ನವದೆಹಲಿ : ವೈದ್ಯಕೀಯ ಕೋರ್ಸ್ಗಳ ಪ್ರವೇಶ ಕಲ್ಪಿಸುವ ನೀಟ್-ಯುಜಿ ಮರುಪರೀಕ್ಷೆಗೆ ದಿನಗಣನೆ ಆರಂಭವಾಗಿರುವಂತೆಯೇ ಪರೀಕ್ಷಾ ಅಕ್ರಮ ಮತ್ತು ವಂಚನೆ ಜಾಲಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಜೂನ್ 21 ರಂದು ನಡೆಯಲಿರುವ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ‘ಟೆಲಿಗ್ರಾಮ್‘ (Telegram) ಆ್ಯಪ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಪರೀಕ್ಷಾ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಕೈಗೊಂಡಿರುವ ಈ ನಿರ್ಧಾರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸ್ವಾಗತಿಸಿದೆ. ಜೂನ್ 22ರವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ.
ಕೇಂದ್ರ ಸರ್ಕಾರದ ಆದೇಶದನ್ವಯ ಟೆಲಿಗ್ರಾಮ್ ಆ್ಯಪ್ ಜೂನ್ 22ರವರೆಗೆ ಭಾರತದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ಇದರೊಂದಿಗೆ ಮತ್ತೊಂದು ಪ್ರಮುಖ ಕ್ರಮವಾಗಿ ಜೂನ್ 30ರವರೆಗೆ ಈ ಆ್ಯಪ್ನ ‘ಮೆಸೇಜ್ ಎಡಿಟಿಂಗ್’ (ಸಂದೇಶ ತಿದ್ದುಪಡಿ) ವೈಶಿಷ್ಟ್ಯವನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಪರೀಕ್ಷೆ ಮುಗಿದ ನಂತರ ಹಳೆಯ ಪೋಸ್ಟ್ಗಳನ್ನು ಎಡಿಟ್ ಮಾಡಿ, ಮೂಲ ಟೈಮ್ಸ್ಟ್ಯಾಂಪ್ ಬದಲಾಯಿಸದೆ ಪ್ರಶ್ನೆ ಪತ್ರಿಕೆಗಳನ್ನು ಅಪ್ಲೋಡ್ ಮಾಡುವ ಮೂಲಕ ‘ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ’ ಎಂಬ ಸುಳ್ಳು ಸುದ್ದಿಗಳನ್ನು ಹರಡಲು ದಂಧೆಕೋರರು ಈ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ನಕಲಿ ಪುರಾವೆಗಳ ಸೃಷ್ಟಿಗೆ ಬ್ರೇಕ್ ಹಾಕಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಎನ್ಟಿಎ ಸ್ಪಷ್ಟಪಡಿಸಿದೆ.
ಸೈಬರ್ ವಂಚಕರ ವಿರುದ್ಧ ಮುಂದುವರಿದ ಕಾರ್ಯಾಚರಣೆ
ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಸಹಯೋಗದೊಂದಿಗೆ ಈಗಾಗಲೇ ನಕಲಿ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದ ಹಲವು ಟೆಲಿಗ್ರಾಮ್ ಚಾನೆಲ್ಗಳು, ಗ್ರೂಪ್ಗಳು ಮತ್ತು ಬಾಟ್ಗಳನ್ನು ಪತ್ತೆಹಚ್ಚಿ ಮುಚ್ಚಿಸಲಾಗಿದೆ. ಬಿಹಾರ ಪೊಲೀಸರು ಈಗಾಗಲೇ ಈ ಕುರಿತು ಸಾರ್ವಜನಿಕ ಎಚ್ಚರಿಕೆ ಪ್ರಕಟಿಸಿದ್ದರೆ, ಅಹಮದಾಬಾದ್ ಸೈಬರ್ ಕ್ರೈಮ್ ವಿಭಾಗವು ಅಂತಾರಾಜ್ಯ ಸೈಬರ್ ವಂಚಕರ ಜಾಲವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದೆ. ಈ ಜಾಲವು ಕೇವಲ ಒಂದು ತಿಂಗಳಲ್ಲಿ ಸುಮಾರು 1,000 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ, ಬರೋಬ್ಬರಿ 1.5 ಕೋಟಿ ರೂಪಾಯಿಗಳಷ್ಟು ಹಣದ ವಹಿವಾಟು ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಸುಳ್ಳು ಸುದ್ದಿ ನಂಬಬೇಡಿ: ವಿದ್ಯಾರ್ಥಿಗಳಿಗೆ ಎನ್ಟಿಎ ಕಿವಿಮಾತು
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಲ್ಲಿ ಲಕ್ಷಾಂತರ ರೂಪಾಯಿ ಬೇಡಿಕೆಯಿಟ್ಟು ಪ್ರಶ್ನೆ ಪತ್ರಿಕೆ ನೀಡುವುದಾಗಿ ನಂಬಿಸುವ ಯಾವುದೇ ವಂಚಕರನ್ನು ವಿದ್ಯಾರ್ಥಿಗಳು ನಂಬಬಾರದು ಎಂದು ಎನ್ಟಿಎ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸುರಕ್ಷಿತ ಪರೀಕ್ಷಾ ಪ್ರಕ್ರಿಯೆಯನ್ನು ಮೀರಿ ಯಾವುದೇ ಪ್ರಶ್ನೆ ಪತ್ರಿಕೆಗಳು ಹೊರಗೆ ಲಭ್ಯವಿರುವುದಿಲ್ಲ. ಈ ತಾತ್ಕಾಲಿಕ ನಿರ್ಬಂಧದಿಂದಾಗಿ ಸಾಮಾನ್ಯ ಬಳಕೆದಾರರಿಗೆ ಉಂಟಾಗುವ ಅನಾನುಕೂಲತೆಗೆ ವಿಷಾದಿಸಿರುವ ಸಂಸ್ಥೆಯು, ಜೂನ್ 21 ರಂದು ನಿಗದಿತ ವೇಳಾಪಟ್ಟಿಯಂತೆಯೇ ಪರೀಕ್ಷೆ ಅತ್ಯಂತ ಪಾರದರ್ಶಕವಾಗಿ ನಡೆಯಲಿದ್ದು, ವಿದ್ಯಾರ್ಥಿಗಳು ಕೇವಲ ಅಧಿಕೃತ ಪ್ರಕಟಣೆಗಳನ್ನು ಮಾತ್ರವೇ ಅವಲಂಬಿಸಬೇಕು ಎಂದು ತಿಳಿಸಿದೆ.
ಇದನ್ನೂ ಓದಿ : ನಾಸಿಕ್ನಿಂದ ಹೈಡ್ರೋ ಗಾಂಜಾ ತಂದು ಮಾರಾಟ – ಹೆಬ್ಬಾಳ ಪೊಲೀಸರ ಬಲೆಗೆ ಬಿದ್ದ ಇಮ್ರಾನ್ ಪಾಷಾ!



















