ಬೆಂಗಳೂರು : ಬೆಂಗಳೂರು ಹೊರವಲಯದ ಹೆಣ್ಣೂರು ಭಾಗದ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕಳ್ಳತನ ಪ್ರಕರಣ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆಯಾಗಿದ್ದು, ಬಳಿಕ ಪೊಲೀಸರ ತನಿಖೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಯ ಕಳ್ಳಾಟವೇ ಬಯಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಸ್ವಪ್ನ ಎಂಬ ಮಹಿಳೆ ಮೇ 1ರಂದು ಹೆಣ್ಣೂರಿನ ಸ್ಪರ್ಶ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆಂದು ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೆ ಮುನ್ನ ಆಸ್ಪತ್ರೆಯ ಸಿಬ್ಬಂದಿ ಸೂಚನೆಯಂತೆ ತಮ್ಮ ಚಿನ್ನದ ಆಭರಣಗಳನ್ನು ತೆಗೆದು ಕೊಟ್ಟಿದ್ದರು. ಮಾಂಗಲ್ಯ ಸರ, ಕಿವಿಯೋಲೆ, ಕಾಲುಂಗುರ ಸೇರಿದಂತೆ ಹಲವು ಆಭರಣಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ ಎಂದು ಹೇಳಿ ಸಿಬ್ಬಂದಿ ಪಡೆದಿದ್ದರು ಎನ್ನಲಾಗಿದೆ.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದ ಹಿನ್ನೆಲೆ ಸ್ವಪ್ನ ಮತ್ತು ಅವರ ಪತಿ ಸಂತೋಷದಲ್ಲಿದ್ದರು. ಇದೇ ವೇಳೆ ಆಭರಣಗಳ ವಿಚಾರ ಕೇಳುವುದನ್ನೂ ಕೆಲ ಸಮಯ ಮರೆತಿದ್ದರು. ನಂತರ ಮನೆಗೆ ತೆರಳುವ ಮುನ್ನ ಸಿಬ್ಬಂದಿಯ ಬಳಿ ಆಭರಣಗಳ ಬಗ್ಗೆ ವಿಚಾರಿಸಿದಾಗ ಸ್ಪಷ್ಟ ಉತ್ತರ ಸಿಗಲಿಲ್ಲ ಎನ್ನಲಾಗಿದೆ. ಸಿಬ್ಬಂದಿ ‘ಹಾರಿಕೆ ಉತ್ತರ’ ನೀಡುತ್ತಿದ್ದಂತೆ ದಂಪತಿಗೆ ಅನುಮಾನ ಶುರುವಾಗಿದೆ.
ಆಸ್ಪತ್ರೆಗೆ ಕೊಟ್ಟಿದ್ದ ಆಭರಣಗಳು ವಾಪಸ್ ಸಿಗದೇ ಹೋದ ಹಿನ್ನೆಲೆ ದಂಪತಿ ಬೆಚ್ಚಿಬಿದ್ದಿದ್ದಾರೆ. ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ಕಾಣೆಯಾಗಿರುವುದು ಗೊತ್ತಾದ ಬಳಿಕ ಕುಟುಂಬದವರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ವರ್ತನೆಯಿಂದ ಅನುಮಾನ ಮತ್ತಷ್ಟು ಗಟ್ಟಿಯಾಗಿದ್ದು, ತಕ್ಷಣವೇ ಪೊಲೀಸರ ಮೊರೆ ಹೋಗಿದ್ದಾರೆ.
ಸ್ವಪ್ನ ಅವರ ಪತಿ ಹೆಣ್ಣೂರು ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅಚ್ಚರಿಯ ಸಂಗತಿ ಬಯಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ವೇಳೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಚಿನ್ನದ ಆಭರಣಗಳನ್ನು ತೆಗೆದುಕೊಂಡಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಇದರಿಂದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಬಳಿಕ ಆ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.
ಇನ್ನು ವಿಚಾರಣೆ ವೇಳೆ ಆರೋಪಿ ಮಹಿಳೆ, ಕದ್ದ ಚಿನ್ನದ ಆಭರಣಗಳನ್ನು ತುಮಕೂರಲ್ಲಿ ಅಡವಿಟ್ಟಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪ್ರಕರಣ ಸಂಬಂಧ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ ವನಜಾಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಒಟ್ಟಾರೆ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಚಿನ್ನ ಕಳುವಾಗಿರುವುದು ಈಗ ಭದ್ರತೆ ಹಾಗೂ ವಿಶ್ವಾಸದ ಪ್ರಶ್ನೆ ಎಬ್ಬಿಸಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಮಹಿಳೆಗೆ ಅಪಘಾತವೆಸಗಿ ಕೊಲೆ – ಹಣಕ್ಕಾಗಿ ಸಂಚು ರೂಪಿಸಿದ್ದ ಐವರ ಬಂಧನ



















