ನವದೆಹಲಿ: ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಇಂದು ಮುಂಜಾನೆ ಏಕಾಏಕಿ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ, ನೀಟ್ ಹಗರಣದ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಅಭಿಜೀತ್ ದಿಪ್ಕೆ ಅವರು ಜಂತರ್ ಮಂತರ್ನಲ್ಲಿ ಇಂದಿನಿಂದಲೇ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ವಾಂಗ್ಚುಕ್ ಅವರ ಗೈರಿನಲ್ಲೂ ಪ್ರತಿಭಟನೆ ಮುಂದುವರಿಯಲಿದ್ದು, ಜುಲೈ 20ರಂದು ನಿಗದಿಯಾಗಿರುವ ‘ಸಂಸತ್ ಚಲೋ’ ಹಕ್ಕೊತ್ತಾಯದ ಬೃಹತ್ ಮೆರವಣಿಗೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ವಿರುದ್ಧ ಅಭಿಜೀತ್ ದಿಪ್ಕೆ ಆಕ್ರೋಶ
ವಾಂಗ್ಚುಕ್ ಅವರನ್ನು ಪೊಲೀಸರು ಬಲವಂತವಾಗಿ ತೆರವುಗೊಳಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಅಭಿಜೀತ್ ದಿಪ್ಕೆ, “ನಾನು ಇಂದಿನಿಂದಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸುತ್ತಿದ್ದೇನೆ. ನಮ್ಮ ಹೋರಾಟಗಾರರು ಯಾರೂ ಧೃತಿಗೆಡಬಾರದು, ಈ ಆಂದೋಲನವು ಇನ್ಮುಂದೆ ಮತ್ತಷ್ಟು ಬೃಹತ್ ರೂಪ ಪಡೆದುಕೊಳ್ಳಲಿದೆ. ಸರ್ಕಾರ ಮತ್ತು ಪೊಲೀಸರು ವಾಂಗ್ಚುಕ್ ಅವರನ್ನು ಮುಟ್ಟುವ ಮೂಲಕ ದೊಡ್ಡ ತಪ್ಪು ಮಾಡಿದ್ದಾರೆ. ದೇಶದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಜಂತರ್ ಮಂತರ್ ತಲುಪಬೇಕು. ನಮ್ಮ ಹೋರಾಟ ಇಲ್ಲಿಂದಲೇ ಮುಂದುವರಿಯಲಿದ್ದು, ಜುಲೈ 20ರಂದು ನಿಗದಿತ ವೇಳಾಪಟ್ಟಿಯಂತೆಯೇ ಸಂಸತ್ತಿಗೆ ಮಾರ್ಚ್ ನಡೆಸಲಿದ್ದೇವೆ” ಎಂದು ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಪೊಲೀಸರ ಕಾರ್ಯಾಚರಣೆಗೆ ಆಪ್ ಕಿಡಿ
ಇದೇ ವೇಳೆ, ವಾಂಗ್ಚುಕ್ ಅವರನ್ನು ರಹಸ್ಯವಾಗಿ ಕರೆದೊಯ್ಯಲು ನಾಗರಿಕ ಉಡುಪಿನಲ್ಲಿ ಬಂದಿದ್ದ ಪೊಲೀಸರನ್ನು ಬಳಸಿಕೊಂಡಿರುವ ಕ್ರಮದ ವಿರುದ್ಧ ಆಮ್ ಆದ್ಮಿ ಪಕ್ಷ (AAP) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆಪ್ ನಾಯಕ ಸೌರಭ್ ಭಾರದ್ವಾಜ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದು, “ಮೋದಿ ಸರ್ಕಾರದ ದೆಹಲಿ ಪೊಲೀಸರು ಸಿವಿಲ್ ಉಡುಪು ಮತ್ತು ಸ್ಪೋರ್ಟ್ಸ್ ಶೂ ಧರಿಸಿ ಗೂಂಡಾಗಳಂತೆ ಪ್ರತಿಭಟನಾ ಸ್ಥಳಕ್ಕೆ ನುಗ್ಗಿದ್ದಾರೆ. ಸೋನಮ್ ವಾಂಗ್ಚುಕ್ ಅವರೊಂದಿಗೆ ಪೊಲೀಸರು ನಡೆಸಿದ ದೌರ್ಜನ್ಯ ಮತ್ತು ಮೈಕೈ ಮುಟ್ಟುವ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಸೆರೆಯಾಗಬಾರದು ಎಂಬ ಕಾರಣಕ್ಕಾಗಿಯೇ ಸುತ್ತಲೂ ಡಜನ್ಗಟ್ಟಲೆ ಬಿಳಿ ಚಾದರಗಳನ್ನು (ಬೆಡ್ಶೀಟ್) ಹಿಡಿದು ಪರದೆ ನಿರ್ಮಿಸಿದ್ದರು” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
“ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ”: ವಿಪಕ್ಷಗಳ ವಾಗ್ದಾಳಿ
ವಾಂಗ್ಚುಕ್ ಅವರ ಬಲವಂತದ ಸ್ಥಳಾಂತರವನ್ನು ವಿರೋಧ ಪಕ್ಷಗಳ ನಾಯಕರು ‘ಸರ್ವಾಧಿಕಾರಿ ಧೋರಣೆ’ ಎಂದು ಕಟುವಾಗಿ ಟೀಕಿಸಿದ್ದಾರೆ. ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಪ್ರತಿಕ್ರಿಯಿಸಿ, “ಸೋನಮ್ ವಾಂಗ್ಚುಕ್ ಅವರನ್ನು ಬಲವಂತವಾಗಿ ತೆರವುಗೊಳಿಸಿರುವುದು ಕೇವಲ ಒಂದು ಪೊಲೀಸ್ ಕ್ರಮವಲ್ಲ, ಇದು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಈಗ ಶಾಂತಿಯುತ ಪ್ರತಿಭಟನೆಗಳನ್ನು ಸಹ ಸಹಿಸಲು ಸಾಧ್ಯವಾಗುತ್ತಿಲ್ಲ, ಇದು ಸಂಪೂರ್ಣ ದಬ್ಬಾಳಿಕೆಯಾಗಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇತ್ತ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಸಾಗರಿಕಾ ಘೋಷ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, “ಇದು ಅತ್ಯಂತ ಆಘಾತಕಾರಿ ಮತ್ತು ಬಲವಂತದ ಆಡಳಿತಾತ್ಮಕ ಹಿಂಸಾಚಾರವಾಗಿದೆ. ನೈತಿಕವಾಗಿ ದಿವಾಳಿಯಾಗಿರುವ ನರೇಂದ್ರ ಮೋದಿ ನೇತೃತ್ವದ ಆಡಳಿತಕ್ಕೆ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಕೇವಲ ಪೊಲೀಸ್ ‘ದಂಡ’ (ಲಾಠಿ) ಬಳಸುವುದು ಮಾತ್ರ ಗೊತ್ತು. ಸರ್ಕಾರದ ಈ ದಮನಕಾರಿ ನೀತಿಯನ್ನು ಒಪ್ಪಲು ಸಾಧ್ಯವೇ ಇಲ್ಲ” ಎಂದು ಖಂಡಿಸಿದ್ದಾರೆ.


















