ಬೆಂಗಳೂರು : ದೇಶದಲ್ಲಿ ಸೈಬರ್ ವಂಚನೆಗೆ ಹತ್ತಾರು ಮುಖಗಳಿವೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಮಾಡುತ್ತೇವೆ, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ಎರಡು ಪಟ್ಟು ಜಾಸ್ತಿಯಾಗಿದೆ ಒಟಿಪಿ ಹೇಳಿ, ನಾವು ಕಳುಹಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ… ಹೀಗೆ ಹಲವು ರೀತಿಯಲ್ಲಿ ವಂಚಿಸಲಾಗುತ್ತಿದೆ. ಇಂತಹ ವಂಚನೆಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಕೇಂದ್ರ ಸರ್ಕಾರ ಯೋಜನೆಗಳ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ.
ಹೌದು, ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ನಿಮಗೆ ಸಾಲ ನೀಡಲಾಗುತ್ತಿದೆ. ಅರ್ಜಿಗೆ ಸರ್ಕಾರ ಅನುಮೋದನೆ ನೀಡಿದೆ. ನೀವು ಒಂದಷ್ಟು ಮಾಹಿತಿ ನೀಡಿದರೆ ನಿಮಗೆ ಸಾಲ ಸಿಗುತ್ತದೆ ಎಂದು ಜನರನ್ನು ವಂಚಿಸಲಾಗುತ್ತಿದೆ. ಅಲ್ಲದೆ, ಆಧಾರ್ ಕಾರ್ಡ್ ನೀಡಿದರೆ ಸಾಕು, ಸರ್ಕಾರ ನಿಮಗೆ 3 ಲಕ್ಷ ರೂ. ಸಾಲ ನೀಡುತ್ತದೆ ಎಂದು ಕೂಡ ವಾಟ್ಸ್ ಆ್ಯಪ್ ಮೂಲಕ ಸಂದೇಶ ಕಳುಹಿಸಲಾಗುತ್ತಿದೆ. ಆದರೆ, ಸರ್ಕಾರವು ಇಂತಹ ವಂಚನೆಗಳ ಬಗ್ಗೆ ಎಚ್ಚರದಿಂದ ಇರಿ ಎಂದು ಸೂಚಿಸಿದೆ.
ಪಿಐಬಿ ಫ್ಯಾಕ್ಟ್ ಚೆಕ್ ಎಚ್ಚರಿಕೆ
ಏನಿದು ಸುಳ್ಳು ಸುದ್ದಿ? ಕೆಲ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳಲ್ಲಿ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ ಅಥವಾ ಇನ್ಯಾವುದೋ ವಿಶೇಷ ಯೋಜನೆಯಡಿ ಆಧಾರ್ ಕಾರ್ಡ್ ತೋರಿಸಿದರೆ ತಕ್ಷಣವೇ 3 ಲಕ್ಷ ರೂಪಾಯಿ ಸಾಲ ಸಿಗುತ್ತದೆ ಎಂದು ಪ್ರಚಾರ ಮಾಡಲಾಗುತ್ತಿದೆ.
ಸರ್ಕಾರದ ಸ್ಪಷ್ಟನೆ ಏನು? ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಒಂದನ್ನೇ ಆಧಾರವಾಗಿಟ್ಟುಕೊಂಡು ನೇರವಾಗಿ ಇಂತಹ ಯಾವುದೇ ಸಾಲವನ್ನು ನೀಡುತ್ತಿಲ್ಲ. ಇದು ಸಾರ್ವಜನಿಕರನ್ನು ದಾರಿ ತಪ್ಪಿಸಲು ಸೃಷ್ಟಿಸಲಾದ ನಕಲಿ ಸುದ್ದಿಯಾಗಿದೆ.
ಸಾರ್ವಜನಿಕರಿಗೆ ಒಂದಷ್ಟು ಸಲಹೆ
• ಇಂತಹ ನಕಲಿ ಲಿಂಕ್ ಗಳು ಅಥವಾ ಸಂದೇಶಗಳನ್ನು ನಂಬಬೇಡಿ. ಸೋಷಿಯಲ್ ಪೋಸ್ಟ್ ಗಳನ್ನು ಯಾವುದೇ ಕಾರಣಕ್ಕೂ ನಂಬದಿರಿ.
• ನಿಮ್ಮ ವೈಯಕ್ತಿಕ ವಿವರಗಳನ್ನು (ಆಧಾರ್ ಸಂಖ್ಯೆ, ಒಟಿಪಿ ಅಥವಾ ಬ್ಯಾಂಕ್ ವಿವರಗಳು) ಯಾವುದೇ ಅಪರಿಚಿತ ವೆಬ್ ಸೈಟ್ ಗಳು ಅಥವಾ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬೇಡಿ.
• ಸರ್ಕಾರದ ಯಾವುದೇ ಯೋಜನೆಗಳ ಅಧಿಕೃತ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್ ಸೈಟ್ ಗಳನ್ನು ಮಾತ್ರ ಪರಿಶೀಲಿಸಿ.
ಇದನ್ನೂ ಓದಿ : 3.85 ಕೋಟಿ ರೂ.ಗೆ ಅಪರೂಪದ ಬಿಳಿ ಗಿಡುಗ ಖರೀದಿಸಿ ಸೋದರಸೊಸೆಯ ಆಸೆ ಈಡೇರಿಸಿದ ಮಾವ!



















