ಮುಂಬೈ : ವಾಣಿಜ್ಯ ನಗರಿ ಮುಂಬೈನಲ್ಲಿ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ಮರಾಠಿ ಭಾಷಾ ಜ್ಞಾನ ಕಡ್ಡಾಯಗೊಳಿಸಿರುವ ಮಹಾರಾಷ್ಟ್ರ ಸರ್ಕಾರದ ನಿಯಮವು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಅಧಿಕಾರಿಗಳು ಪರಿಶೀಲನೆ ವೇಳೆ ತರಬೇತಿಯಲ್ಲಿದ್ದಕ್ಕಿಂತ ಹೊರತಾದ, ಕಠಿಣ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ಚಾಲಕರು ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ಮುಂಗಾರು ಮಳೆಯ ನಡುವೆ ಕಚೇರಿ ಹಾಗೂ ಮನೆಗಳಿಗೆ ತೆರಳುವ ಸಾವಿರಾರು ಸಾರ್ವಜನಿಕರು ಪರದಾಡುವಂತಾಗಿದೆ.
ಆರ್ಟಿಒ ಕಠಿಣ ನಿಯಮ
ಮಹಾರಾಷ್ಟ್ರದ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವ ಬಿಜೆಪಿಯ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಸರ್ಕಾರ, ವಾಣಿಜ್ಯ ವಾಹನ ಚಾಲಕರಿಗೆ ಮರಾಠಿ ಭಾಷೆಯ ವ್ಯವಹಾರಿಕ ಜ್ಞಾನವನ್ನು ಕಡ್ಡಾಯಗೊಳಿಸಿದೆ. ಅದರಂತೆ, ರಸ್ತೆಗಳಲ್ಲಿ ಚಾಲಕರನ್ನು ತಡೆದು ನಿಲ್ಲಿಸುತ್ತಿರುವ ಅಧಿಕಾರಿಗಳು, ಮರಾಠಿ ಮಾತನಾಡಲು ಬರದಿದ್ದರೆ ನೋಟಿಸ್ಗಳನ್ನು ನೀಡುತ್ತಿದ್ದಾರೆ. ಈ ನೋಟಿಸ್ ಪಡೆದ ಒಂದು ತಿಂಗಳೊಳಗೆ ಮರಾಠಿ ಭಾಷೆ ಕಲಿಯದಿದ್ದರೆ ಚಾಲನಾ ಪರವಾನಗಿ ಹಾಗೂ ನೋಂದಣಿಯನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸುವ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಮೊದಲ ಹಂತದಲ್ಲೇ ಸುಮಾರು 1,200ಕ್ಕೂ ಹೆಚ್ಚು ಚಾಲಕರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ತರಬೇತಿಗೂ, ಕೇಳುತ್ತಿರುವ ಪ್ರಶ್ನೆಗೂ ಇಲ್ಲ ಸಂಬಂಧ!
ಉತ್ತರ ಪ್ರದೇಶ, ಬಿಹಾರ ಮೂಲದ ಅನೇಕ ಚಾಲಕರು ತಾವು ಮರಾಠಿ ಕಲಿಯಲು ಸಿದ್ಧರಿದ್ದೇವೆ ಆದರೆ ಆರ್ಟಿಒ ಅಧಿಕಾರಿಗಳು ‘ಪಠ್ಯಕ್ರಮಕ್ಕೆ ಹೊರತಾದ’ (Out of syllabus) ಪ್ರಶ್ನೆಗಳನ್ನು ಕೇಳಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಕೊಂಕಣ ಸಾಹಿತ್ಯ ಪರಿಷತ್ ನೀಡಿದ ತರಬೇತಿಯಲ್ಲಿ ದೈನಂದಿನ ಪ್ರಯಾಣಿಕರ ಜೊತೆ ಮಾತನಾಡುವ ಸರಳ ವಾಕ್ಯಗಳನ್ನು ಹೇಳಿಕೊಡಲಾಗಿತ್ತು. ಆದರೆ, ಪ್ರತ್ಯಕ್ಷ ತಪಾಸಣೆ ವೇಳೆ ಅಧಿಕಾರಿಗಳು ಚಾಲಕರ ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸದೆ ಕ್ಲಿಷ್ಟಕರ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದು ವಯಸ್ಸಾದ ಮತ್ತು ದಿನಗೂಲಿ ಆಧಾರದ ಮೇಲೆ ದುಡಿಯುವ ಚಾಲಕರ ಹೊಟ್ಟೆಗೆ ಕಲ್ಲು ಹಾಕಿದಂತಾಗಿದೆ ಎಂದು ಚಾಲಕರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಮುಖ್ಯಮಂತ್ರಿ, ಸಚಿವರ ಸ್ಪಷ್ಟನೆಯೇನು?
