ಬೆಂಗಳೂರು : ಭಾರತೀಯ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ತಂಡದ ಸಂಯೋಜನೆಯ ಕುರಿತು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸುತ್ತಿರುವ ಮುಂದಿನ ಏಕದಿನ ವಿಶ್ವಕಪ್ಗೆ ಭಾರತದ ಬೌಲಿಂಗ್ ವಿಭಾಗ ಇನ್ನೂ ಸಂಪೂರ್ಣವಾಗಿ ಸಜ್ಜಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಅವರು, ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಮುಂದಿನ ವಿಶ್ವಕಪ್ಗಾಗಿ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುತ್ತಿದೆ. ಆದರೆ ಕೇವಲ ಯುವ ವೇಗಿಗಳನ್ನು ನೆಚ್ಚಿಕೊಂಡು ಇಷ್ಟು ದೊಡ್ಡ ಟೂರ್ನಿಗೆ ಹೋಗುವುದು ಅಪಾಯಕಾರಿ ಎಂಬುದು ಅಶ್ವಿನ್ ಅವರ ವಾದವಾಗಿದೆ. ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಹಾಗೂ ಡೆತ್ ಓವರ್ಗಳಲ್ಲಿ ರನ್ ನಿಯಂತ್ರಿಸುವ ಭುವನೇಶ್ವರ್ ಅವರ ಕೌಶಲ ತಂಡಕ್ಕೆ ಅತ್ಯಗತ್ಯ ಎಂದು ಅವರು ವಿಶ್ಲೇಷಿಸಿದ್ದಾರೆ.
ಶಮಿ ಹಾಗೂ ಭುವನೇಶ್ವರ್ ಕುಮಾರ್ ನಡುವಿನ ಹೋಲಿಕೆ
ತಮ್ಮ ಯೂಟ್ಯೂಬ್ ಚಾನೆಲ್ ‘ಆಶ್ ಕಿ ಬಾತ್’ನಲ್ಲಿ ಈ ಬಗ್ಗೆ ವಿಸ್ತೃತವಾಗಿ ಮಾತನಾಡಿರುವ ಅಶ್ವಿನ್, ಪ್ರಸ್ತುತ ಭಾರತೀಯ ತಂಡದಲ್ಲಿ ವೇಗದ ಬೌಲಿಂಗ್ ವಿಭಾಗದ ಕೊರತೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿದರೆ, ಉಳಿದ ಬೌಲಿಂಗ್ ಸ್ಥಾನಗಳಿಗೆ ನಿಶ್ಚಿತ ಆಟಗಾರರಿಲ್ಲದಿರುವ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ.
ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಹೋಲಿಕೆ ಮಾಡಿರುವ ಅಶ್ವಿನ್, ಇವರಿಬ್ಬರ ನಡುವೆ ಇರುವ ಏಕೈಕ ವ್ಯತ್ಯಾಸವೆಂದರೆ ಫಿಟ್ನೆಸ್ ಎಂದು ಹೇಳಿದ್ದಾರೆ. ಶಮಿ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದರೆ, ಭುವನೇಶ್ವರ್ ಕುಮಾರ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪರ ಆಡುತ್ತಾ ತಮ್ಮ ಫಿಟ್ನೆಸ್ ಹಾಗೂ ಫಾರ್ಮ್ ಎರಡನ್ನೂ ಸಾಬೀತುಪಡಿಸಿದ್ದಾರೆ ಎಂಬುದನ್ನು ಅಶ್ವಿನ್ ಒತ್ತಿ ಹೇಳಿದ್ದಾರೆ.
ಐಪಿಎಲ್ನಲ್ಲಿ ಆರ್ಸಿಬಿ ಪರ ಭುವಿ ಕಮಾಲ್!
ಭುವನೇಶ್ವರ್ ಕುಮಾರ್ ಅವರ ಇತ್ತೀಚಿನ ಐಪಿಎಲ್ ಸಾಧನೆಗಳನ್ನು ಅಶ್ವಿನ್ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ಆರ್ಸಿಬಿ ತಂಡದ ಪರ ಸ್ಥಿರ ಪ್ರದರ್ಶನ ನೀಡಿರುವ ಭುವಿ, 30 ಪಂದ್ಯಗಳಿಂದ 21.87ರ ಸರಾಸರಿಯಲ್ಲಿ 45 ವಿಕೆಟ್ಗಳನ್ನು ಕಬಳಿಸಿದ್ದಾರೆ. 8.56ರ ಎಕಾನಮಿ ರೇಟ್ ಕಾಯ್ದುಕೊಂಡಿರುವ ಅವರು, ಪವರ್ಪ್ಲೇ ಹಾಗೂ ಪಂದ್ಯದ ಕೊನೆಯ ಓವರ್ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ.
