ಬೆಂಗಳೂರು : ವಿಜಯನಗರದಲ್ಲಿ ಏಕಾಏಕಿ ಮನೆಗೆ ನುಗ್ಗಿ ರಾಜಸ್ಥಾನ ಮೂಲದ ವಿವಾಹಿತೆಯನ್ನು ಕಿಡ್ನಾಪ್ ಮಾಡಿ, ಎಸ್ಕೇಪ್ ಆಗಲು ಯತ್ನಿಸಿದ ಗ್ಯಾಂಗ್ ಎದುರಿಗೆ ಬಂದವರ ಮೇಲೆಲ್ಲಾ ಕಾರು ಹರಿಸಿದ ಆಘಾತಕಾರಿ ಘಟನೆ ನಡೆದಿದೆ. ಯುವತಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಅಪಹರಿಸಲು ಯತ್ನಿಸಿದ ಮೂವರೂ ಕೂಡ ರಾಜಸ್ಥಾನದವರೆಂದು ತಿಳಿದುಬಂದಿದೆ.
ರಾಜಸ್ಥಾನ ಮೂಲದ ಪೂಜಾ (21) ಹಾಗೂ ಓಂ ಪ್ರಕಾಶ್ (23) ಎಂಬ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ಕಳೆದ ಒಂಬತ್ತು ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅಗ್ರಹಾರ ದಾಸರಹಳ್ಳಿ ಬಳಿ ವಾಸವಿದ್ದ ದಂಪತಿ ಇದೀಗ ನಡೆದ ಘಟನೆಯಿಂದ ಸುದ್ದಿಯಾಗಿದ್ದಾರೆ.
ಬುಧವಾರ (ಸೆ.16) ಏಕಾಏಕಿ ಮೂವರ ಗ್ಯಾಂಗ್ವೊಂದು ಮನೆಗೆ ನುಗ್ಗಿ ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಅಪಹರಿಸಿಕೊಂಡು ಹೋಗುವಾಗ ಎದುರಿಗೆ ಬಂದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಅಲ್ಲದೇ ವಿಜಯನಗರದ ಹೊಸಹಳ್ಳಿಯ ದಂಡಿ ಮಾರಮ್ಮ ದೇವಸ್ಥಾನದ ಬಳಿ ಪ್ರಶ್ನಿಸಲು ಬಂದವರ ಮೇಲೆ ಹಾಗೂ ಕಾರಿಗೆ ಅಡ್ಡಬಂದ ಜನರ ಮೇಲೆ ಕಾರು ಹರಿಸಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.
ಅಗ್ರಹಾರ ದಾಸರಹಳ್ಳಿಯಿಂದ ವಿಜಯನಗರ, ಹೊಸಹಳ್ಳಿವರೆಗೂ ಜಡ್ಜ್ ವಾಹನ ಸೇರಿ 20ಕ್ಕೂ ಹೆಚ್ಚು ಕಾರುಗಳು, 200ಕ್ಕೂ ಹೆಚ್ಚು ಬೈಕ್ಗಳು ಹಾಗೂ ಸಾರ್ವಜನಿಕರಿಗೆ ಕಾರು ಡಿಕ್ಕಿ ಹೊಡೆದಿದ್ದಾರೆ. ಬಳಿಕ ಪರಾರಿಯಾಗಲು ಯತ್ನಿಸಿದವರ ಕಾರನ್ನು ಸಾರ್ವಜನಿಕರು 50ಕ್ಕೂ ಹೆಚ್ಚು ಬೈಕ್ಗಳಲ್ಲಿ ಸುಮಾರು 9 ಕಿ.ಮೀ ದೂರದವರೆಗೆ ಚೆಸ್ ಮಾಡಿದ್ದಾರೆ.
ಈ ವೇಳೆ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ, ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಎಸ್ಕೇಪ್ ಆಗಲು ಯತ್ನಿಸಿದ ಮೂವರು ಕಿಡ್ನ್ಯಾಪರ್ಗಳನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಈ ಘಟನೆಯಲ್ಲಿ ಯುವಕನಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಮಹಿಳೆಯರ ಮೇಲೆ ಕಾರು ಹರಿಸಲಾಗಿದೆ.
ಸದ್ಯ ಸಂತ್ರಸ್ತ ಯುವತಿಯನ್ನು ಸಾರ್ವಜನಿಕರು ರಕ್ಷಿಸಿದ್ದು, ಕಿಡ್ನ್ಯಾಪರ್ಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮಾಗಡಿ ರೋಡ್ ಸಂಚಾರಿ ಪೊಲೀಸರು ಹಾಗೂ ವಿಜಯನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನೆಯಲ್ಲಿ ಗಾಯಗೊಂಡಿರುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಕೃತ್ಯಕ್ಕೆ ರಾಜಸ್ಥಾನ ಮೂಲದ RJ 22 CC 9691 ನೋಂದಣಿ ಸಂಖ್ಯೆಯ ಕಾರನ್ನು ಬಳಸಲಾಗಿದ್ದು, ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿ ಕಿಡ್ನಾಪ್ ಹಾಗೂ ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನೆಗೆ ನಿಖರ ಕಾರಣ ಮತ್ತು ಆರೋಪಿಗಳ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.
ಇದನ್ನೂ ಓದಿ : ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ ಹ್ಯಾರಿ ಬ್ರೂಕ್ ; ‘ಹೀರೋ’ ಕೆವಿನ್ ಪೀಟರ್ಸನ್ರಿಂದ ಕಲಿಯಲು ಕಾತರ!


















