ಭೋಪಾಲ್ : ಮಧ್ಯಪ್ರದೇಶದ ಭೋಪಾಲ್ನಲ್ಲಿ ನೋಯ್ಡಾ ಮೂಲದ ತ್ವಿಶಾ ಶರ್ಮಾ ಎಂಬ ಮಹಿಳೆಯ ನಿಗೂಢ ಸಾವು ಭಾರೀ ಸದ್ದು ಮಾಡುತ್ತಿದೆ. ಮೇ 12ರ ರಾತ್ರಿ ಭೋಪಾಲ್ನ ಕಟಾರಾ ಹಿಲ್ಸ್ನಲ್ಲಿರುವ ತಮ್ಮ ಪತಿಯ ಮನೆಯಲ್ಲಿ 31 ವರ್ಷದ ತ್ವಿಶಾ ಶರ್ಮಾ ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 2 ತಿಂಗಳ ಗರ್ಭಿಣಿಯಾಗಿದ್ದ ತ್ವಿಶಾ ಸಾವನ್ನಪ್ಪುವ ಮುನ್ನ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಆಪ್ತ ಗೆಳತಿಗೆ ಕಳುಹಿಸಿದ್ದ ಕೊನೆಯ ಸಂದೇಶ ಇದೀಗ ಬಹಿರಂಗವಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
“ನಾನು ಇಲ್ಲಿ ಟ್ರ್ಯಾಪ್ ಆಗಿದ್ದೇನೆ ಕಣೇ, ನೀನು ಯಾವತ್ತೂ ಇಂಥ ಜಾಲದೊಳಗೆ ಸಿಲುಕಿಕೊಳ್ಳಬೇಡ. ಜಾಸ್ತಿ ಮಾತನಾಡಲು ಆಗುತ್ತಿಲ್ಲ, ಸರಿಯಾದ ಸಮಯ ಬಂದಾಗ ನಾನೇ ಕರೆ ಮಾಡುತ್ತೇನೆ” ಎಂದು ತ್ವಿಶಾ ಆ ಸಂದೇಶದಲ್ಲಿ ಬರೆದಿದ್ದರು. ಆದರೆ ನಂತರ ಆಕೆಯಿಂದ ಯಾವುದೇ ಕರೆಯಾಗಲೀ, ಸಂದೇಶವಾಗಲೀ ಬಂದಿಲ್ಲ. ಮಾರನೇ ದಿನವೇ ಅವರು ಹೆಣವಾಗಿ ಪತ್ತೆಯಾಗಿದ್ದರು.

ಮಾಜಿ ‘ಮಿಸ್ ಪುಣೆ’ ಆಗಿದ್ದ ತ್ವಿಶಾ ಶರ್ಮಾ, ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಭೋಪಾಲ್ ಮೂಲದ ವಕೀಲ ಸಮರ್ಥ್ ಸಿಂಗ್ ಎಂಬಾತನನ್ನು 2025ರ ಡಿಸೆಂಬರ್ನಲ್ಲಿ ವಿವಾಹವಾಗಿದ್ದರು. ಇವರ ಕುಟುಂಬದಲ್ಲಿ ಹಿರಿಯ ವಕೀಲರು ಹಾಗೂ ನಿವೃತ್ತ ನ್ಯಾಯಾಧೀಶರಿದ್ದಾರೆ. ಮದುವೆಯಾದ ಕೆಲವೇ ತಿಂಗಳಲ್ಲಿ ತ್ವಿಶಾ ಅವರ ಸಾವು ಸಂಭವಿಸಿದ್ದು, ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದು ಅವರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ
ತ್ವಿಶಾ ಸಾವಿಗೆ ಅವರ ಪತಿ ಮತ್ತು ಅತ್ತೆಯ ಕಡೆಯವರಿಂದ ನಡೆದ ನಿರಂತರ ದೈಹಿಕ ಹಾಗೂ ಮಾನಸಿಕ ಕಿರುಕುಳವೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಭಾನುವಾರ ತ್ವಿಶಾ ಅವರ ಕುಟುಂಬಸ್ಥರು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿವಾಸದ ಮುಂದೆ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯ ಏಮ್ಸ್ (AIIMS) ಆಸ್ಪತ್ರೆಯಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿರುವ ಕುಟುಂಬಸ್ಥರು, ಅಲ್ಲಿಯವರೆಗೆ ಮಗಳ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಮತ್ತು