ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯಾಧಿಕಾರಿಯ ನಕಲಿ ಸಹಿ ಹಾಗೂ ದಾಖಲೆ ತಿದ್ದುಪಡಿ ಆರೋಪ ಕೇಳಿಬಂದಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಖಾಸಗಿ ವ್ಯಕ್ತಿಯ ಆಸ್ತಿಗೆ ಸಂಬಂಧಿಸಿದ ಕೆ.ಎಂ.ಎಫ್–24 ಬೇಡಿಕೆ ಪುಸ್ತಕ ಕೆಲ ದಿನಗಳ ಹಿಂದೆ ಪಟ್ಟಣ ಪಂಚಾಯಿತಿ ಕಚೇರಿಯಿಂದ ಕಾಣೆಯಾಗಿತ್ತು. ಬಳಿಕ ಅದೇ ಪುಸ್ತಕ ಪ್ರಭಾರ ಕರ ವಸೂಲಿಗಾರ ವಿಜಯಕುಮಾರ್ ಅವರ ಅಲಮಾರಿಯ ಪಕ್ಕದಲ್ಲಿ ಪತ್ತೆಯಾಗಿದ್ದು, ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಪುಸ್ತಕ ಪರಿಶೀಲನೆ ವೇಳೆ ಅದರಲ್ಲಿನ ಖಾತೆ ವಿವರಗಳಲ್ಲಿ ತಿದ್ದುಪಡಿ ಮಾಡಿರುವುದು ಗಮನಕ್ಕೆ ಬಂದ ಹಿನ್ನೆಲೆ ಅಧಿಕಾರಿಗಳು ಕಚೇರಿಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಪರಿಶೀಲನೆ ವೇಳೆ ತೆರಿಗೆ ಮೌಲ್ಯಮಾಪಕ ಬಿ.ಷಣ್ಮುಖ ಅವರ ಸಹಾಯದಿಂದ ಸಣ್ಣ ಗಾದೆಪ್ಪ ಹಾಗೂ ಬಾವಿಮನೆ ಆಸೀಫ್ ಅವರು ಬೇಡಿಕೆ ಪುಸ್ತಕವನ್ನು ಕಚೇರಿಯಿಂದ ಹೊರಗೆ ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಬಳಿಕ ಹೊರಗಡೆ ದಾಖಲೆಯಲ್ಲಿ ತಿದ್ದುಪಡಿ ನಡೆಸಿ, ಅದೇ ದಿನ ಸಂಜೆ ಮತ್ತೆ ಕಚೇರಿಗೆ ತಂದು ಇರಿಸಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಇದೇ ಪ್ರಕರಣದಲ್ಲಿ 3ನೇ ವಾರ್ಡ್ ನಿವಾಸಿಯಾಗಿದ್ದ ಲೇಟ್ ಮುಜಾವರ್ ಕಬೀರ್ ಸಾಬ್ ಅವರ ಹೆಸರಿನಲ್ಲಿದ್ದ ಖಾತೆಯನ್ನು ಶೇಖನ್ ಬಿ. ಹೆಸರಿಗೆ ಬದಲಾವಣೆ ಮಾಡಿರುವ ಆರೋಪವೂ ಕೇಳಿಬಂದಿದೆ. ಈ ಪ್ರಕ್ರಿಯೆಯಲ್ಲಿ ಹಿಂದಿನ ಮುಖ್ಯಾಧಿಕಾರಿ ಪ್ರೇಮ್ ಚಾರ್ಲ್ಸ್ ಅವರ ನಕಲಿ ಸಹಿ ಹಾಗೂ ನಕಲಿ ಮೊಹರು ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ದಾಖಲೆ ತಿದ್ದುಪಡಿ ಮೂಲಕ ಆಸ್ತಿ ಖಾತೆ ಬದಲಾವಣೆ ಮಾಡಲು ಯತ್ನಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪರಶುರಾಮ ಹಾಗೂ ಸಿಬ್ಬಂದಿ ಸುಬ್ರಹ್ಮಣ್ಯಂ ಅವರು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಬಾವಿಮನೆ ಆಸೀಫ್, ಬಿ.ಷಣ್ಮುಖ ಮತ್ತು ಸಣ್ಣ ಗಾದೆಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ತೆಕ್ಕಲಕೋಟೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಲ್ಯಾಂಡಿಗ್ ವೇಳೆ ನೆಲಕ್ಕಪ್ಪಳಿಸಿದ ವಿಮಾನದ ಹಿಂಭಾಗ : ಬೆಂಗಳೂರು ಏರ್ಪೋರ್ಟ್ನಲ್ಲಿ ತಪ್ಪಿದ ಭಾರೀ ಅನಾಹುತ!


















