ವಾಷಿಂಗ್ಟನ್ ಡಿಸಿ : ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಟೆಸ್ಲಾ ಕಾರನ್ನು ಸುಮಾರು 250 ಅಡಿ ಆಳದ ಕಂದಕಕ್ಕೆ ಉದ್ದೇಶಪೂರ್ವಕವಾಗಿ ಚಲಾಯಿಸಿ ಸಂಚಲನ ಸೃಷ್ಟಿಸಿದ್ದ ಭಾರತೀಯ ಮೂಲದ ವೈದ್ಯ ಧರ್ಮೇಶ್ ಪಟೇಲ್ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ.
ಸುಮಾರು ಎರಡು ವರ್ಷಗಳ ಮಾನಸಿಕ ಆರೋಗ್ಯ ಚಿಕಿತ್ಸಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಕ್ಯಾಲಿಫೋರ್ನಿಯಾದ ನ್ಯಾಯಾಲಯವು ಅವರ ವಿರುದ್ಧ ದಾಖಲಾಗಿದ್ದ ಎಲ್ಲಾ ಕೊಲೆ ಯತ್ನದ ಆರೋಪಗಳನ್ನು ವಜಾಗೊಳಿಸಿದೆ. ಈ ಪ್ರಕರಣ ಅಮೆರಿಕದಲ್ಲಿ ಮಾನಸಿಕ ಆರೋಗ್ಯ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಕುರಿತು ಮತ್ತೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಆಗಿದ್ದೇನು?
2023ರ ಜನವರಿ 2ರಂದು ರೇಡಿಯಾಲಜಿಸ್ಟ್ ಆಗಿದ್ದ ಧರ್ಮೇಶ್ ಪಟೇಲ್ ಕ್ಯಾಲಿಫೋರ್ನಿಯಾದ ಪ್ರಸಿದ್ಧ ‘ಡೆವಿಲ್ಸ್ ಸ್ಲೈಡ್’ ಪ್ರದೇಶದಲ್ಲಿ ತಮ್ಮ ಟೆಸ್ಲಾ ಕಾರನ್ನು ಹೆದ್ದಾರಿಯಿಂದ ಸುಮಾರು 250 ಅಡಿ ಆಳದ ಕಂದಕಕ್ಕೆ ಉದ್ದೇಶಪೂರ್ವಕವಾಗಿ ಚಲಾಯಿಸಿದ್ದರೆಂದು ತನಿಖೆಯಲ್ಲಿ ಆರೋಪಿಸಲಾಗಿತ್ತು. ಆ ವೇಳೆ ಕಾರಿನಲ್ಲಿ ಅವರ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳು ಇದ್ದರು. ಭೀಕರ ಅಪಘಾತದ ನಡುವೆಯೂ ನಾಲ್ವರೂ ಜೀವಂತವಾಗಿ ಪಾರಾಗಿದ್ದರು. ರಕ್ಷಣಾ ಸಿಬ್ಬಂದಿ ಇದನ್ನು “ಪವಾಡ” ಎಂದು ಬಣ್ಣಿಸಿದ್ದರು. ನಂತರ ಪಟೇಲ್ ವಿರುದ್ಧ ಮೂರು ಕೊಲೆ ಯತ್ನದ ಆರೋಪಗಳನ್ನು ದಾಖಲಿಸಲಾಗಿತ್ತು.
ಮಾನಸಿಕ ಅಸ್ವಸ್ಥತೆಯೇ ಕಾರಣ ಎಂದು ವೈದ್ಯರ ವರದಿ
ವಿಚಾರಣೆ ವೇಳೆ ಆರೋಪಿ ಪರ ವಕೀಲರು, ಘಟನೆ ನಡೆದ ಸಮಯದಲ್ಲಿ ಧರ್ಮೇಶ್ ಪಟೇಲ್ ತೀವ್ರ ಖಿನ್ನತೆ ಮತ್ತು ಮನೋವಿಕಾರದ (Psychotic episode) ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವಾದಿಸಿದ್ದರು. ವೈದ್ಯಕೀಯ ತಜ್ಞರು ಕೂಡ ಅವರು ‘ಮೇಜರ್ ಡಿಪ್ರೆಸಿವ್ ಡಿಸಾರ್ಡರ್ ವಿತ್ ಸೈಕೋಟಿಕ್ ಫೀಚರ್ಸ್’ ಎಂಬ ಗಂಭೀರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಭ್ರಮೆಗಳಿಂದ ಬಳಲುತ್ತಿದ್ದ ಅವರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಅಸಹಜ ಆತಂಕದಲ್ಲಿದ್ದರು ಎಂದು ವರದಿಗಳು ತಿಳಿಸಿವೆ.
