ಬೈಂದೂರು : ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 18ನೇ ವರ್ಧಂತಿ ಕಾರ್ಯಕ್ರಮವು ಗುರುವಾರ ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮವು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ 37ನೇ ದಿನದ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಬೆಳಿಗ್ಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ಆಶೀರ್ವಚನ ನೀಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ಭಾರತೀಯ ಸನಾತನ ಸಂಸ್ಕೃತಿಯು ಧಾರ್ಮಿಕ ತಳಹದಿ ಹಾಗೂ ಭಗವಂತನ ಸಾಕ್ಷಾತ್ಕಾರದಿಂದ ಅವತರಿಸಿದೆ ಎಂದು ಹೇಳಿದರು. ಧರ್ಮದ ಆಚರಣೆಯಲ್ಲಿ ದ್ವೇಷಕ್ಕೆ ಅವಕಾಶ ಇರಬಾರದು. ಧರ್ಮದಿಂದ ಶಾಂತಿ ಮತ್ತು ನೆಮ್ಮದಿ ಪಡೆಯಲು ಸಾಧ್ಯವಾಗಿದ್ದು, ಧಾರ್ಮಿಕ ಭಾವನೆಯನ್ನು ಮೈಗೂಡಿಸಿಕೊಂಡು ಪರಸ್ಪರ ಸ್ನೇಹ ಮತ್ತು ವಿಶ್ವಾಸದಿಂದ ಬದುಕು ನಡೆಸಬೇಕು ಎಂದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವದರ್ಶನ ನಮಗೆಲ್ಲ ದಾರಿದೀಪವಾಗಬೇಕು ಎಂದು ಸ್ವಾಮೀಜಿ ಹೇಳಿದರು. ಬೆಳಿಗ್ಗೆ ನಡೆದ ಪಟ್ಟಾಭಿಷೇಕದ 18ನೇ ವರ್ಧಂತಿ ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಬೆಳ್ಳಿ ಕಿರೀಟ ತೊಡಿಸಲಾಯಿತು. ಇದೇ ವೇಳೆ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾಸ್ವಾಮೀಜಿಯವರ ಪಾದುಕೆ ಪೂಜೆಯೂ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ದಕ್ಷಿಣ ಕನ್ನಡ ಲೋಕಸಭಾ ಸಂಸದ ಬ್ರಿಜೇಶ್ ಚೌಟ, ಉಡುಪಿ ಮಾಜಿ ಶಾಸಕ ರಘುಪತಿ ಭಟ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಅಯೋಧ್ಯೆಯ ನಾಗಸಾಧು ಕೇಶವ್ ಮಹಾರಾಜ್, ಕಾರ್ಪೊರೇಟರ್ ಕಿರಣ್ ಮಂಗಳೂರು, ಮಾಜಿ ವಿಧಾನಪರಿಷತ್ ಸದಸ್ಯ ಸಂತು ಮಂಗಳೂರು, ಮೇಸ್ಟ್ರು ಅಧ್ಯಕ್ಷ ಹರೀಶ್ ಕುಮಾರ್, ಬಿಜೆಪಿ ಸಹಪ್ರಭಾರಿ ಜಯಂತ್ ಕೋಟ್ಯಾನ್, ಸಂಜಯ್ ಪ್ರಭು ಹಾಗೂ ವಕೀಲ ಶಾಂತಿಪ್ರಕಾಶ್ ಹೆಗಡೆ ಭಾಗವಹಿಸಿದ್ದರು.
ಇದೇ ವೇಳೆ ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಸೋಮಸುಂದರ್, ಮಂಗಳೂರು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಜಯಂತ್ ಎಚ್., ಸಮಾಜಸೇವಕ ಯೋಗೀಶ್ ಕೋಟ್ಯಾನ್, ವೆನ್ಲಾಕ್ ಆಸ್ಪತ್ರೆಯ ಡಾ. ಸದಾನಂದ ಪೂಜಾರಿ, ಸಂಚಾಲಕ ಶಿವರಾಜ್ ಪೂಜಾರಿ, ವತ್ತಿನೆಣೆ ಗುರುರಾಘವೇಂದ್ರ ಸ್ವಾಮಿ ಮರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಚಾತುರ್ಮಾಸ್ಯ ವ್ರತಾಚರಣೆಯು ಸೆಪ್ಟೆಂಬರ್ 14ರವರೆಗೆ ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಮಣಿ ರವಿ ಬಿಜೂರು ಸ್ವಾಗತಿಸಿ ನಿರೂಪಿಸಿದರು. ರಾಘವೇಂದ್ರ ಪೂಜಾರಿ ಅರೆಹೊಳೆ ವಂದಿಸಿದರು. ಎಂ.ಪಿ. ಬೆಳ್ಳಾಡಿ ಸಹಕರಿಸಿದರು.
ಇದನ್ನೂ ಓದಿ : ಕೊಳತ್ತೂರು ಸೋಲಿನ ವಿರುದ್ಧ ಸ್ಟಾಲಿನ್ ಸಲ್ಲಿಸಿದ್ದ ಅರ್ಜಿ ವಜಾ : ಡಿಎಂಕೆ ಮುಖ್ಯಸ್ಥನಿಗೆ ಹಿನ್ನಡೆ



















