ಮುಂಬೈ: ಮಹಾರಾಷ್ಟ್ರ ರಾಜಕಾರಣದ ದಿಗ್ಗಜ ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆ ಎಂಬಂತೆ, ತೀವ್ರ ಕುತೂಹಲ, ಆರೋಪ-ಪ್ರತ್ಯಾರೋಪಗಳ ನಡುವೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಯ ಆರು ಮಂದಿ ಬಂಡಾಯ ಲೋಕಸಭಾ ಸಂಸದರು ಇಂದೇ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂದು ತಿಳಿದುಬಂದಿದೆ. ಇದರೊಂದಿಗೆ ಉದ್ಧವ್ ಬಣ ಮತ್ತೊಂದು ಹೋಳಾಗಿರುವುದು ಅಧಿಕೃತವಾಗಲಿದೆ.
ಬಂಡಾಯ ಎದ್ದಿರುವ ಸಂಸದರಾದ ಸಂಜಯ್ ಜಾಧವ್, ಸಂಜಯ್ ದೇಶ್ಮುಖ್, ಓಮರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ, ನಾಗೇಶ್ ಪಾಟೀಲ್ ಅಷ್ಟಿಕರ್ ಮತ್ತು ಸಂಜಯ್ ದಿನಾ ಪಾಟೀಲ್ ಅವರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ರಹಸ್ಯ ಕಾರ್ಯಾಚರಣೆ
ಈ ಹೈಡ್ರಾಮಾ ಜೂನ್ 16 ರಿಂದಲೇ ಆರಂಭವಾಗಿತ್ತು. ಉದ್ಧವ್ ಬಣದ ಆರು ಸಂಸದರು ದೇಶದ ಬೇರೆ ಬೇರೆ ಭಾಗಗಳಿಂದ ರಹಸ್ಯವಾಗಿ ದೆಹಲಿಗೆ ಹಾರಿದ್ದರು ಹಾಗೂ ನೋಯ್ಡಾದ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಅದೇ ದಿನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಪುತ್ರ ಶ್ರೀಕಾಂತ್ ಶಿಂಧೆ ಕೂಡ ದೆಹಲಿ ತಲುಪಿದ್ದರು. ಮರುದಿನ ಬೆಳಗ್ಗೆಯೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದ ಸಂಸದರು, ತಾವು ಏಕನಾಥ್ ಶಿಂಧೆ ಬಣದೊಂದಿಗೆ ವಿಲೀನಗೊಳ್ಳುತ್ತಿರುವುದಾಗಿ ಮತ್ತು ಸಂಸತ್ತಿನಲ್ಲಿ ತಮಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಪತ್ರ ಸಲ್ಲಿಸಿದ್ದರು. ಇಂದು ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಈ ಭೇಟಿಯ ಫೋಟೋ ಹಾಗೂ ವಿಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಲು ಬಂಡಾಯ ಸಂಸದರು ಸಜ್ಜಾಗಿದ್ದಾರೆ ಎನ್ನಲಾಗಿದೆ.
‘ಮಾತೋಶ್ರೀ’ ಸಭೆಗೆ ಗೈರಾಗಿದ್ದ ಸಂಸದರು
ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ಯಲ್ಲಿ ಇತ್ತೀಚೆಗೆ ನಡೆದಿದ್ದ ಪಕ್ಷದ ಪ್ರಮುಖ ಸಭೆಗೆ ಈ ಸಂಸದರು ಗೈರಾಗಿದ್ದಾಗಲೇ ಪಕ್ಷ ಇಬ್ಭಾಗದ ಮುನ್ಸೂಚನೆ ಸಿಕ್ಕಿತ್ತು. ಆ ಸಂದರ್ಭದಲ್ಲಿ ಉದ್ಧವ್ ಅವರ ಆಪ್ತ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು, “ಗೈರಾದ ಸಂಸದರು ವರ್ಚುವಲ್ ಆಗಿ ಸಭೆಯಲ್ಲಿ ಭಾಗಿಯಾಗಿದ್ದಾರೆ” ಎಂದು ಪರಿಸ್ಥಿತಿ ನಿಭಾಯಿಸಲು ಯತ್ನಿಸಿದ್ದರು. ಆದರೆ, ಬಂಡಾಯ ಸಂಸದ ಸಂಜಯ್ ಜಾಧವ್ ಅವರು ಶಿಂಧೆ ಬಣದ ಕೇಂದ್ರ ಸಚಿವ ಪ್ರತಾಪರಾವ್ ಜಾಧವ್ ಅವರನ್ನು ಭೇಟಿಯಾದಾಗ ‘ಆಪರೇಷನ್ ಟೈಗರ್’ ವದಂತಿಗೆ ಪುಷ್ಟಿ ಸಿಕ್ಕಿತ್ತು.
‘ಕೋಟಿ ಕೋಟಿ ಆಮಿಷ’ ಆರೋಪ
ಸಂಸದರ ಬಂಡಾಯದ ಬೆನ್ನಲ್ಲೇ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ಆಕ್ರೋಶ ಹೊರಹಾಕಿ, ಬಂಡಾಯ ಸಂಸದರನ್ನು ಕೋಟ್ಯಂತರ ರೂಪಾಯಿ ಆಮಿಷ ಒಡ್ಡಿ, ಚಾರ್ಟರ್ಡ್ ವಿಮಾನಗಳ ಮೂಲಕ ದೆಹಲಿಗೆ ಕರೆದೊಯ್ದು ಬೇಟೆಯಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಬಂಡಾಯ ಸಂಸದರ ವಿರುದ್ಧ ಅತ್ಯಂತ ಕಠಿಣ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ವಾಗ್ದಾಳಿ ನಡೆಸಿದ ರಾವತ್, ಪಕ್ಷಕ್ಕೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.



















