ಬೆಂಗಳೂರು : ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ೧೯೯೨ರ ವಿಶ್ವಕಪ್ ವಿಜೇತ ತಂಡದ ನಾಯಕ ಇಮ್ರಾನ್ ಖಾನ್ ಅವರು ಪ್ರಸ್ತುತ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಅವರ ಬಿಡುಗಡೆಗೆ ಪಾಕಿಸ್ತಾನದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಭಾವುಕರಾಗಿ ಮನವಿ ಮಾಡಿದ್ದಾರೆ. ಇಮ್ರಾನ್ ಖಾನ್ ಅವರ ಪ್ರಾಮಾಣಿಕತೆಯನ್ನು ಸಮರ್ಥಿಸಿಕೊಂಡಿರುವ ಅವರು, ತಮ್ಮ ಮಾಜಿ ಸಹ ಆಟಗಾರನನ್ನು ಈ ಕೂಡಲೇ ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ 2023ರಿಂದ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಆರೋಗ್ಯ ಮತ್ತು ಜೈಲಿನಲ್ಲಿ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿರುವ ಬೆನ್ನಲ್ಲೇ ಮಿಯಾಂದಾದ್ ಅವರ ಈ ಹೇಳಿಕೆ ಹೊರಬಿದ್ದಿದೆ.
ಇತ್ತೀಚೆಗೆ ‘ನ್ಯರೇಟಿವ್’ ಎಂಬ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜಾವೇದ್ ಮಿಯಾಂದಾದ್ ಅವರು ಇಮ್ರಾನ್ ಖಾನ್ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದರು. ಇಮ್ರಾನ್ ಖಾನ್ ಒಬ್ಬ ಪ್ರಾಮಾಣಿಕ ವ್ಯಕ್ತಿ, ಅವರು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗುವವರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಅವರು ಭ್ರಷ್ಟರಾಗಿದ್ದರೆ ಈ ಹಿಂದೆಯೇ ಅನೇಕ ತಪ್ಪುಗಳನ್ನು ಮಾಡುವ ಅವಕಾಶಗಳಿದ್ದವು ಎಂದು ಮಿಯಾಂದಾದ್ ಹೇಳಿದ್ದಾರೆ. ಅವರನ್ನು ಜೈಲಿನಿಂದ ಹೊರಬಿಟ್ಟರೆ ಯಾರಿಗಾದರೂ ಹಾನಿ ಮಾಡುತ್ತಾರೆಯೇ ಎಂದು ಪ್ರಶ್ನಿಸಿರುವ ಅವರು, ಇಮ್ರಾನ್ ಕೂಡ ಒಬ್ಬರ ಮಗನಾಗಿದ್ದು, ಜೈಲಿನಲ್ಲಿ ಅವರ ಪರಿಸ್ಥಿತಿ ಏನಾಗಿರಬಹುದು ಎಂಬುದು ನನ್ನನ್ನು ಸದಾ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಬ್ಬರ ನಡುವೆ ಯಾವುದೇ ವೈಷಮ್ಯವಿಲ್ಲ.
ತಮ್ಮ ಮತ್ತು ಇಮ್ರಾನ್ ಖಾನ್ ನಡುವೆ ಭಿನ್ನಾಭಿಪ್ರಾಯಗಳಿದ್ದವು ಎಂಬ ವದಂತಿಗಳನ್ನು ಮಿಯಾಂದಾದ್ ಇದೇ ವೇಳೆ ತಳ್ಳಿಹಾಕಿದ್ದಾರೆ. ಆಟದ ದಿನಗಳಲ್ಲಿ ಅಥವಾ ಪಾಕಿಸ್ತಾನ ಕ್ರಿಕೆಟ್ ವಿಚಾರದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇದ್ದಿರಬಹುದು. ಆದರೆ, ನಾವಿಬ್ಬರೂ ಯಾವಾಗಲೂ ಪಾಕಿಸ್ತಾನಕ್ಕಾಗಿ ಒಂದೇ ಗುರಿಯೊಂದಿಗೆ ಆಡಿದ್ದೇವೆ ಮತ್ತು ಹೋರಾಡಿದ್ದೇವೆ. ನಮ್ಮ ನಡುವೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ವೈಷಮ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ಮತ್ತು ಕೌಂಟಿ ಕ್ರಿಕೆಟ್ನಲ್ಲಿ ಇಮ್ರಾನ್ ಖಾನ್ ಅವರೊಂದಿಗೆ ಒಟ್ಟಾಗಿ ಆಡಿದ ವರ್ಷಗಳ ಅನುಭವದ ಆಧಾರದ ಮೇಲೆ ತಾವು ಈ ಮಾತುಗಳನ್ನು ಹೇಳುತ್ತಿರುವುದಾಗಿ ಮಿಯಾಂದಾದ್ ತಿಳಿಸಿದ್ದಾರೆ.
