ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಗುರುವಾರ) 76ನೇ ಜನ್ಮದಿನ ಆಚರಿಸುತ್ತಿದ್ದು, ಇದರ ಅಂಗವಾಗಿ ಬಿಜೆಪಿ ದೇಶಾದ್ಯಂತ ಒಂದು ತಿಂಗಳ ಅವಧಿಯ ‘ಸೇವಾ ಸಂಕಲ್ಪ ಅಭಿಯಾನ’ ಎಂಬ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಬೃಹತ್ ಜಾಗೃತಿ ಹಾಗೂ ಸೇವಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ, ಸೆ.17ರಿಂದ ಅ.17ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜಕೀಯ ಗಣ್ಯರು, ಬಿಜೆಪಿ ನಾಯಕರು ಸೇರಿದಂತೆ ಹಲವಾರು ಗಣ್ಯರು ಇಂದು ಪ್ರಧಾನಿ ಮೋದಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಹೇಳಿದ್ದಾರೆ.
ಅಕ್ಟೋಬರ್ನಲ್ಲಿ 25 ವರ್ಷಗಳ ಸಾರ್ವಜನಿಕ ಸೇವೆ ಪೂರ್ಣ
ಸೆಪ್ಟೆಂಬರ್ 17 ಪ್ರಧಾನಿ ಮೋದಿ ಅವರ ಜನ್ಮದಿನವಾಗಿದ್ದರೆ, ಮುಂಬರುವ ಅಕ್ಟೋಬರ್ ತಿಂಗಳು ಅವರ ರಾಜಕೀಯ ಹಾಗೂ ಸಾರ್ವಜನಿಕ ಜೀವನಕ್ಕೆ 25 ವರ್ಷ ತುಂಬುವ ಐತಿಹಾಸಿಕ ಕ್ಷಣವಾಗಿದೆ. ಸೆಪ್ಟೆಂಬರ್ 9 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಈ ಅಭಿಯಾನದ ಸಂಪೂರ್ಣ ರೂಪುರೇಷೆಗಳನ್ನು ಪ್ರಕಟಿಸಿದ್ದರು.
“2001ರ ಅಕ್ಟೋಬರ್ 7 ರಂದು ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಅವರ ಸಾರ್ವಜನಿಕ ಸೇವಾ ಪಯಣ ಆರಂಭವಾಯಿತು. ಕಳೆದ 25 ವರ್ಷಗಳಿಂದ ಅವರು ‘ಜನಸೇವೆಯೇ ರಾಷ್ಟ್ರಸೇವೆ’ ಎಂಬ ಮಂತ್ರದೊಂದಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ” ಎಂದು ನಿತಿನ್ ನವೀನ್ ಹೇಳಿದ್ದರು.
ಉಜ್ಜಯಿನಿಯಿಂದ ಅಭಿಯಾನಕ್ಕೆ ಚಾಲನೆ
ಪ್ರಧಾನಿ ಮೋದಿ ಜನ್ಮದಿನವನ್ನು ಬಿಜೆಪಿ ಪ್ರತಿ ವರ್ಷ ‘ಸೇವಾ ದಿವಸ’ವಾಗಿ ಆಚರಿಸಿಕೊಂಡು ಬರುತ್ತಿದೆ. ಈ ಬಾರಿಯ ‘ಸೇವಾ ಸಂಕಲ್ಪ ಅಭಿಯಾನ’ವು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ದೇಶಾದ್ಯಂತ ನಡೆಯಲಿದೆ. ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳನ ನಗರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಅವರೊಂದಿಗೆ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಅಭಿವೃದ್ಧಿ ಮತ್ತು ದೇಶಸೇವೆಯ ಸಂದೇಶ ರವಾನೆ
ಈ ತಿಂಗಳ ಪರ್ಯಂತ ನಡೆಯುವ ಅಭಿಯಾನದಲ್ಲಿ ಸಾರ್ವಜನಿಕ ಸಂಪರ್ಕ ಹಾಗೂ ವಿಧವಿಧದ ಸೇವಾ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತದೆ. ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನದ ಅಭಿವೃದ್ಧಿ ಕಾರ್ಯಗಳು, ದೇಶ ನಿರ್ಮಾಣದ ಯೋಜನೆಗಳು ಹಾಗೂ ಅವರ ಸಾಧನೆಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈ ರಾಷ್ಟ್ರಸೇವಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಕರೆ ನೀಡಿದೆ.
ಇದನ್ನೂ ಓದಿ : ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ ಹ್ಯಾರಿ ಬ್ರೂಕ್ ; ‘ಹೀರೋ’ ಕೆವಿನ್ ಪೀಟರ್ಸನ್ರಿಂದ ಕಲಿಯಲು ಕಾತರ!



















