ರಾಂಚಿ : ಐಷಾರಾಮಿ ಜೀವನದ ವ್ಯಾಮೋಹ ಮತ್ತು ಹಣದ ಆಸೆ ಮನುಷ್ಯನನ್ನು ಎಂತಹ ಕ್ರೌರ್ಯಕ್ಕೂ ದೂಡಬಲ್ಲದು ಎಂಬುದಕ್ಕೆ ಜಾರ್ಖಂಡ್ನ ರಾಂಚಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನ ತಂದೆ ಬಿಟ್ಟುಹೋಗಿದ್ದ ಲಕ್ಷಾಂತರ ರೂಪಾಯಿ ಹಣ ಹಾಗೂ ಅನುಕಂಪದ ಆಧಾರದ ಮೇಲೆ ಸಿಗುವ ಕೆಲಸಕ್ಕಾಗಿ, 17 ವರ್ಷದ ಅಪ್ರಾಪ್ತ ಮಗಳು ತನ್ನ ಪ್ರಿಯತಮನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಬಲಿಪಡೆದಿದ್ದಾಳೆ.
ಮಣಿತೋಲಾದ ನಿವಾಸಿಯಾಗಿದ್ದ ನಹೀದಾ ಪರ್ವೀನ್ ಅವರು ತನ್ನ ದತ್ತುಪುತ್ರಿಯೊಂದಿಗೆ ವಾಸವಾಗಿದ್ದರು. ನಾಲ್ಕು ವರ್ಷಗಳ ಹಿಂದೆ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನಹೀದಾ ಅವರ ಪತಿ ನಿಧನರಾಗಿದ್ದರು. ಪತಿಯ ನಿಧನದ ನಂತರ ಬಂದಿದ್ದ ಸುಮಾರು 45 ಲಕ್ಷ ರೂಪಾಯಿ ಪರಿಹಾರದ ಹಣಕ್ಕೆ ಮಗಳೇ ನಾಮಿನಿಯಾಗಿದ್ದಳು.
ಆದರೆ, ಈ ಹಣವನ್ನು ಮಗಳು ತನ್ನ ಪ್ರಿಯಕರ ಅರ್ಬಾಜ್ಗೆ ನೀಡುತ್ತಿದ್ದುದನ್ನು ಗಮನಿಸಿದ ನಹೀದಾ, ಮಗಳ ಹಣಕಾಸಿನ ವಹಿವಾಟಿಗೆ ಬ್ರೇಕ್ ಹಾಕಿದ್ದರು. ಇದೇ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ತಾಯಿಯ ಅಡ್ಡಿಯಿಂದ ಬೇಸತ್ತ ಮಗಳು ಮತ್ತು ಆಕೆಯ ಪ್ರಿಯಕರ, ನಹೀದಾ ಅವರನ್ನು ಮುಗಿಸಲು ಸ್ಕೆಚ್ ಹಾಕಿದ್ದರು. ತಾಯಿ ಮೃತಪಟ್ಟರೆ ಹಣದ ಜೊತೆಗೆ ತಂದೆಯ ಕೆಲಸವೂ ತನಗೆ ಸಿಗುತ್ತದೆ ಎಂಬುದು ಮಗಳ ಲೆಕ್ಕಾಚಾರವಾಗಿತ್ತು.