ಜೈಲಿನಲ್ಲಿ ಇಮ್ರಾನ್ ಜೀವಕ್ಕೆ ಅಪಾಯ: ಪುತ್ರರ ಆರೋಪ
ಇದೇ ಸಂದರ್ಭದಲ್ಲಿ, ಇಮ್ರಾನ್ ಖಾನ್ ಅವರ ಇಬ್ಬರು ಪುತ್ರರಾದ ಸುಲೈಮಾನ್ ಮತ್ತು ಕಾಸಿಮ್ ತಮ್ಮ ತಂದೆಯ ಆರೋಗ್ಯ ಮತ್ತು ಜೈಲಿನ ಪರಿಸ್ಥಿತಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ‘ಸ್ಕೈ ಸ್ಪೋರ್ಟ್ಸ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಾಸಿಮ್ ಅವರು, ತಮ್ಮ ತಂದೆಯನ್ನು ದಿನದ ೨೩ ಗಂಟೆಗಳ ಕಾಲ ಒಂಟಿಯಾಗಿ ಇರಿಸಲಾಗಿದ್ದು, ಅವರನ್ನು ಜೈಲಿನಲ್ಲಿಯೇ ಕೊಲ್ಲುವ ಸಂಚು ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜೈಲಿನಲ್ಲಿರುವ ಇತರ ರಾಜಕೀಯ ಕೈದಿಗಳ ಸಾವನ್ನು ಉಲ್ಲೇಖಿಸಿ, ಇಮ್ರಾನ್ ಖಾನ್ ಅವರ ಪರಿಸ್ಥಿತಿ ಕೂಡ ತೀರಾ ಹದಗೆಟ್ಟಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂದರ್ಶನಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಕ್ಷೇಪ
ಟೆಸ್ಟ್ ಪಂದ್ಯದ ಭೋಜನ ವಿರಾಮದ ಸಮಯದಲ್ಲಿ ಇಮ್ರಾನ್ ಖಾನ್ ಪುತ್ರರ ಈ ಸಂದರ್ಶನ ಪ್ರಸಾರವಾಗಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಸ್ಕೈ ಸ್ಪೋರ್ಟ್ಸ್ಗೆ ಅಧಿಕೃತವಾಗಿ ದೂರು ನೀಡಲಾಗಿದ್ದು, ಪ್ರತಿಭಟನೆಯ ರೂಪದಲ್ಲಿ ಭೋಜನ ವಿರಾಮದ ನಂತರ ಪಾಕಿಸ್ತಾನಿ ಆಟಗಾರರನ್ನು ಮೈದಾನಕ್ಕೆ ಇಳಿಸದಿರಲು ಪಿಸಿಬಿ ಒಮ್ಮೆ ಚಿಂತನೆ ನಡೆಸಿತ್ತು ಎಂದು ವರದಿಗಳು ತಿಳಿಸಿವೆ.
ಮತ್ತೊಂದೆಡೆ, ಸುನಿಲ್ ಗವಾಸ್ಕರ್, ಕಪಿಲ್ ದೇವ್, ಗ್ರೆಗ್ ಚಾಪೆಲ್ ಸೇರಿದಂತೆ ಹಲವು ಮಾಜಿ ಅಂತಾರಾಷ್ಟ್ರೀಯ ನಾಯಕರು ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾರೆ. ೧೯೮೦ ಮತ್ತು ೧೯೯೦ರ ದಶಕದ ಆರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಆಧಾರಸ್ತಂಭಗಳಾಗಿದ್ದ ಇಮ್ರಾನ್ ಖಾನ್ ಮತ್ತು ಜಾವೇದ್ ಮಿಯಾಂದಾದ್, ೧೯೯೨ರ ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ವಿಕೆಟ್ಗೆ ೧೩೯ ರನ್ಗಳ ನಿರ್ಣಾಯಕ ಜೊತೆಯಾಟವಾಡಿ ಪಾಕಿಸ್ತಾನಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟಿದ್ದರು. ಈಗ ಅದೇ ನಾಯಕನ ಪರವಾಗಿ ಮಿಯಾಂದಾದ್ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ : ಟಿ20 ನಾಯಕತ್ವದಿಂದ ಕೆಳಗಿಳಿಸಿದ ಬಗ್ಗೆ ಮೌನ ಮುರಿದ ಸೂರ್ಯಕುಮಾರ್ ಯಾದವ್


