ಈ ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ನಾವು ಹಿಂದಿ ಮಾತನಾಡುವ ಸಹೋದರರನ್ನು ಮರಾಠಿ ಸಾಹಿತಿಗಳನ್ನಾಗಿ ಮಾಡಲು ಹೊರಟಿಲ್ಲ. ಅವರಿಗೆ ಪ್ರಯಾಣಿಕರ ಜೊತೆ ಸಂವಹನ ನಡೆಸಲು ಅಗತ್ಯವಿರುವಷ್ಟು ಮರಾಠಿ ಭಾಷೆಯ ಜ್ಞಾನವಿದ್ದರೆ ಸಾಕು. ಮರಾಠಿ ಕಲಿಯಲು ಈಗಾಗಲೇ ಮೂರು ಬಾರಿ ಗಡುವು ವಿಸ್ತರಿಸಲಾಗಿದೆ” ಎಂದು ಹೇಳಿದ್ದಾರೆ. ಇನ್ನು ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಮಾತನಾಡಿ, “ಭಾಷಾ ಜ್ಞಾನವು ಕೇವಲ ನಿಯಮವಲ್ಲ, ಅದು ಪ್ರಯಾಣಿಕರ ಭದ್ರತೆ ಮತ್ತು ಸುಲಭ ಸಂವಹನದ ವಿಷಯವಾಗಿದೆ. ಯಾರ ಜೀವನೋಪಾಯವನ್ನೂ ಕಸಿದುಕೊಳ್ಳುವುದು ನಮ್ಮ ಉದ್ದೇಶವಲ್ಲ, ಆದರೆ ಮರಾಠಿ ಸಂಸ್ಕೃತಿಯನ್ನು ಎತ್ತಿಹಿಡಿಯುವುದು ನಮ್ಮ ಆದ್ಯತೆ” ಎಂದಿದ್ದಾರೆ.
ಮುಂಬೈ ನಗರದಲ್ಲಿ ಸುಮಾರು 4.6 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರಿದ್ದು, ಈ ಪೈಕಿ ಬಹುತೇಕರು ಉತ್ತರ ಭಾರತದ ವಲಸಿಗರಾಗಿದ್ದಾರೆ. ಭಾಷೆಯ ಹೆಸರಿನಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಮ್ಎನ್ಎಸ್) ಕಾರ್ಯಕರ್ತರು ಮಾಡಬಹುದಾದ ದಾಳಿ ಮತ್ತು ಕಿರುಕುಳದ ಭೀತಿಯೂ ಚಾಲಕರನ್ನು ಕಾಡುತ್ತಿದೆ. ಪ್ರಸ್ತುತ ಆರಂಭವಾಗಿರುವ ಈ ಮೂರು ದಿನಗಳ ಮುಷ್ಕರದಿಂದಾಗಿ ಮುಂಬೈನ ದಾದರ್, ಬಾಂದ್ರಾ, ಸಿಎಸ್ಎಂಟಿ ಮುಂತಾದ ಪ್ರಮುಖ ರೈಲ್ವೆ ನಿಲ್ದಾಣಗಳು ಹಾಗೂ ರಸ್ತೆಗಳಲ್ಲಿ ಆಟೋ-ಟ್ಯಾಕ್ಸಿಗಳ ಅಭಾವ ಎದ್ದು ಕಾಣುತ್ತಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಏರುಪೇರಾಗಿದೆ.
ಇದನ್ನೂ ಓದಿ : ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ 29 ಪೌರ ಕಾರ್ಮಿಕರ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ


















