ಗುರುಗ್ರಾಮ : ಹರಿಯಾಣದ ಗುರುಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಭೀಕರ ಪೊಲೀಸ್ ಎನ್ಕೌಂಟರ್ನಲ್ಲಿ ನಾಲ್ವರು ಗ್ಯಾಂಗ್ಸ್ಟರ್ಗಳು ಮೃತಪಟ್ಟಿದ್ದು, ಮೂವರು ಪೊಲೀಸ್ ಸಿಬ್ಬಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ನಗರದ ಸುಶಾಂತ್ ಲೋಕ್ ಫೇಸ್-2 ಪ್ರದೇಶದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಎರಡೂ ಕಡೆಯಿಂದ 60ಕ್ಕೂ ಹೆಚ್ಚು ಸುತ್ತು ಗುಂಡಿನ ದಾಳಿ ನಡೆದಿದ್ದು, ಇಡೀ ಪ್ರದೇಶ ಕೆಲಕಾಲ ಯುದ್ಧಭೂಮಿಯಂತಾಗಿತ್ತು. ವಿದೇಶದಲ್ಲಿರುವ ಕುಖ್ಯಾತ ಗ್ಯಾಂಗ್ಸ್ಟರ್ ದೀಪಕ್ ನಂದಾಲ್ ಗ್ಯಾಂಗ್ಗೆ ಸೇರಿದ ಶೂಟರ್ಗಳು ಸ್ಥಳೀಯ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಲು ಬಂದಿದ್ದಾರೆ ಎಂಬ ಖಚಿತ ಮಾಹಿತಿ ಗುರುಗ್ರಾಮದ ಕ್ರೈಂ ಬ್ರಾಂಚ್ಗೆ ಲಭಿಸಿತ್ತು. ಇದೇ ಉದ್ಯಮಿಗೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುಲಿಗೆ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪಡೆದ ತಕ್ಷಣ ಹಲವು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ಅನುಮಾನಾಸ್ಪದ ಸ್ಕಾರ್ಪಿಯೊ ವಾಹನವನ್ನು ಸುತ್ತುವರಿದವು.
ಶರಣಾಗುವಂತೆ ಸೂಚನೆ; ಪೊಲೀಸರ ಮೇಲೆಯೇ ಗುಂಡಿನ ದಾಳಿ
ಪೊಲೀಸರು ಆರೋಪಿಗಳಿಗೆ ಶರಣಾಗುವಂತೆ ಹಲವು ಬಾರಿ ಸೂಚನೆ ನೀಡಿದರು. ಆದರೆ ಆರೋಪಿಗಳು ಪೊಲೀಸರ ಮೇಲೆಯೇ ಮನಬಂದಂತೆ ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡಿನ ದಾಳಿ ನಡೆಸಿದ್ದು, ಕೆಲವೇ ನಿಮಿಷಗಳಲ್ಲಿ ಭಾರೀ ಚಕಮಕಿ ನಡೆಯಿತು. ಸುಮಾರು 60ಕ್ಕೂ ಹೆಚ್ಚು ಸುತ್ತು ಗುಂಡು ಹಾರಿದ ಈ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳಿಗೂ ಗುಂಡೇಟು ತಗುಲಿತು. ಅವರನ್ನು ತಕ್ಷಣ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ನಾಲ್ವರನ್ನು ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮತ್ತೋರ್ವ ಆರೋಪಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೂವರು ಪೊಲೀಸರಿಗೆ ಗುಂಡೇಟು
ಚಕಮಕಿಯ ವೇಳೆ 3 ಪೊಲೀಸರ ಸಿಬ್ಬಂದಿಗೂ ಗುಂಡೇಟು ತಗುಲಿದೆ. ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ. ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ನಿರ್ಮಿತ ಐದು ಪಿಸ್ತೂಲು ವಶ
ಘಟನೆಯ ಬಳಿಕ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್ಎಸ್ಎಲ್), ಸೀನ್ ಆಫ್ ಕ್ರೈಮ್ (SoC) ಹಾಗೂ ಇತರ ತನಿಖಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಆರೋಪಿಗಳಿಂದ ಐದು ವಿದೇಶಿ ನಿರ್ಮಿತ ಪಿಸ್ತೂಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತಪಟ್ಟ ಹಾಗೂ ಗಾಯಗೊಂಡಿರುವ ಆರೋಪಿಗಳ ಪೂರ್ಣ ಗುರುತು ಮತ್ತು ಅವರ ಅಪರಾಧ ಹಿನ್ನೆಲೆಯ ಮಾಹಿತಿಯನ್ನು ಪರಿಶೀಲಿಸಿದ ಬಳಿಕ ಬಹಿರಂಗಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಘಟಿತ ಅಪರಾಧದ ವಿರುದ್ಧ ಕಾರ್ಯಾಚರಣೆ
ಈ ಎನ್ಕೌಂಟರ್ ಹರ್ಯಾಣದಲ್ಲಿ ಸಂಘಟಿತ ಅಪರಾಧ ಜಾಲದ ವಿರುದ್ಧ ನಡೆದ ಪ್ರಮುಖ ಕಾರ್ಯಾಚರಣೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಉದ್ಯಮಿಗಳಿಂದ ಸುಲಿಗೆ ಮಾಡಲು ವಿದೇಶದಲ್ಲಿರುವ ಗ್ಯಾಂಗ್ಗಳು ಸ್ಥಳೀಯ ಶೂಟರ್ಗಳನ್ನು ಬಳಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಮಹತ್ವ ಪಡೆದಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ದೀಪಕ್ ನಂದಾಲ್ ಗ್ಯಾಂಗ್ನ ಇತರ ಸದಸ್ಯರ ಸಂಪರ್ಕ ಮತ್ತು ಸಂಚಿನ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ : ಲವ್ ರಿಜೆಕ್ಟ್ ಮಾಡಿದ್ದಕ್ಕೆ ಪ್ರಿಯತಮೆಗೆ ಚಾಕು ಇರಿದ ಪ್ರಿಯಕರ!



















