ಲಕ್ನೋ : ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಭಾರಿ ಪ್ರಮಾಣದ ದುರುಪಯೋಗ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಹಾಗೂ ಪೊಲೀಸರು ಇದೀಗ ದೇಣಿಗೆ ಹಣ ಎಣಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದ ಮತ್ತು ಟ್ರಸ್ಟ್ನ ಪ್ರಮುಖರ ಆಪ್ತರಾಗಿದ್ದ ಮಾಜಿ ಚಾಲಕ, ಮಾಜಿ ಬ್ಯಾಂಕ್ ಉದ್ಯೋಗಿ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಗುರುವಾರ ತಡರಾತ್ರಿ ಅಯೋಧ್ಯೆಯಲ್ಲಿ ಬಂಧಿಸಿದ್ದಾರೆ.
7.5 ಕೋಟಿ ರೂಪಾಯಿ ನಾಪತ್ತೆ!
ರಾಮಮಂದಿರದಲ್ಲಿ ಸುಮಾರು 7 ರಿಂದ 7.5 ಕೋಟಿ ರೂಪಾಯಿಗಳಷ್ಟು ದೇಣಿಗೆ ಹಣ ನಾಪತ್ತೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಂದಿರದ ಒಳಗೆ ಇರಿಸಲಾಗಿರುವ ಕಾಣಿಕೆ ಹುಂಡಿಗಳಿಂದ ಹಣವನ್ನು ಎಣಿಕೆ ಮಾಡುವ ಸಂದರ್ಭದಲ್ಲಿ ಈ ಲೂಟಿ ನಡೆದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳಾದ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಮಾಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂಬುವವರನ್ನು ಪೊಲೀಸರು ಎಫ್ಐಆರ್ ದಾಖಲಿಸಿ ಬಂಧಿಸಿದ್ದಾರೆ. ಇವರೆಲ್ಲರನ್ನೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ಆರೋಪಿಗಳ ಹಿನ್ನೆಲೆಯೇನು?
ಬಂಧಿತರಲ್ಲಿ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂಬಾತ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಮಾಜಿ ಚಾಲಕ. ಈತನ ಬಳಿಯೇ ಕಾಣಿಕೆ ಹುಂಡಿಗಳ ಕೀಲಿ ಕೈ ಇರುತ್ತಿತ್ತು ಮತ್ತು ಈತನೇ ಈ ಇಡೀ ಹಗರಣದ ಪ್ರಮುಖ ಸೂತ್ರಧಾರ ಎಂದು ಶಂಕಿಸಲಾಗಿದೆ. ಮತ್ತೊಬ್ಬ ಆರೋಪಿ ರಮಾಶಂಕರ್ ಮಿಶ್ರಾ ಎಂಬಾತ ತನ್ನ ಮಗ ಅನುಕಲ್ಪ್ ಮಿಶ್ರಾ ಮತ್ತು ಅಳಿಯ ಲವಕುಶ್ ಮಿಶ್ರಾ ಇಬ್ಬರನ್ನೂ ಹಣ ಎಣಿಸುವ ಕೆಲಸಕ್ಕೆ ಸೇರಿಸಿಕೊಂಡು ಸಂಚು ರೂಪಿಸಿದ್ದ. ಲವಕುಶ್ ಮನೆಯಿಂದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನುಳಿದಂತೆ ಮಾಜಿ ಬ್ಯಾಂಕ್ ಉದ್ಯೋಗಿ ಸುಭಾಷ್ ಶ್ರೀವಾಸ್ತವ ನಗದು ಎಣಿಕೆಯ ಸಿಬ್ಬಂದಿಯ ಉಸ್ತುವಾರಿಯಾಗಿದ್ದರೆ, ಕರುಣೇಶ್ ಪಾಂಡೆ ರಸೀದಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ. ಇದೇ ವೇಳೆ, ಮಂದಿರದ ಸಹಾಯಕ ಅವಿನಾಶ್ ಶುಕ್ಲಾ ಬ್ಯಾಂಕ್ ಖಾತೆಗೆ 5 ಲಕ್ಷ ರೂ. ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.
ಆರಂಭದಲ್ಲಿ ನಿರಾಕರಣೆ, ಬಳಿಕ ಎಸ್ಐಟಿ ತನಿಖೆ
ಜೂನ್ ತಿಂಗಳ ಆರಂಭದಲ್ಲಿ ಈ ಹಗರಣದ ಸುದ್ದಿ ಹೊರಬಂದಾಗ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಇದನ್ನು ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಹಯೋಗದಲ್ಲಿ ನಿಯಮಿತ ಆಡಿಟ್ ನಡೆಯುತ್ತಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ ಎಂದಿದ್ದರು. ಆದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಈ ಬಗ್ಗೆ ತನಿಖೆಯಾಗಲೇಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮತ್ತು ವಿವಾದ ತೀವ್ರಗೊಂಡ ಕಾರಣ ಜೂನ್ 13 ರಂದು ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿತು. ಈ ತಂಡವು ಜೂನ್ 23ರಂದು ತನ್ನ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಬೆನ್ನಲ್ಲೇ ಈ ಪ್ರಮುಖ ಬಂಧನಗಳು ನಡೆದಿವೆ.
ಪ್ರತಿಪಕ್ಷಗಳ ಆಕ್ರೋಶ
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಕೆಳಹಂತದ ಸಿಬ್ಬಂದಿಗಳನ್ನು ಬಂಧಿಸಿರುವುದು ಕಣ್ಣೊರೆಸುವ ತಂತ್ರ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರಂತಹ ಹಿರಿಯ ಪದಾಧಿಕಾರಿಗಳ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಸದ್ಯ ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕಳ್ಳತನ, ನಂಬಿಕೆ ದ್ರೋಹ ಮತ್ತು ಅಪರಾಧ ಸಂಚು ರೂಪಿಸಿದ ಗಂಭೀರ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಚುರುಕಿನಿಂದ ಸಾಗಿದೆ.
ಇದನ್ನೂ ಓದಿ : ಬೈಕಲ್ಲಿ ಹೋಗುತ್ತಿದ್ದ ವೇಳೆ ಕೊಂಬೆ ಬಿದ್ದು ಕೋಮಾಗೆ ಜಾರಿದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ!



















