ಪಾಟ್ನಾ : ದಶಕಗಳ ಕಾಲ ಬಿಹಾರ ರಾಜಕಾರಣದಲ್ಲಿ ಪಾರುಪತ್ಯ ಮೆರೆದಿದ್ದ ‘ಸುಶಾಸನ ಬಾಬು’ ನಿತೀಶ್ ಕುಮಾರ್ ಅವರ ಆಡಳಿತಕ್ಕೆ ಇಂದು ಅಧಿಕೃತವಾಗಿ ತೆರೆಬಿದ್ದಿದೆ. ಬಿಜೆಪಿ ಹಿರಿಯ ನಾಯಕ ಸಾಮ್ರಾಟ್ ಚೌಧರಿ ಅವರು ಬಿಹಾರದ 21ನೇ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ನೇರ ಆಡಳಿತದ ಚುಕ್ಕಾಣಿ ಹಿಡಿದಂತಾಗಿದ್ದು, ಇದು ಹಿಂದಿ ಭಾಷಿಕ ಪ್ರಾಬಲ್ಯದ ರಾಜ್ಯದಲ್ಲಿ ಬಹುದೊಡ್ಡ ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾಗಿದೆ.
ಬಿಹಾರದ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರು ಸಾಮ್ರಾಟ್ ಚೌಧರಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಸಮಾರಂಭದಲ್ಲಿ ಬಿಜೆಪಿಯ ಉನ್ನತ ನಾಯಕರು ಹಾಗೂ ಎನ್ಡಿಎ ಮೈತ್ರಿಕೂಟದ ಪ್ರಮುಖರು ಉಪಸ್ಥಿತರಿದ್ದರು. ತಮ್ಮ ಸಚಿವ ಸಂಪುಟವನ್ನು ವಿಸರ್ಜಿಸಿದ ನಿತೀಶ್ ಕುಮಾರ್, ಮಂಗಳವಾರವಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ನಿತೀಶ್ ಕುಮಾರ್ ನಿರ್ಗಮನದೊಂದಿಗೆ 243 ಸದಸ್ಯ ಬಲದ ವಿಧಾನಸಭೆಯಲ್ಲಿ 89 ಶಾಸಕರನ್ನು ಹೊಂದಿರುವ ಅತಿದೊಡ್ಡ ಪಕ್ಷವಾದ ಬಿಜೆಪಿ ಇದೀಗ ಅಧಿಕೃತವಾಗಿ ಬಿಹಾರದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದೆ. ನಿರ್ಗಮಿತ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಚೌಧರಿ ಅವರು ಗೃಹ ಖಾತೆಯನ್ನೂ ಯಶಸ್ವಿಯಾಗಿ ನಿಭಾಯಿಸಿದ್ದರು.
ಯಾರು ಈ ಸಾಮ್ರಾಟ್ ಚೌಧರಿ?
ಬಿಹಾರದ ಸಂಕೀರ್ಣ ರಾಜಕಾರಣದಲ್ಲಿ ಪ್ರಭಾವಿ ‘ಕುಶ್ವಾಹ’ (ಒಬಿಸಿ) ಸಮುದಾಯಕ್ಕೆ ಸೇರಿದ 57 ವರ್ಷದ ಸಾಮ್ರಾಟ್ ಚೌಧರಿ, ಈ ಸಮುದಾಯದಿಂದ ಮುಖ್ಯಮಂತ್ರಿ ಗಾದಿಗೇರಿದ ಎರಡನೇ ನಾಯಕರಾಗಿದ್ದಾರೆ. 1968ರಲ್ಲಿ ಕೇವಲ ಐದು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸತೀಶ್ ಪ್ರಸಾದ್ ಸಿಂಗ್ ಈ ಸಮುದಾಯದ ಮೊದಲ ಸಿಎಂ ಆಗಿದ್ದರು.
1999ರಲ್ಲಿ ಆರ್ಜೆಡಿಯ ರಾಬ್ರಿ ದೇವಿ ಸಂಪುಟದಲ್ಲಿ ಸಚಿವರಾಗಿ ರಾಜಕೀಯ ಪ್ರವೇಶಿಸಿದ್ದ ಚೌಧರಿ, ವಯಸ್ಸಿನ ವಿವಾದದ ಕಾರಣಕ್ಕೆ ಅಲ್ಪಾವಧಿಯಲ್ಲೇ ಸ್ಥಾನ ಕಳೆದುಕೊಂಡಿದ್ದರು. ಬಳಿಕ 2000ನೇ ಇಸವಿಯಲ್ಲಿ ಮರು ಆಯ್ಕೆಯಾಗಿ ಪೂರ್ಣಾವಧಿ ಪೂರೈಸಿದ ಅವರು, ಆರ್ಜೆಡಿಯ ಮುಖ್ಯ ಸಚೇತಕರಾಗಿಯೂ ಕಾರ್ಯನಿರ್ವಹಿಸಿದ್ದರು.
