ಬೆಂಗಳೂರು : ನಾಡಿನೆಲ್ಲೆಡೆ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆಮಾಡಿದೆ. ದೇಶಾದ್ಯಂತ ಮನೆಮನಗಳಲ್ಲಿ ಬಾಲಗೋಪಾಲನ ಆರಾಧನೆ, ವಿಶೇಷ ಪೂಜೆ ಹಾಗೂ ಭಕ್ತಿಗೀತೆಗಳ ಮೂಲಕ ಕೃಷ್ಣನಾಮ ಸ್ಮರಣೆ ನಡೆಯುತ್ತಿದೆ.
ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲೂ ಜನ್ಮಾಷ್ಟಮಿ ಹಿನ್ನೆಲೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಹೂವು-ದೀಪಾಲಂಕಾರ, ಬಾಲಕೃಷ್ಣನಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ನೆರವೇರಿತು.
ಬೆಂಗಳೂರಿನಾದ್ಯಂತ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದ್ದು, ಇಸ್ಕಾನ್ ದೇವಾಲಯದಲ್ಲಿ ಜನ್ಮಾಷ್ಟಮಿಯ ಪ್ರಯುಕ್ತ ಬೃಂದಾವನದ ಟೀಮ್ನಿಂದ ಮುಖ್ಯ ಮಂದಿರದಲ್ಲಿ ನವಿಲಿನ ಅಲಂಕಾರ ಮಾಡಲಾಗಿದೆ. ರಂಗ ಮಂದಿರದಲ್ಲಿ ವಿಶೇಷವಾಗಿ ರಾಧ-ಕೃಷ್ಣ ಉತ್ಸವ ಮೂರ್ತಿಗಳಿಗೆ 4 ಬಾರಿ 108 ಬಗೆಯ ಜಲಾಮೃತದ ಅಭಿಷೇಕವನ್ನ ಕೂಡ ಮಾಡಲಾಗ್ತಿದೆ.
ಇಂದು ರಾತ್ರಿ 12 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನದ ವ್ಯವಸ್ಥೆ ಇರಲಿದ್ದು, ಅಂದಾಜಿನ ಪ್ರಕಾರ 2 ರಿಂದ 3 ಲಕ್ಷ ಭಕ್ತರು ಇಂದು ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ಶ್ರೀಕೃಷ್ಣನ ದರ್ಶನಕ್ಕಾಗಿ ಭಕ್ತಸಾಗರವೇ ಹರಿದುಬಂದಿದ್ದು, ಪುಟ್ಟ ಮಕ್ಕಳು ಕೃಷ್ಣ-ರಾಧೆಯ ವೇಷದಲ್ಲಿ ಕಂಗೊಳಿಸಿದ ದೃಶ್ಯಗಳು ಗಮನ ಸೆಳೆದವು.
ಇದನ್ನೂ ಓದಿ : ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ವರ್ಧಂತಿ : ಧರ್ಮಧಾರಿತ ಬದುಕು ಮುಖ್ಯ ಎಂದ ಸ್ವಾಮೀಜಿ



