ಜೈಲಿನ ಬದಲು ಚಿಕಿತ್ಸೆ
2024ರಲ್ಲಿ ಕ್ಯಾಲಿಫೋರ್ನಿಯಾದ ಮಾನಸಿಕ ಆರೋಗ್ಯ ಸಂಬಂಧಿತ ಕಾನೂನಿನಡಿ ಧರ್ಮೇಶ್ ಪಟೇಲ್ ಅವರಿಗೆ ನ್ಯಾಯಾಲಯವು ವಿಶೇಷ ಮಾನಸಿಕ ಆರೋಗ್ಯ ಮರುಸ್ಥಾಪನಾ (Mental Health Diversion) ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು. ಸುಮಾರು ಎರಡು ವರ್ಷಗಳ ಕಾಲ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಮನೋವೈದ್ಯರು ಹಾಗೂ ಕುಟುಂಬ ಚಿಕಿತ್ಸಕರ ಮೇಲ್ವಿಚಾರಣೆಯಲ್ಲಿ ಅವರು ಚಿಕಿತ್ಸೆ ಪಡೆದರು. ಈ ಅವಧಿಯಲ್ಲಿ ಅವರು ಸಮಾಜಕ್ಕೆ ಅಪಾಯಕಾರಿಯಲ್ಲ ಎಂಬುದನ್ನು ವೈದ್ಯಕೀಯ ತಜ್ಞರು ದೃಢಪಡಿಸಿದ್ದರು.
ಆರೋಪಗಳೆಲ್ಲ ವಜಾ
ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ನ್ಯಾಯಾಲಯವು ಕ್ಯಾಲಿಫೋರ್ನಿಯಾ ಕಾನೂನಿನ ಪ್ರಕಾರ ಅವರ ವಿರುದ್ಧದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸಿದೆ. ನ್ಯಾಯಾಧೀಶರಿಗೆ ಈ ಸಂದರ್ಭದಲ್ಲಿ ಆರೋಪಗಳನ್ನು ಮುಂದುವರಿಸುವ ಅವಕಾಶ ಇರಲಿಲ್ಲ ಎಂದು ಜಿಲ್ಲಾ ಅಟಾರ್ನಿ ಸ್ಟೀವ್ ವ್ಯಾಗ್ಸ್ಟಾಫ್ ತಿಳಿಸಿದ್ದಾರೆ. ಆದರೆ ಈ ರೀತಿಯ ಗಂಭೀರ ಅಪರಾಧ ಪ್ರಕರಣಗಳಿಗೂ ಮಾನಸಿಕ ಆರೋಗ್ಯ ಸುಧಾರಣೆ ಯೋಜನೆ ಅನ್ವಯವಾಗುತ್ತಿರುವುದನ್ನು ಅವರು ಟೀಕಿಸಿದ್ದಾರೆ.
ಪತ್ನಿಯ ಬೆಂಬಲವೂ ಪ್ರಮುಖ ಕಾರಣ
ಪ್ರಕರಣದ ವಿಚಾರಣೆಯ ವೇಳೆ ಧರ್ಮೇಶ್ ಪಟೇಲ್ ಅವರ ಪತ್ನಿ ನ್ಯಾಯಾಲಯದ ಮುಂದೆ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಅವರು ಪತಿಯನ್ನು ಕ್ಷಮಿಸಿರುವುದಾಗಿ ಹಾಗೂ ಚಿಕಿತ್ಸೆ ಬಳಿಕ ಅವರು ಕುಟುಂಬದೊಂದಿಗೆ ಮತ್ತೆ ಸೇರಬೇಕು ಎಂದು ಬಯಸಿರುವುದಾಗಿ ಹೇಳಿದ್ದರು. ಮಕ್ಕಳೂ ತಂದೆ ಮನೆಗೆ ಮರಳಬೇಕೆಂದು ಬಯಸಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಚಿಕಿತ್ಸೆ ಪೂರ್ಣಗೊಂಡ ಬಳಿಕ ಧರ್ಮೇಶ್ ಪಟೇಲ್ ಮತ್ತೆ ಕುಟುಂಬದೊಂದಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಅವರು ತಮ್ಮ ವೈದ್ಯಕೀಯ ಪರವಾನಗಿಯನ್ನು ಕೂಡ ಅಧಿಕೃತವಾಗಿ ತ್ಯಜಿಸಿದ್ದಾರೆ.
ಇದನ್ನೂ ಓದಿ : ಟ್ರಂಪ್ ಗುರಿಯಾಗಿಸಿದ ಇರಾನ್? ಪಶ್ಚಿಮ ಏಷ್ಯಾದ ಉದ್ವಿಗ್ನತೆ ಮತ್ತಷ್ಟು ತೀವ್ರ!


















