ನವದೆಹಲಿ: ಆಧುನಿಕ ಭದ್ರತಾ ಸವಾಲುಗಳ ಅನಿರೀಕ್ಷಿತ ಸ್ವರೂಪದ ಬಗ್ಗೆ ಮಾತನಾಡುವ ವೇಳೆ ಭಾರತದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಉದಾಹರಣೆಯಾಗಿ ನೀಡಿದ್ದಾರೆ.
ತಮ್ಮ ತವರೂರಾದ ರೇವಾದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜನರಲ್ ದ್ವಿವೇದಿ ಅವರು, ಸೈಬರ್ ದಾಳಿಯಿಂದ ಹಿಡಿದು ಬಾಹ್ಯಾಕಾಶ ಯುದ್ಧದವರೆಗೆ ಆಧುನಿಕ ಬೆದರಿಕೆಗಳ ಸಂಕೀರ್ಣತೆ ಮತ್ತು ವೇಗವಾಗಿ ಬದಲಾಗುತ್ತಿರುವ ಸ್ವರೂಪವನ್ನು ವಿವರಿಸಿದರು.
ರೇವಾದ ಟಿಆರ್ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, “ಭವಿಷ್ಯದ ಸವಾಲುಗಳು ಅಸ್ಥಿರತೆ, ಅನಿಶ್ಚಿತತೆ, ಸಂಕೀರ್ಣತೆ ಮತ್ತು ಅಸ್ಪಷ್ಟತೆಯಿಂದ ಕೂಡಿರುತ್ತವೆ. ಮುಂದೆ ಏನಾಗಲಿದೆ ಎಂಬುದರ ಬಗ್ಗೆ ನಿಮಗಾಗಲೀ, ನನಗಾಗಲೀ ಸ್ಪಷ್ಟ ಕಲ್ಪನೆ ಇಲ್ಲ,” ಎಂದು ಹೇಳಿದರು.
ದೇಶದ ಸಶಸ್ತ್ರ ಪಡೆಗಳು ಎದುರಿಸುತ್ತಿರುವ ಭದ್ರತಾ ಸವಾಲುಗಳಿಗೆ ಹೋಲಿಕೆ ಮಾಡಿದ ಅವರು, “ನಾಳೆ ತಾನೇನು ಮಾಡಲಿದ್ದೇನೆ ಎಂಬುದು ಸ್ವತಃ ಟ್ರಂಪ್ಗೂ ತಿಳಿದಿರುವುದಿಲ್ಲ. ಟ್ರಂಪ್ ಅವರಿಗೆ ತಾವು ಇಂದು ಏನು ಮಾಡುತ್ತಿದ್ದೇನೆ ಎಂಬುದೂ ತಿಳಿದಿರಲಿಕ್ಕಿಲ್ಲ ಎಂದು ನನಗನಿಸುತ್ತದೆ,” ಎಂದು ಹಾಸ್ಯಭರಿತವಾಗಿ ಹೇಳಿದರು.
“ಸವಾಲುಗಳು ಎಷ್ಟು ವೇಗವಾಗಿ ಹೊರಹೊಮ್ಮುತ್ತವೆಯೆಂದರೆ, ನೀವು ಒಂದನ್ನು ಪರಿಹರಿಸುವಷ್ಟರಲ್ಲಿ ಮತ್ತೊಂದು ಸವಾಲು ಹುಟ್ಟಿಕೊಳ್ಳುತ್ತದೆ. ಗಡಿ ಸಂಘರ್ಷ, ಭಯೋತ್ಪಾದನೆ, ನೈಸರ್ಗಿಕ ವಿಕೋಪ, ಸೈಬರ್ ಬೆದರಿಕೆಗಳಿಂದ ಹಿಡಿದು ಬಾಹ್ಯಾಕಾಶ ಯುದ್ಧ, ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಮಾಹಿತಿ ಯುದ್ಧದಂತಹ ಹೊಸ ಕ್ಷೇತ್ರಗಳವರೆಗೆ ನಮ್ಮ ಸೇನೆ ಇದನ್ನೇ ಎದುರಿಸುತ್ತಿದೆ,” ಎಂದು ಅವರು ವಿವರಿಸಿದರು.
‘ಆಪರೇಷನ್ ಸಿಂದೂರ’ದ ಸಂದರ್ಭದಲ್ಲಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡಿದ್ದನ್ನು ಉಲ್ಲೇಖಿಸಿದ ಅವರು, “ಕರಾಚಿಯ ಮೇಲೆ ದಾಳಿ ನಡೆದಿದೆ ಎಂಬ ವದಂತಿಗಳು ಹಬ್ಬಿದ್ದವು. ಆ ಸುಳ್ಳು ಮಾಹಿತಿಯ ಪ್ರಮಾಣ ಎಷ್ಟಿತ್ತೆಂದರೆ, ಅದು ನಮಗೂ ನಿಜವೆಂದು ತೋರುತ್ತಿತ್ತು. ಈ ಎಲ್ಲಾ ಸವಾಲುಗಳ ನಡುವೆ, ಭೂಮಿ, ವಾಯು ಮತ್ತು ಸಮುದ್ರದಲ್ಲಿ ಕಾರ್ಯನಿರ್ವಹಿಸಲು ನೀವು ಸಿದ್ಧರಾಗಿರಬೇಕು,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದನ್ನೂ ಓದಿ: ಮಕ್ಕಳ ಸುರಕ್ಷತೆಗೆ ಹೆದರಿ, ವೈರಸ್-ವಾಹಕ ಕೋತಿಯ ಗುಂಡಿಕ್ಕಿ ಕೊಂದ ಮಹಿಳೆ!


















