ವಿಜಯನಗರ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನೌಕರರೊಬ್ಬರು ಪ್ರಯಾಣಿಕರು ಬಸ್ನಲ್ಲಿ ಮರೆತು ಬಿಟ್ಟಿದ್ದ ಚಿನ್ನ ಮತ್ತು ಹಣವನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ಈ ಮಾನವೀಯ ಹಾಗೂ ನಿಷ್ಠಾವಂತ ನಡೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಹಿಳೆಯೊಬ್ಬರು ಕೊಟ್ಟೂರು ಮಾರ್ಗವಾಗಿ ಸಂಚರಿಸುತ್ತಿದ್ದ ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ತಮ್ಮ ಪರ್ಸ್ ಅನ್ನು ಬಸ್ ಸೀಟಿನಲ್ಲೇ ಬಿಟ್ಟು ಉಜ್ಜಿನಿಯಲ್ಲಿ ಇಳಿದಿದ್ದಾರೆ. ಇತ್ತ ಬಸ್ನಲ್ಲಿ ಸಿಕ್ಕಿದ್ದ ಪರ್ಸ್ ಪರಿಶೀಲಿಸಿದಾಗ ಅದರೊಳಗೆ ಸುಮಾರು 10 ಗ್ರಾಂ ಚಿನ್ನ ಹಾಗೂ ಒಂದು ಸಾವಿರ ರೂಪಾಯಿ ನಗದು ಇರುವುದು ಕಂಡುಬಂದಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಅಮೂಲ್ಯ ವಸ್ತುಗಳು ಕಳೆದು ಹೋಗುವ ಘಟನೆಗಳು ನಡೆಯುತ್ತವೆ. ಆದರೆ ಇಲ್ಲಿ ನಿರ್ವಾಹಕ ಬಸವರಾಜ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಪರ್ಸ್ ಸಿಕ್ಕ ತಕ್ಷಣ ಅದನ್ನು ಜೋಪಾನವಾಗಿಟ್ಟುಕೊಂಡಿದ್ದ ಕಂಡಕ್ಟರ್ ಬಸವರಾಜ್, ಬಳಿಕ ಮಹಿಳೆಯ ಸಂಪರ್ಕ ಪತ್ತೆಹಚ್ಚಿ ಚಿನ್ನ ಹಾಗೂ ಹಣ ಸಮೇತ ಪರ್ಸ್ ಅನ್ನು ಹಿಂದಿರುಗಿಸಿದ್ದಾರೆ. ಈ ಕಾರ್ಯದಲ್ಲಿ ಬಸ್ ಚಾಲಕ ಕೊಟ್ರೇಶ್ ಸಹ ಸಹಕರಿಸಿದ್ದು, ಇಬ್ಬರ ಸೇವಾ ಮನೋಭಾವಕ್ಕೆ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ನಂಬಿಕೆಯನ್ನು ಉಳಿಸುವ ಕೆಲಸ ಮಾಡಿದ್ದಾರೆ ಎಂದು ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಎಣ್ಣೆ ಏಟಲ್ಲಿ ಸ್ನೇಹಿತನ ಮೊಬೈಲ್ ಬಚ್ಚಿಟ್ಟ.. ಪ್ರಶ್ನೆ ಮಾಡಿದ್ದಕ್ಕೆ ಕೊಂದೇ ಬಿಟ್ಟ!


















