಗಲಿದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.
ಇದನ್ನೂ ಓದಿ : ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷರಾಗಿ BHK ಕುಮಾರ್ ಖಾರ್ವಿ ಆಯ್ಕೆ



















