ಬೆಂಗಳೂರು : ನಗರದಲ್ಲಿ ಭಾರೀ ಮಳೆಯಿಂದ ಸಂಭವಿಸಿದ ಕಾಂಪೌಂಡ್ ಕುಸಿತ ದುರಂತ ಹಿನ್ನೆಲೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಇಬ್ಬರು ಇಂಜಿನಿಯರ್ಗಳನ್ನು ತಕ್ಷಣದಿಂದಲೇ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ. ಕಾರ್ಯಪಾಲಕ ಅಭಿಯಂತರ ಮೊಹಮ್ಮದ್ ಜಾವೇದ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರುದ್ರಮೂನಿ ಆರ್.ಟಿ. ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ಸುಮಾರು 76-77 ಮಿಮೀ ಮಳೆಯಾಗಿದ್ದು, ನಗರದ ಹಲವೆಡೆ ಮರಗಳು ಉರುಳಿ, ತಾತ್ಕಾಲಿಕ ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಸಂದರ್ಭದಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಸಂಪಂಗಿರಾಮನಗರ ವಾರ್ಡ್ನಲ್ಲಿ ಇರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಗೋಡೆ ಪಾದಚಾರಿ ಮಾರ್ಗದ ಮೇಲೆ ಕುಸಿದಿತ್ತು.
ಈ ದುರ್ಘಟನೆಯಲ್ಲಿ ಗೋಡೆಯ ಆಶ್ರಯದಲ್ಲಿ ನಿಂತಿದ್ದ 7 ಮಂದಿ ಪಾದಚಾರಿಗಳು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ವರದಿಯಲ್ಲಿ, ಕಟ್ಟಡವು ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ಪಾದಚಾರಿ ಮಾರ್ಗದ ನಿರ್ವಹಣೆಯಲ್ಲಿ ಪಾಲಿಕೆಯ ಇಂಜಿನಿಯರ್ಗಳಿಂದ ಕರ್ತವ್ಯಲೋಪ ಕಂಡುಬಂದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ದುರ್ಘಟನೆಯ ಗಂಭೀರತೆಯನ್ನು ಪರಿಗಣಿಸಿ, ವಿಚಾರಣೆ ಮುಂದುವರಿದಿರುವುದರ ನಡುವೆಯೇ, 2021ರ ಸರ್ಕಾರಿ ನೌಕರರ ನಡತೆ ನಿಯಮಾವಳಿಯ ನಿಯಮ 3ರ ಅನ್ವಯ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತರು ಅದೇಶ ಹೊರಡಿಸಿದ್ದಾರೆ. ಇನ್ನು, ಗೋಡೆ ಕುಸಿತದ ನಿಖರ ತಾಂತ್ರಿಕ ಕಾರಣ ಪತ್ತೆಹಚ್ಚಲು ಮುಖ್ಯ ಅಭಿಯಂತರರಿಗೆ ಎಬಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸಂಪೂರ್ಣ ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಇನ್ನಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ : ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ!



















