ನವದೆಹಲಿ : ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು 2025ರ ಜೂನ್ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ISS) ಪ್ರಯಾಣಿಸಿದಾಗ, ತಮ್ಮೊಂದಿಗೆ ದೇಶದ ಖಾದ್ಯಗಳನ್ನೂ ಕೊಂಡೊಯ್ದಿದ್ದರು. ಆದರೆ, ಭಾರತೀಯ ವಿಜ್ಞಾನಿಗಳು ಸಿದ್ಧಪಡಿಸಿದ್ದ ಸುದೀರ್ಘ ಖಾದ್ಯಗಳ ಪಟ್ಟಿಯಲ್ಲಿ ಕೇವಲ ಮೂರು ತಿನಿಸುಗಳಿಗೆ ಮಾತ್ರ ಬಾಹ್ಯಾಕಾಶ ಪ್ರಯಾಣದ ಅಂತಿಮ ಅನುಮತಿ ಸಿಕ್ಕಿತ್ತು ಎಂಬ ಕುತೂಹಲಕಾರಿ ಸಂಗತಿಯನ್ನು ಶುಕ್ಲಾ ಬಹಿರಂಗಪಡಿಸಿದ್ದಾರೆ.
ರಾಜ್ ಶಮಾನಿ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಶುಭಾಂಶು ಶುಕ್ಲಾ, ಭಾರತದ ಗಗನಯಾನ ಯೋಜನೆಗಾಗಿ ಆಹಾರ ಸಿದ್ಧಪಡಿಸುತ್ತಿರುವ ಡಿಆರ್ಡಿಒ (DRDO) ಅಡಿಯಲ್ಲಿರುವ ‘ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ’ (DFRL), ವಿವಿಧ ರೀತಿಯ ಭಾರತೀಯ ಖಾದ್ಯಗಳನ್ನು ಬಾಹ್ಯಾಕಾಶ ಯೋಗ್ಯತೆಯ ಪರೀಕ್ಷೆಗೆ ಕಳುಹಿಸಿತ್ತು. ಆದರೆ, ನಾಸಾದ ತೀವ್ರ ಮಟ್ಟದ ಗುಣಮಟ್ಟ ಮತ್ತು ಸುರಕ್ಷತಾ ಪರೀಕ್ಷೆಗಳ ನಂತರ ಕೇವಲ ಕ್ಯಾರೆಟ್ ಹಲ್ವಾ, ಹೆಸರುಬೇಳೆ ಹಲ್ವಾ ಮತ್ತು ಮಾವಿನಹಣ್ಣಿನ ರಸ ಮಾತ್ರ ಪ್ರಯಾಣಕ್ಕೆ ಅರ್ಹತೆ ಪಡೆದುಕೊಂಡವು ಎಂದು ತಿಳಿಸಿದ್ದಾರೆ.
ಖಿಚಡಿ, ಪುಲಾವ್ ಫೇಲ್?
ವಿಜ್ಞಾನಿಗಳು ಸಿದ್ಧಪಡಿಸಿದ್ದ ಮೂಲ ಪಟ್ಟಿಯಲ್ಲಿ ಖಿಚಡಿ, ಪುಲಾವ್, ವಿವಿಧ ತರಕಾರಿ ಪಲ್ಯಗಳು ಸೇರಿದಂತೆ ಹಲವು ನೆಚ್ಚಿನ ಭಾರತೀಯ ಖಾದ್ಯಗಳಿದ್ದವು. ಆದರೆ ಬಾಹ್ಯಾಕಾಶಕ್ಕೆ ಆಹಾರವನ್ನು ಕಳುಹಿಸುವುದು ಅಷ್ಟು ಸುಲಭದ ಮಾತಲ್ಲ. ಬಾಹ್ಯಾಕಾಶ ಆಹಾರವು ತಿಂಗಳುಗಳ ಕಾಲ ಶೈತ್ಯಾಗಾರವಿಲ್ಲದೆ (ಫ್ರಿಡ್ಜ್) ಕೆಡದಂತೆ, ಪೌಷ್ಟಿಕಾಂಶ ಭರಿತವಾಗಿ ಮತ್ತು ಸುರಕ್ಷಿತವಾಗಿರಬೇಕು. ಜೊತೆಗೆ ರಾಕೆಟ್ ಉಡಾವಣೆಯ ಕಂಪನಗಳನ್ನು ತಡೆಯುವ ಸಾಮರ್ಥ್ಯ, ಗುರುತ್ವಾಕರ್ಷಣ ರಹಿತ (ಮೈಕ್ರೋಗ್ರಾವಿಟಿ) ವಾತಾವರಣದಲ್ಲಿ ಗಾಳಿಯಲ್ಲಿ ತೇಲುವ ತುಕಡಿಗಳನ್ನು ಸೃಷ್ಟಿಸದಿರುವುದು ಮತ್ತು ಶೂನ್ಯ ತೇವಾಂಶ ನಿಯಮಗಳಿಗೆ ಇದು ಬದ್ಧವಾಗಿರಬೇಕು.