2014ರಲ್ಲಿ ಜಿತನ್ ರಾಮ್ ಮಾಂಝಿ ಸರ್ಕಾರದಲ್ಲೂ ಸೇವೆ ಸಲ್ಲಿಸಿದ್ದ ಇವರು, 2017ರಲ್ಲಿ ಬಿಜೆಪಿ ಸೇರ್ಪಡೆಯಾಗುವ ಮೂಲಕ ತಮ್ಮ ರಾಜಕೀಯ ದಿಕ್ಕನ್ನು ಬದಲಾಯಿಸಿಕೊಂಡರು. ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ತಲೆಗೇರಿಸಿರುವ ಪೇಟವನ್ನು ತೆಗೆಯುವುದಿಲ್ಲ ಎಂದು ಶಪಥ ಮಾಡಿದ್ದ ಚೌಧರಿ ಅವರ ರಾಜಕೀಯ ಹೋರಾಟ ಇದೀಗ ನಿರ್ಣಾಯಕ ಘಟ್ಟ ತಲುಪಿ, ಬಿಹಾರದ ಅತ್ಯುನ್ನತ ಹುದ್ದೆಗೇರುವಂತೆ ಮಾಡಿದೆ.
‘ಸುಶಾಸನ ಬಾಬು’ ಯುಗದ ಅಂತ್ಯ
2005ರಿಂದ ಬರೋಬ್ಬರಿ ಹತ್ತು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ 75 ವರ್ಷದ ನಿತೀಶ್ ಕುಮಾರ್ ರಾಜೀನಾಮೆಯು, ಬಿಹಾರ ರಾಜಕಾರಣದ ಬಹುದೊಡ್ಡ ಅಧ್ಯಾಯವೊಂದರ ಅಂತ್ಯವನ್ನು ಸೂಚಿಸುತ್ತದೆ. ‘ಸುಶಾಸನ ಬಾಬು’ ಎಂದೇ ಖ್ಯಾತರಾಗಿದ್ದ ಅವರು, ಅತಿ ಹಿಂದುಳಿದ ವರ್ಗಗಳು (ಇಬಿಸಿ) ಮತ್ತು ದಲಿತರ ಬೆಂಬಲದೊಂದಿಗೆ ದಶಕಗಳ ಕಾಲ ಅಧಿಕಾರದ ಕೇಂದ್ರಬಿಂದುವಾಗಿದ್ದರು. ಎನ್ಡಿಎ ಮತ್ತು ಮಹಾಘಟಬಂಧನ್ ನಡುವಿನ ಅವರ ಆಗಾಗ್ಗಿನ ಮೈತ್ರಿ ಬದಲಾವಣೆಗಳು ಅವಕಾಶವಾದಿ ರಾಜಕಾರಣದ ಟೀಕೆಗೂ ಗುರಿಯಾಗಿತ್ತು. “ನ್ಯಾಯದೊಂದಿಗೆ ಅಭಿವೃದ್ಧಿ” ಎಂಬ ಘೋಷವಾಕ್ಯದೊಂದಿಗೆ ಆಡಳಿತ ನಡೆಸಿದ್ದ ನಿತೀಶ್ ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆ ಹಾಗೂ ರೈಲ್ವೆ ಆಧುನೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಬಿಜೆಪಿ ನಾಯಕತ್ವಕ್ಕೆ ಅಧಿಕಾರ ಹಸ್ತಾಂತರಿಸುವ ಮೂಲಕ, ಬಿಹಾರದ ಅಧಿಕಾರ ಪೀಠದಲ್ಲಿ ಹೊಸ ಶಕೆಯೊಂದು ಆರಂಭವಾಗಿದೆ.
ಇದನ್ನೂ ಓದಿ : ಮೋದಿಯಿಂದ ಭೈರವೈಕ್ಯ ಮಂದಿರ ಉದ್ಘಾಟನೆ!


















