ಬೆಂಗಳೂರು : ಬಿಎಂಆರ್ಸಿಎಲ್ನ ಫೇಸ್-3 ಮೆಟ್ರೋ ಯೋಜನೆಯ ಕಾರಿಡಾರ್-2, ಪ್ಯಾಕೇಜ್-4 ಅಡಿಯಲ್ಲಿ ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆ ಮೆಟ್ರೋ ನಿಲ್ದಾಣದವರೆಗೆ 12.5 ಕಿ.ಮೀ. ಉದ್ದದ ಎಲಿವೇಟೆಡ್ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಒಟ್ಟು 3,627 ಮರಗಳನ್ನು ತೆರವುಗೊಳಿಸಲು ಪ್ರಸ್ತಾವನೆ ಸಲ್ಲಿಸಿರುವುದು ಪರಿಸರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಯೋಜನೆಯಡಿ 9 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳು, ವೈಯಾಡಕ್ಟ್, ಪೋರ್ಟಲ್ ಪಿಯರ್ಸ್, ಸರ್ವೀಸ್ ರಸ್ತೆಗಳು, ಯುಟಿಲಿಟಿ ಡೈವರ್ಷನ್ ಹಾಗೂ ರಸ್ತೆ ವಿಸ್ತರಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2,426 ವಿವಿಧ ಜಾತಿಯ ಮರಗಳು ಹಾಗೂ 1,201 ಅಡಿಕೆ ಮರಗಳನ್ನು ತೆರವುಗೊಳಿಸಲು ಅನುಮತಿ ಕೋರಲಾಗಿದೆ.
ಈ ಕಾಮಗಾರಿಯಿಂದ ಹೊಸಹಳ್ಳಿ, ಕೆಎಚ್ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮ್ಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಮತ್ ಲೇಔಟ್ ಹಾಗೂ ಕಡಬಗೆರೆ ಪ್ರದೇಶಗಳ ಮರಗಳಿಗೆ ಪರಿಣಾಮ ಬೀಳಲಿದೆ. ಮೆಟ್ರೋ ಯೋಜನೆಯು ಸಾರ್ವಜನಿಕ ಸಾರಿಗೆ ಸುಧಾರಣೆಗೆ ಅಗತ್ಯವಾಗಿದ್ದರೂ, ಪರಿಸರ ಸಂರಕ್ಷಣೆ ದೃಷ್ಟಿಯಿಂದ ಹಲವು ಪ್ರಶ್ನೆಗಳು ಉದ್ಭವಿಸಿವೆ.
ತೆರವುಗೊಳ್ಳುವ 3,627 ಮರಗಳಿಗೆ ಬದಲಾಗಿ ಎಷ್ಟು ಮರಗಳನ್ನು ನೆಡಲಾಗುತ್ತದೆ.ದೊಡ್ಡ ಮರಗಳನ್ನು ಮರುಸ್ಥಾಪನೆ ಮಾಡುವ ಅವಕಾಶವನ್ನು ಪರಿಶೀಲಿಸಲಾಗಿದೆಯೇ.ಯೋಜನೆಯ ಪರಿಸರ ಪರಿಣಾಮ ಅಧ್ಯಯನದ ವಿವರಗಳು ಸಾರ್ವಜನಿಕರಿಗೆ ಲಭ್ಯವಿದೆಯೇ. ರಸ್ತೆ ವಿಸ್ತರಣೆ ಹಾಗೂ ಮೆಟ್ರೋ ವಿನ್ಯಾಸದಲ್ಲಿ ಮರಗಳ ನಷ್ಟ ಕಡಿಮೆ ಮಾಡುವ ಪರ್ಯಾಯಗಳನ್ನು ಪರಿಗಣಿಸಲಾಗಿದೆಯೇ. ಸ್ಥಳೀಯ ನಿವಾಸಿಗಳು ಹಾಗೂ ಪರಿಸರ ತಜ್ಞರ ಅಭಿಪ್ರಾಯವನ್ನು ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆಯೇ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವುದು ಇಂದಿನ ನಗರ ಯೋಜನೆಗಳ ಪ್ರಮುಖ ಸವಾಲಾಗಿದ್ದು, ಈ ಯೋಜನೆಯಲ್ಲಿ ಪರಿಹಾರಾತ್ಮಕ ಕ್ರಮಗಳ ಬಗ್ಗೆ ಬಿಎಂಆರ್ಸಿಎಲ್ ಹಾಗೂ ಸಂಬಂಧಿತ ಇಲಾಖೆಗಳು ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ
ಇದನ್ನೂ ಓದಿ : ಬಿಹಾರದಲ್ಲಿ ಅಮಾನವೀಯ ಕೃತ್ಯ : ಸಾಮೂಹಿಕ ಅತ್ಯಾಚಾರಕ್ಕೀಡಾದ ಮಹಿಳೆಯ ದೇಹದಲ್ಲಿ ಜೀವಂತ ಗುಂಡು ಪತ್ತೆ!



