ದಿಂಬಿನಿಂದ ಉಸಿರುಗಟ್ಟಿಸಿ ಬರ್ಬರ ಕೊಲೆ
ಏಪ್ರಿಲ್ 24ರ ಶುಕ್ರವಾರ ರಾತ್ರಿ, ನಹೀದಾ ಅವರು ಗಾಢ ನಿದ್ರೆಯಲ್ಲಿದ್ದಾಗ ಈ ಭೀಕರ ಕೃತ್ಯ ನಡೆದಿದೆ. ಮಗಳು ತನ್ನ ಪ್ರಿಯಕರ ಹಾಗೂ ಆತನ ಮೂವರು ಸ್ನೇಹಿತರಿಗೆ ತಾಯಿಯನ್ನು ಕೊಲ್ಲಲು 12 ಲಕ್ಷ ರೂ.ಗಳ ಸುಪಾರಿ ನೀಡಿದ್ದಳು ಎನ್ನಲಾಗಿದೆ. ಮೊದಲೇ ರೂಪಿಸಿದ್ದ ಸಂಚಿನಂತೆ ಮನೆಗೆ ನುಗ್ಗಿದ ಆರೋಪಿಗಳು, ನಹೀದಾ ಅವರ ಕೈಕಾಲುಗಳನ್ನು ಹಿಡಿದುಕೊಂಡು ಮುಖದ ಮೇಲೆ ದಿಂಬು ಒತ್ತಿ ಉಸಿರುಗಟ್ಟಿಸಿದ್ದಾರೆ.
ಈ ವೇಳೆ ಪ್ರತಿರೋಧ ಒಡ್ಡಿದ ನಹೀದಾ ಅವರ ಕುತ್ತಿಗೆಗೆ ತೀವ್ರ ಗಾಯಗಳಾಗಿ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಹಾಸಿಗೆಯನ್ನು ಮನೆಯ ಸಮೀಪದ ಮರವೊಂದರ ಬಳಿ ಬಚ್ಚಿಟ್ಟು, ಮೃತದೇಹವನ್ನು ಡೀಪ್ ಫ್ರೀಜರ್ನಲ್ಲಿ ಇರಿಸಲಾಗಿತ್ತು.
ಅಪಘಾತ ಎಂದು ನಂಬಿಸಲು ಯತ್ನಿಸಿ ಸಿಕ್ಕಿಬಿದ್ದ ಮಗಳು
ಮರುದಿನ ಬೆಳಗ್ಗೆ ಮಗಳು ತನ್ನ ಸಂಬಂಧಿಕರಿಗೆ ಫೋನ್ ಮಾಡಿ, ತಾಯಿ ಬಾತ್ರೂಮ್ನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಕಟ್ಟುಕಥೆ ಹೇಳಿದ್ದಳು. ಇದನ್ನು ನಂಬಿದ ಸಂಬಂಧಿಕರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಶವವನ್ನು ಹೂತು ಹಾಕಿದ್ದರು. ಆದರೆ, ನಹೀದಾ ಅವರ ಕುತ್ತಿಗೆಯ ಮೇಲಿದ್ದ ಗಾಯದ ಗುರುತುಗಳು ಸಂಬಂಧಿಕರಲ್ಲಿ ಅನುಮಾನ ಮೂಡಿಸಿತ್ತು. ಈ ಬಗ್ಗೆ ನಹೀದಾ ಅವರ ಭಾವ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣದ ಸುರುಳಿ ಬಿಚ್ಚಿಕೊಳ್ಳಲಾರಂಭಿಸಿತು.
ಪೊಲೀಸ್ ತನಿಖೆ ವೇಳೆ ತಪ್ಪೊಪ್ಪಿಗೆ
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಿಹಾರದ ಗಯಾದಲ್ಲಿದ್ದ ಪ್ರಿಯಕರ ಅರ್ಬಾಜ್ ಹಾಗೂ ಮಗಳನ್ನು ವಶಕ್ಕೆ ಪಡೆದರು. ವಿಚಾರಣೆಯ ವೇಳೆ ಮಗಳು ತನ್ನ ತಾಯಿಯನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆಯ ಎರಡು ದಿನಗಳ ನಂತರ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ರಾಂಚಿ ನಗರ ಪೊಲೀಸ್ ವರಿಷ್ಠಾಧಿಕಾರಿ ಪಾರಸ್ ರಾಣಾ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ.
ಇದನ್ನೂ ಓದಿ : ಭೀಕರ ಅಫಘಾತ.. ಎಸ್ಯುವಿಗೆ ಪಿಕಪ್ ಡಿಕ್ಕಿಯಾಗಿ 15 ಮಂದಿ ದುರ್ಮರಣ!



















