ನವದೆಹಲಿ : ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ತೀವ್ರ ಪ್ರತಿಭಟನೆ ಎದುರಿಸುತ್ತಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹ ಹೆಚ್ಚುತ್ತಿರುವ ಬೆನ್ನಲ್ಲೇ, ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್ ಆರಂಭವಾಗಿದೆ. ಇದರ ಬೆನ್ನಲ್ಲೇ ಸಚಿವರ ಮಗಳು ನೈಮಿಷಾ ಪ್ರಧಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಡಿಆ್ಯಕ್ಟಿವೇಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರು ನೈಮಿಷಾ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಹುಡುಕಿ ತೆಗೆದು, ಅವರ ಪೋಸ್ಟ್ಗಳ ಕಾಮೆಂಟ್ ವಿಭಾಗದಲ್ಲಿ ತೀವ್ರ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಹಾಕಿದ್ದಾರೆ. ತಂದೆ ಭಾರತದ ಶಿಕ್ಷಣ ಸಚಿವರಾಗಿದ್ದರೂ ಮಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿರುವುದನ್ನು ಪ್ರಶ್ನಿಸಿ ನೆಟ್ಟಿಗರು ಟೀಕೆಗಳ ಸುರಿಮಳೆ ಗೈದಿದ್ದಾರೆ. ಈ ಟ್ರೋಲಿಂಗ್ ಹೆಚ್ಚಾದ ಹಿನ್ನೆಲೆಯಲ್ಲಿ ನೈಮಿಷಾ ತಮ್ಮ ಖಾತೆಯನ್ನು ಡಿಲೀಟ್ ಮಾಡಿದ್ದು, ಪ್ರಸ್ತುತ ಅವರ ಯಾವುದೇ ಖಾತೆ ಸಕ್ರಿಯವಾಗಿಲ್ಲ ಎಂದು ವರದಿಯಾಗಿದೆ.
ಅಮೆರಿಕ ವಿಶ್ವವಿದ್ಯಾಲಯಕ್ಕೂ ತಲುಪಿದ ಟ್ರೋಲಿಂಗ್
ನೈಮಿಷಾ ಪ್ರಧಾನ್ ಅವರು 2023ರಲ್ಲಿ ಅಮೆರಿಕದ ಮೆಸಾಚುಸೆಟ್ಸ್ನಲ್ಲಿರುವ ಟಫ್ಟ್ಸ್ ವಿಶ್ವವಿದ್ಯಾಲಯದ ಫ್ಲೆಚರ್ ಶಾಲೆಯಿಂದ ಮಾಸ್ಟರ್ ಆಫ್ ಲಾಸ್ (LLM) ಪದವಿ ಪೂರ್ಣಗೊಳಿಸಿದ್ದರು. ಪದವಿಯ ನಂತರ ಅವರು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂನಲ್ಲಿ (USISPF) ಹಿರಿಯ ಸಹೋದ್ಯೋಗಿಯಾಗಿ ಸೇರಿಕೊಂಡಿದ್ದರು. ನೆಟ್ಟಿಗರ ಆಕ್ರೋಶ ಎಷ್ಟು ತೀವ್ರವಾಗಿತ್ತೆಂದರೆ, ಕೆಲವು ಬಳಕೆದಾರರು ಅವರು ವ್ಯಾಸಂಗ ಮಾಡಿದ ಟಫ್ಟ್ಸ್ ವಿಶ್ವವಿದ್ಯಾಲಯದ ಅಧಿಕೃತ ಸಾಮಾಜಿಕ ಜಾಲತಾಣ ಪುಟಗಳಿಗೂ ತೆರಳಿ ನೈಮಿಷಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಮೆಂಟ್ ಮಾಡಿದ್ದಾರೆ.
ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬೇಕಾದ ಸಚಿವರ ಮಗಳೇ ವಿದೇಶಕ್ಕೆ ಹೋಗಿ ಓದಿರುವುದು, ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯ ಅಭಾವವನ್ನು ತೋರಿಸುತ್ತದೆ ಎಂದು ಹಲವರು ವಾದಿಸಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಸಂಸತ್ ಚಲೋ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಕ್ರಮದ ನಂತರ ಈ ಜಾಲತಾಣದ ವಾಗ್ದಾಳಿ ಮತ್ತಷ್ಟು ತೀವ್ರಗೊಂಡಿತ್ತು.
ಸಾರ್ವಜನಿಕ ಜೀವನದಲ್ಲಿ ಇಲ್ಲದವರ ಟಾರ್ಗೆಟ್: ಕಳವಳ ವ್ಯಕ್ತ
ಅದೇ ಸಮಯದಲ್ಲಿ, ಯಾವುದೇ ಸಾರ್ವಜನಿಕ ಹುದ್ದೆಯಲ್ಲಿ ಇಲ್ಲದ ಅಥವಾ ರಾಜಕೀಯ ನಿರ್ಧಾರಗಳಲ್ಲಿ ಭಾಗಿಯಾಗದ ಕುಟುಂಬದ ಸದಸ್ಯರನ್ನು ಈ ರೀತಿ ಜಾಲತಾಣಗಳಲ್ಲಿ ಗುರಿಯಾಗಿಸುವುದನ್ನು ಹಲವರು ತೀವ್ರವಾಗಿ ಖಂಡಿಸಿದ್ದಾರೆ. ರಾಜಕೀಯ ವಿಮರ್ಶೆ ಮತ್ತು ಆಕ್ರೋಶವೇನಿದ್ದರೂ ಚುನಾಯಿತ ಜನಪ್ರತಿನಿಧಿಗಳು ಹಾಗೂ ನೀತಿ ನಿರೂಪಕರ ಮೇಲಿರಬೇಕೇ ಹೊರತು, ಸಾರ್ವಜನಿಕ ಜೀವನದಲ್ಲಿ ಇಲ್ಲದ ಸಂಬಂಧಿಕರ ಮೇಲಲ್ಲ ಎಂದು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಈ ಬೆಳವಣಿಗೆಯ ನಡುವೆಯೂ ಸಚಿವ ಧರ್ಮೇಂದ್ರ ಪ್ರಧಾನ್ ವಿಪಕ್ಷಗಳ ರಾಜೀನಾಮೆ ಆಗ್ರಹವನ್ನು ತಿರಸ್ಕರಿಸಿದ್ದಾರೆ. ವಿಪಕ್ಷಗಳು ವಿದ್ಯಾರ್ಥಿಗಳ ಸಮಸ್ಯೆಯನ್ನು ರಾಜಕೀಯಗೊಳಿಸುತ್ತಿವೆ ಹಾಗೂ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ : ಜಂತರ್ ಮಂತರ್ನಲ್ಲಿ ಯುವತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಪೊಲೀಸ್ ಅಧಿಕಾರಿ ವರ್ಗಾವಣೆ!


















