ವಿಜಯನಗರ : ಜಿಲ್ಲೆಯ ಕೂಡ್ಲಿಗಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭು ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಹಣದಾಸೆಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವುದಾಗಿ ಆರೋಪಿಸಿರುವ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಕಾರ್ಯಕರ್ತರು, ಪ್ರಭು ಅವರನ್ನು ತಕ್ಷಣ ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಡಿಎಸ್ಎಸ್ ಆರೋಪದ ಪ್ರಕಾರ, ಒಳ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಿ, ಹಿಂದೂ ಸುಡುಗಾಡು ಸಿದ್ಧರು ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಪರಿಶಿಷ್ಟ ಜಾತಿಯ ಎ ಗುಂಪಿನ ಮಾದಿಗ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಸುಡುಗಾಡು ಸಿದ್ಧರು ಸಮುದಾಯವು ಪ್ರವರ್ಗ ‘ಸಿ’ಗೆ ಸೇರಿದ್ದರೂ, ಮಾದಿಗ ಜಾತಿಯ ಪ್ರಮಾಣ ಪತ್ರ ನೀಡಿರುವುದು ನಿಯಮಬಾಹಿರ ಎಂದು ಡಿಎಸ್ಎಸ್ ಆರೋಪಿಸಿದೆ.

ಇದೇ ಪ್ರಕರಣದಲ್ಲಿ, ಅರ್ಜಿಯನ್ನು ಗ್ರಾಮ ಲೆಕ್ಕಾಧಿಕಾರಿಯೇ ಈಗಾಗಲೇ ತಿರಸ್ಕರಿಸಿದ್ದರು. ಆದರೆ ನಂತರ ಕಂದಾಯ ನಿರೀಕ್ಷಕರು ತಮ್ಮ ಪ್ರಭಾವ ಬಳಸಿ ಜಾತಿ ಪ್ರಮಾಣ ಪತ್ರ ಮಂಜೂರು ಮಾಡಿದ್ದಾರೆ ಎಂದು ಡಿಎಸ್ಎಸ್ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣದ ಕೇಂದ್ರಬಿಂದುವಾಗಿರುವವರು ಕೂಡ್ಲಿಗಿ ತಾಲ್ಲೂಕಿನ ಬಡೇಲಡುಕು ಗ್ರಾಮದ ನಿವಾಸಿ ಇಂದಿರಾ ಗುಂಡಪಲ್ಲಿ, ಪತಿ ವಿ. ಅಪ್ಪೊಜಿ ಎಂದು ತಿಳಿಸಲಾಗಿದೆ. ಇವರು ಹಿಂದೂ ಸುಡುಗಾಡು ಸಿದ್ಧರು ಸಮುದಾಯಕ್ಕೆ ಸೇರಿದವರಾಗಿದ್ದು, ಇವರಿಗೆ ಮಾದಿಗ ಜಾತಿ ಪ್ರಮಾಣ ಪತ್ರ ನೀಡಿರುವುದೇ ವಿವಾದಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿರುವ ಡಿಎಸ್ಎಸ್, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಇಲಾಖೆ ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ : ಕ್ರಿಪ್ಟೋ ಕರೆನ್ಸಿ ಎಕ್ಸ್ಚೇಂಜ್ ಹೆಸರಲ್ಲಿ 17.64 ಲಕ್ಷ ದರೋಡೆ ; 12 ಆರೋಪಿಗಳ ಬಂಧನ


