ಅನೇಕ ಖಾದ್ಯಗಳು ಈ ಹಂತವನ್ನು ದಾಟದಿರಲು ಸಮಯದ ಅಭಾವವೇ ಪ್ರಮುಖ ಕಾರಣವಾಗಿತ್ತು ಎಂದು ಶುಕ್ಲಾ ವಿವರಿಸಿದ್ದಾರೆ. “ಅವರು ಇನ್ನೂ ಹೆಚ್ಚಿನ ತಪಾಸಣೆ ನಡೆಸಲು ಬಯಸಿದ್ದರು, ಆದರೆ ನಮ್ಮಲ್ಲಿ ಅಗತ್ಯ ಸಮಯವಿರಲಿಲ್ಲ. ಹೀಗಾಗಿ ಮೂರು ಖಾದ್ಯಗಳು ಮಾತ್ರ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದವು,” ಎಂದಿದ್ದಾರೆ. ವಿಶೇಷವೆಂದರೆ, ಬಾಹ್ಯಾಕಾಶದಲ್ಲಿದ್ದಾಗ ಈ ಮೂರು ಭಾರತೀಯ ಖಾದ್ಯಗಳನ್ನು ಶುಕ್ಲಾ ಅವರಿಗೆ ಸವಿಯಲು ಸಾಧ್ಯವಾಗಲಿಲ್ಲ! ಏಕೆಂದರೆ ಅವರು ಅದನ್ನು ತಮ್ಮ ಜೊತೆಗಿದ್ದ ಅಂತಾರಾಷ್ಟ್ರೀಯ ಗಗನಯಾತ್ರಿಗಳಿಗೆ ಹಂಚಿದ್ದರು, ಮತ್ತು ಅವರೆಲ್ಲರೂ ಭಾರತೀಯ ತಿನಿಸುಗಳನ್ನು ಅಪಾರವಾಗಿ ಮೆಚ್ಚಿಕೊಂಡಿದ್ದರು.
ಬಾಹ್ಯಾಕಾಶದಲ್ಲಿ ಉಪ್ಪು, ಖಾರದ ಹಂಬಲ ಮತ್ತು ಕರಾವಳಿಯ ಸ್ವಾದ
ಬಾಹ್ಯಾಕಾಶದಲ್ಲಿದ್ದ 13ನೇ ದಿನದ ವೇಳೆಗೆ ತಮ್ಮ ದೇಹದಲ್ಲಿ ಉಂಟಾದ ಬದಲಾವಣೆಗಳು ಮತ್ತು ಆಹಾರದ ಹಂಬಲದ ಕುರಿತು ಶುಕ್ಲಾ ಮಾತನಾಡಿದ್ದಾರೆ. “ಗುರುತ್ವಾಕರ್ಷಣೆ ಇಲ್ಲದ ವಾತಾವರಣದಲ್ಲಿ ರಕ್ತ ಮತ್ತು ದ್ರವ ಪದಾರ್ಥಗಳು ತಲೆಯತ್ತ ಚಲಿಸುವುದರಿಂದ ಮೂಗು ಮುಚ್ಚಿದ ಅನುಭವವಾಗುತ್ತದೆ. ಇದರಿಂದ ನಾಲಿಗೆಯ ರುಚಿ ಮತ್ತು ಮೂಗಿನ ವಾಸನೆ ಹಿಡಿಯುವ ಶಕ್ತಿ ಕಡಿಮೆಯಾಗುತ್ತದೆ. ಇದಲ್ಲದೆ, ನಾಸಾದ ಆಹಾರದಲ್ಲಿ ಉಪ್ಪಿನ ಪ್ರಮಾಣ ತೀರಾ ಕಡಿಮೆಯಿರುತ್ತದೆ. ಹೀಗಾಗಿ ನನಗೆ ಉಪ್ಪು ಮತ್ತು ಖಾರದ ಆಹಾರ ತಿನ್ನಬೇಕು ಎಂಬ ತೀವ್ರ ಆಸೆ ಉಂಟಾಯಿತು. ನಾನು ನನ್ನ ಫ್ಲೈಟ್ ಸರ್ಜನ್ಗೆ ಕರೆ ಮಾಡಿ ಉಪ್ಪಿನ ತಿನಿಸು ಸಿಗುವುದೇ ಎಂದು ಕೇಳಿದ್ದೆ,” ಎಂದು ನೆನಪಿಸಿಕೊಂಡಿದ್ದಾರೆ. ಭೂಮಿಗೆ ಮರಳಿದ ತಕ್ಷಣ ಅವರ ಭಾರತೀಯ ವೈದ್ಯರು ಬಾಳೆಕಾಯಿ ಚಿಪ್ಸ್ ಮತ್ತು ಭಾಕರ್ವಾಡಿ ನೀಡಿ ಅವರನ್ನು ಸ್ವಾಗತಿಸಿದ್ದರಂತೆ.
ಇದನ್ನೂ ಓದಿ : ಸಂಶೋಧನಾ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ : ಪಿಎಂ ಯೋಜನೆಯಲ್ಲಿ ವರ್ಷಕ್ಕೆ 20 ಲಕ್ಷ ರೂ. ಫೆಲೋಶಿಪ್


















