ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಮಾಂಸ ಪ್ರಿಯರಿಗೆ ಹಾಗೂ ವ್ಯಾಪಾರಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಮೇ 1ರಂದು ‘ಬುದ್ಧ ಪೂರ್ಣಿಮೆ’ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಮಾಂಸ ಮಾರಾಟ ಹಾಗೂ ಪ್ರಾಣಿವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
GBA ಕಟ್ಟುನಿಟ್ಟಿನ ಆದೇಶ :
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶುಪಾಲನಾ ವಿಭಾಗದ ಉಪ ನಿರ್ದೇಶಕರು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ದಿನಾಂಕ 01-05-2026ರ ಶುಕ್ರವಾರದಂದು ಬುದ್ಧ ಪೂರ್ಣಿಮೆಯ ಪವಿತ್ರ ದಿನವಾಗಿದೆ. ಅಹಿಂಸೆಯ ಸಂದೇಶ ಸಾರಿದ ಬುದ್ಧನ ಜನ್ಮದಿನದ ಗೌರವಾರ್ಥವಾಗಿ, ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿವಧೆಯನ್ನು ನಿಷೇಧಿಸಲಾಗಿದೆ. ಜೊತೆಗೆ, ಮಳಿಗೆಗಳಲ್ಲಿ ಅಥವಾ ಯಾವುದೇ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಎಲ್ಲೆಲ್ಲಿ ಅನ್ವಯಿಸುತ್ತದೆ?
ಈ ಆದೇಶವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಗೆ ಬರುವ ಎಲ್ಲಾ ವಲಯಗಳಿಗೂ ಅನ್ವಯಿಸುತ್ತದೆ. ಬೆಂಗಳೂರು ನಗರದ ಪ್ರಮುಖ ಮಾರುಕಟ್ಟೆಗಳು, ಮಾಂಸದ ಅಂಗಡಿಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ಅಂದು ವ್ಯಾಪಾರ ಮಾಡುವಂತಿಲ್ಲ. ಸರ್ಕಾರದ ನಿಯಮದಂತೆ ಬುದ್ಧ ಪೂರ್ಣಿಮೆಯ ದಿನದಂದು ಮಾಂಸ ಮಾರಾಟದ ಮೇಲೆ ಈ ಹಿಂದಿನಿಂದಲೂ ನಿಷೇಧ ಹೇರಲಾಗುತ್ತಿದ್ದು, ಈ ವರ್ಷವೂ ಅದನ್ನು ಮುಂದುವರಿಸಲಾಗಿದೆ. ಸಾರ್ವಜನಿಕರು ಹಾಗೂ ಮಾಂಸದ ಅಂಗಡಿ ಮಾಲೀಕರು ಈ ಆದೇಶಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಇದನ್ನೂ ಓದಿ : ಎದುರಾಳಿ ತಂಡವನ್ನು ಬೆಂಬಲಿಸಿದ ಫ್ಯಾನ್ಸ್ ವಿರುದ್ಧ ಬೇಸರ ಹೊರಹಾಕಿದ ಪಾಂಡ್ಯ!



















