ಬೆಂಗಳೂರು : ಕಾಪರ್ ವೈರ್ ಕಳ್ಳತನ ಮಾಡಲು ವಿಮಾನದಲ್ಲಿ ಬಂದು, ಬಳಿಕ ರೈಲಿನಲ್ಲಿ ಪರಾರಿಯಾಗುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರವಿ ಚವ್ಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಎಂದು ಗುರುತಿಸಲಾಗಿದೆ. ಇವರು ಉತ್ತರ ಪ್ರದೇಶ ಮೂಲದವರಾಗಿದ್ದಾರೆ.
ಈ ಆರೋಪಿಗಳು ವಿಶೇಷವಾಗಿ BSNL ಸಂಸ್ಥೆಯ ಕಾಪರ್ ವೈರ್ ಹಾಗೂ ಮಾಡ್ಯೂಲ್ಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಟೆಲಿಫೋನ್ ಸಿಬ್ಬಂದಿಯಂತೆ ಕಾಣಲು ನೀಲಿ ಬಣ್ಣದ ಯೂನಿಫಾರ್ಮ್ ಧರಿಸಿ, ರಿಪೇರಿ ಕೆಲಸ ಮಾಡುವಂತೆ ನಾಟಕವಾಡುತ್ತಿದ್ದರು.
ನಗರದ ಸದಾಶಿವನಗರ, ಮತ್ತಿಕೆರೆ, ಮಲ್ಲೇಶ್ವರಂ ಹಾಗೂ ಯಶವಂತಪುರ ಪ್ರದೇಶಗಳಲ್ಲಿ ಕಳ್ಳತನ ನಡೆಸಿದ್ದ ಆರೋಪಿಗಳು, ಫುಟ್ಪಾತ್ನಲ್ಲಿ ಅಳವಡಿಸಿರುವ ಟೆಲಿಫೋನ್ ಮತ್ತು ಇಂಟರ್ನೆಟ್ ಸಂಪರ್ಕದ ಪಿಲ್ಲರ್ಗಳನ್ನು ಪಿಕಾಸಿ, ಸುತ್ತಿಗೆ, ಸ್ಕ್ರೂಡ್ರೈವರ್ ಮತ್ತು ಕಟರ್ ಬಳಸಿ ಒಡೆದು ಕಾಪರ್ ವೈರ್ ಕಳವು ಮಾಡುತ್ತಿದ್ದರು.
ಕಳ್ಳತನಕ್ಕೆ ಮುನ್ನ ವಿಮಾನದಲ್ಲಿ ನಗರಕ್ಕೆ ಬಂದು, ಕಳ್ಳತನ ಮಾಡಿದ ನಂತರ ರೈಲಿನಲ್ಲಿ ಮಾಲು ಸಾಗಿಸಿ ಪರಾರಿಯಾಗುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಕಳೆದ ಏ.17 ಮತ್ತು 19 ರಂದು ನಡೆದ ಕಳ್ಳತನ ಪ್ರಕರಣಗಳ ಸಂಬಂಧ BSNL ಸಿಬ್ಬಂದಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳಿಂದ ಕಳ್ಳತನಕ್ಕೆ ಬಳಸಿದ ಉಪಕರಣಗಳು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಮುಂಬೈ ಇಂಡಿಯನ್ಸ್ಗೆ ಆಘಾತ : ಅದ್ಭುತ ಕ್ಯಾಚ್ ಹಿಡಿಯುವ ಭರದಲ್ಲಿ ಸ್ಯಾಂಟ್ನರ್ ಭುಜಕ್ಕೆ ಗಾಯ!



















