ಬೆಳಗಾವಿ : ಬೀಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಗರ್ಭದಲ್ಲಿದ್ದ ನವಜಾತ ಹೆಣ್ಣು ಶಿಶು ಸಾವನ್ನಪ್ಪಿದ ಆರೋಪ ಕೇಳಿಬಂದಿರುವ ಘಟನೆ ಬೆಳಗಾವಿ ಜಿಲ್ಲೆಯ ತುರಮರಿ ಗ್ರಾಮದಲ್ಲಿ ನಡೆದಿದೆ.
ತುರಮರಿ ಗ್ರಾಮದ ಈರಮ್ಮ ಈರಪ್ಪ ಶಿಗೀಹಳ್ಳಿ (21) ಅವರನ್ನು ಏಪ್ರಿಲ್ 10ರಂದು ಮಧ್ಯಾಹ್ನ 12 ಗಂಟೆಗೆ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿದ ದಿನದಿಂದ ಸರಿಯಾದ ಚಿಕಿತ್ಸೆ ನೀಡಲಾಗಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯರಾತ್ರಿ ಸುಮಾರು 1.30ರ ಸುಮಾರಿಗೆ ಬಾಣಂತಿ ಮೃತಪಟ್ಟಿದ್ದು, ಗರ್ಭದಲ್ಲಿದ್ದ ಹೆಣ್ಣು ಶಿಶುವೂ ಸಾವನ್ನಪ್ಪಿದೆ. ಈ ಘಟನೆಯಿಂದ ಕುಟುಂಬಸ್ಥರು ತೀವ್ರ ದುಃಖಕ್ಕೀಡಾಗಿ, ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಎಪಿಎಂಸಿ ಸಿಪಿಐ ಉಸ್ಮಾನ ಆವಟಿ ಹಾಗೂ ಪಿಎಸ್ಐ ಸರ್ದಾರ್ ಮುತ್ತತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಶಿವಮೊಗ್ಗ : ಬೈಕ್ ಅಪಘಾತ ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿ – ಹಲವರಿಗೆ ಗಾಯ


















