ಬೆಂಗಳೂರು : ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿತರು ಸರ್ಕಾರಿ ಸೇವಕನಲ್ಲ. ಬದಲಾಗಿ ಖಾಸಗಿ ವ್ಯಕ್ತಿಯಾಗಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿಲ್ಲ ಹಾಗೂ ಲಂಚದ ಹಣ ವಶಕ್ಕೆ ಪಡೆದುಕೊಂಡಿಲ್ಲ ಎಂಬ ಕಾರಣ ಮುದ್ದಿಟ್ಟುಕೊಂಡು ಭಷ್ಟಾಚಾರ ಪ್ರಕರಣದ ತನಿಖೆ ರದ್ದುಪಡಿಸಲಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಅಧಿಕಾರಿಗಳಿಗೆ ನೀಡಬೇಕಿದ್ದ ಲಂಚದ ಹಣವನ್ನು ಸಂಗ್ರಹಿಸಿ ಮತ್ತೊಬ್ಬರಿಗೆ ತಲುಪಿಸುವಂತೆ ಸೂಚನೆ ನೀಡಿದ್ದ ಆರೋಪ ಎದುರಿಸುತ್ತಿರುವ ಬಸವೇಶ್ವರ ನಗರದ ಕೆ.ಎಸ್. ಗಂಗಾಧರಯ್ಯ ಅವರು ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಭ್ರಷ್ಟಾಚಾರ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿಯನ್ನು ತಿರಸ್ಕರಿಸಿ, ತನಿಖೆ ಮುಂದುವರಿಯಲು ಅವಕಾಶ ನೀಡಿದೆ. ನ್ಯಾಯಾಲಯವು ತನ್ನ ಆದೇಶದಲ್ಲಿ, ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿತ ವ್ಯಕ್ತಿ ಸರ್ಕಾರಿ ಸೇವಕನಾಗಿರಬೇಕೆಂಬ ಅವಶ್ಯಕತೆ ಇಲ್ಲ. ಲಂಚದ ಹಣ ಸಂಗ್ರಹಿಸುವ ಅಥವಾ ಅದನ್ನು ಅಧಿಕಾರಿಗಳಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರೆ, ಆ ವ್ಯಕ್ತಿಯ ವಿರುದ್ಧವೂ ತನಿಖೆ ನಡೆಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.
ಹೀಗಾಗಿ, ಲಂಚ ಸಂಗ್ರಹ ಮತ್ತು ವಹಿವಾಟಿನಲ್ಲಿ ಮಧ್ಯವರ್ತಿಯಾಗಿದ್ದ ವ್ಯಕ್ತಿಯ ವಿರುದ್ಧ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣವನ್ನು ರದ್ದುಪಡಿಸಲು ಯಾವುದೇ ಆಧಾರವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ಆದೇಶದೊಂದಿಗೆ, ಕೆ.ಎಸ್. ಗಂಗಾಧರಯ್ಯ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣದ ತನಿಖೆ ಮುಂದುವರಿಯಲಿದೆ.
ಇದನ್ನೂ ಓದಿ : ಸಂವಿಧಾನ, ಪ್ರಜಾಪ್ರಭುತ್ವ ಕೇವಲ ವೇದಿಕೆಗೆ ಸೀಮಿತ : ಸರ್ಕಾರದ ವಿರುದ್ಧ ರಾಷ್ಟ್ರೀಯ ಅಂಬೇಡ್ಕರ್ ಸೇನೆ ತೀವ್ರ ವಾಗ್ದಾಳಿ


















