ಬೆಂಗಳೂರು: ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿನಗರದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಸೋಮಶೇಖರ್, ಅಂಬರೀಶ್ ಸೇರಿದಂತೆ ಐವರು ಇದ್ದಾರೆ. ಸಂತ್ರಸ್ತೆಗೆ ಆರೋಪಿಗಳ ಪೈಕಿ ಇಬ್ಬರ ಪರಿಚಯವಿತ್ತು ಎನ್ನಲಾಗಿದೆ.
ಸೆಕ್ಯೂರಿಟಿ ಪ್ರೊವೈಡಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಸೋಮಶೇಖರ್, ಕಲಬುರಗಿ ಭಾಗದಿಂದ ಸ್ನೇಹಿತರು ಬಂದಿದ್ದಾರೆ, ಭೇಟಿ ಮಾಡೋಣ ಎಂದು ಹೇಳಿ ದೇವನಹಳ್ಳಿ ಭಾಗದಲ್ಲಿ ವಾಸವಿದ್ದ ಯುವತಿಯನ್ನು ಕರೆಸಿಕೊಂಡಿದ್ದ.
ಸಂಜೆ ಸುಮಾರು 5 ಗಂಟೆಗೆ ಸೋಮಶೇಖರ್ ಯುವತಿಗೆ ಕರೆ ಮಾಡಿದ್ದ. ಬಳಿಕ ಸಂಜೆ 7 ಗಂಟೆ ಸುಮಾರಿಗೆ ಯುವತಿ ರ್ಯಾಪಿಡೋ ಮೂಲಕ ಮಾರುತಿನಗರಕ್ಕೆ ಬಂದಿದ್ದಳು. ಎಲ್ಲರೂ ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಅಂಬರೀಶ್ ಎಂಬಾತ ಆರಂಭದಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಳಿಕ ಯುವತಿ ಆರೋಪಿಗಳಿಂದ ತಪ್ಪಿಸಿಕೊಂಡು ತಕ್ಷಣವೇ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.


