ಭಾರತೀಯ ಸೇನೆಯಲ್ಲಿ ಮೇಜರ್ ಆಗಿರುವ ಅವರ ಸಹೋದರ ಹರ್ಷಿತ್ ಶರ್ಮಾ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ. ಮುಖ್ಯಮಂತ್ರಿಗಳ ಗೈರುಹಾಜರಿಯಲ್ಲಿ ಅವರ ವಿಶೇಷಾಧಿಕಾರಿಯನ್ನು (OSD) ಭೇಟಿ ಮಾಡಿದ ಕುಟುಂಬಸ್ಥರು, ಸ್ಥಳೀಯ ಪೊಲೀಸರ ತನಿಖೆ ಅಸಮಾಧಾನ ತಂದಿದೆ ಎಂದು ದೂರಿದ್ದಾರೆ. ಆರೋಪಿಗಳ ಪ್ರಭಾವಕ್ಕೆ ಒಳಗಾಗಿ ಸಾಕ್ಷ್ಯ ನಾಶಪಡಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ತಂದೆ, ನಮಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೆ, ಮಗಳ ದೇಹ ಹಾಳಾಗದಂತೆ ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂರಕ್ಷಿಸಿಡಬೇಕು ಎಂದು ಆಗ್ರಹಿಸಿರುವ ಅವರು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಪ್ರಭಾವಿ ಆರೋಪಿಗಳ ರಕ್ಷಣೆ?
ತ್ವಿಶಾ ಅವರ ದೇಹದಲ್ಲಿ, ಕೈ ಮತ್ತು ಕಿವಿಗಳ ಮೇಲೆ ಗಾಯದ ಗುರುತುಗಳಿರುವುದು ಕೊಲೆಯ ಶಂಕೆಯನ್ನು ಬಲಪಡಿಸಿದೆ. ಆದರೆ ಸ್ಥಳೀಯ ಪೊಲೀಸರು ಘಟನೆ ನಡೆದ ಎರಡು ದಿನಗಳ ನಂತರ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದ್ದರೂ, ಮೃತರ ಅತ್ತೆ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರಿಗೆ ಸ್ಥಳೀಯ ನ್ಯಾಯಾಲಯವು ಈಗಾಗಲೇ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಮತ್ತೊಂದೆಡೆ ಪ್ರಮುಖ ಆರೋಪಿ, ತ್ವಿಶಾ ಪತಿ ಸಮರ್ಥ್ ಸಿಂಗ್ ಸದ್ಯ ತಲೆಮರೆಸಿಕೊಂಡಿದ್ದು, ಆತನ ಜಾಮೀನು ಅರ್ಜಿ ವಿಚಾರಣೆ ಮೇ 18ಕ್ಕೆ ನಿಗದಿಯಾಗಿದೆ. ಕಟಾರಾ ಹಿಲ್ಸ್ ಪೊಲೀಸ್ ಠಾಣಾಧಿಕಾರಿ ಸುನಿಲ್ ದುಬೆ ನೀಡಿರುವ ಮಾಹಿತಿ ಪ್ರಕಾರ, ತಲೆಮರೆಸಿಕೊಂಡಿರುವ ಪತಿಯ ಬಂಧನಕ್ಕೆ ಜಾಲ ಬೀಸಲಾಗಿದೆ ಮತ್ತು ನಿವೃತ್ತ ನ್ಯಾಯಾಧೀಶೆಗೆ ನೀಡಿರುವ ಜಾಮೀನನ್ನು ಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು. ಆದಾಗ್ಯೂ, ಕುಟುಂಬದವರು ಕಾನೂನು ಪ್ರಕ್ರಿಯೆಗಳ ನಂತರವೂ ಶವವನ್ನು ಸ್ವೀಕರಿಸಲು ನಿರಾಕರಿಸಿದರೆ, ನಿಯಮಾವಳಿಗಳ ಪ್ರಕಾರ ತಾವೇ ಅಂತ್ಯಸಂಸ್ಕಾರ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಹೊರ್ಮುಜ್ ಜಲಸಂಧಿಯ ಸಬ್ಸೀ ಕೇಬಲ್ಗಳ ಮೇಲೆ ಇರಾನ್ ಕಣ್ಣು : ಜಗತ್ತಿಗೆ ಇಂಟರ್ನೆಟ್ ಸ್ಥಗಿತದ ಆತಂಕ



