ಆರ್ಸಿಬಿ ತಂಡವು ಸತತ ಎರಡು ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಭುವನೇಶ್ವರ್ ಕುಮಾರ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು ಎಂಬುದನ್ನು ನೆನಪಿಸಿರುವ ಅಶ್ವಿನ್, ಅವರಂತಹ ಮ್ಯಾಚ್ ವಿನ್ನರ್ ಆಟಗಾರನನ್ನು ಆಯ್ಕೆಗಾರರು ಕಡೆಗಣಿಸಬಾರದು ಎಂದಿದ್ದಾರೆ. ಭುವಿ ಕೇವಲ ಬೌಲಿಂಗ್ ಮಾತ್ರವಲ್ಲದೆ, ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟಿಂಗ್ ಕೂಡ ಮಾಡಬಲ್ಲರು ಎಂಬುದು ತಂಡಕ್ಕೆ ಹೆಚ್ಚಿನ ಬಲ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಯುವ ಆಟಗಾರರ ಮೇಲೆ ಅವಲಂಬನೆ ಬೇಡ
ಇದರ ಜೊತೆಗೆ ಭಾರತ ತಂಡದ ಪ್ರಸ್ತುತ ಯುವ ಬೌಲರ್ಗಳ ಬಗ್ಗೆಯೂ ಅಶ್ವಿನ್ ಎಚ್ಚರಿಕೆ ನೀಡಿದ್ದಾರೆ. ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ ಹಾಗೂ ಪ್ರಿನ್ಸ್ ಯಾದವ್ ಅವರಂತಹ ಯುವ ವೇಗಿಗಳು ಪ್ರತಿಭಾವಂತರಾಗಿದ್ದರೂ, ವಿಶ್ವಕಪ್ನಂತಹ ಒತ್ತಡದ ಟೂರ್ನಿಗಳಲ್ಲಿ ಆಡಲು ಅವರಿಗೆ ಅಗತ್ಯವಾದ ಅನುಭವದ ಕೊರತೆಯಿದೆ ಎಂದು ಅಶ್ವಿನ್ ಹೇಳಿದ್ದಾರೆ. ಬುಮ್ರಾ ಹಾಗೂ ಹರ್ಷಿತ್ ರಾಣಾ ಅವರ ಜೊತೆ ಭುವನೇಶ್ವರ್ ಕುಮಾರ್ ಕೂಡ ತಂಡದಲ್ಲಿದ್ದರೆ ಬೌಲಿಂಗ್ ವಿಭಾಗಕ್ಕೊಂದು ಸಮತೋಲನ ಸಿಗುತ್ತದೆ. ಅನುಭವ ಹಾಗೂ ಯುವ ಪ್ರತಿಭೆಗಳ ಸಮ್ಮಿಶ್ರಣವಿದ್ದರೆ ಮಾತ್ರ ಯಾವುದೇ ಪರಿಸ್ಥಿತಿಯಲ್ಲಾದರೂ ಎದುರಾಳಿಗಳನ್ನು ಕಟ್ಟಿಹಾಕಲು ಸಾಧ್ಯ. ಹೀಗಾಗಿ ಸಂಪೂರ್ಣವಾಗಿ ಅನನುಭವಿ ವೇಗಿಗಳ ಪಟ್ಟಿಯೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸುವುದು ಸೂಕ್ತವಲ್ಲ ಎಂಬುದು ಮಾಜಿ ಸ್ಪಿನ್ನರ್ನ ಕಳವಳವಾಗಿದೆ.
ಪ್ರಯೋಗಗಳನ್ನು ನಿಲ್ಲಿಸಲು ಇದು ಸಕಾಲ
2027ರ ವಿಶ್ವಕಪ್ಗೆ ಇನ್ನು ಕೇವಲ 12 ತಿಂಗಳುಗಳಷ್ಟೇ ಬಾಕಿಯಿರುವುದರಿಂದ, ಈಗ ಹೊಸ ಆಟಗಾರರನ್ನು ಪರೀಕ್ಷಿಸುವ ಸಮಯವಲ್ಲ ಎಂದು ಅಶ್ವಿನ್ ಆಯ್ಕೆಗಾರರಿಗೆ ಸಲಹೆ ನೀಡಿದ್ದಾರೆ. ತಂಡದ ಮ್ಯಾನೇಜ್ಮೆಂಟ್ ಈಗಲೇ ನಾಲ್ಕರಿಂದ ಐದು ಪ್ರಮುಖ ವೇಗದ ಬೌಲರ್ಗಳನ್ನು ಗುರುತಿಸಬೇಕು. ಆ ಪೈಕಿ ಮೂವರು ವಿಶ್ವಕಪ್ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಖಾಯಂ ಆಗಿ ಕಾಣಿಸಿಕೊಳ್ಳಬೇಕು. ಈ ಪ್ರಕ್ರಿಯೆ ಇದೀಗಲೇ ಶುರುವಾಗಬೇಕು ಎಂದು ಅವರು ತಿಳಿಸಿದ್ದಾರೆ.
ಹರ್ಷಿತ್ ರಾಣಾ, ಗುರ್ನೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ಈಗಾಗಲೇ ಸಾಕಷ್ಟು ಅವಕಾಶಗಳನ್ನು ನೀಡಲಾಗಿದ್ದು, ಅವರ ಪ್ರಸ್ತುತ ಸ್ಥಿತಿಗತಿಗಳು ತಂಡಕ್ಕೆ ತಿಳಿದಿವೆ. ಇನ್ನು ಮುಂದೆ ಪದೇ ಪದೇ ಹೊಸ ವೇಗಿಗಳನ್ನು ಕಣಕ್ಕಿಳಿಸಿ ಪ್ರಯೋಗ ಮಾಡುವುದನ್ನು ನಿಲ್ಲಿಸಿ, ಭುವನೇಶ್ವರ್ ಕುಮಾರ್ ಅವರಂತಹ ಹಿರಿಯ ಆಟಗಾರರನ್ನು ಮತ್ತೆ ಚರ್ಚೆಗೆ ತರಬೇಕು ಎಂದು ಅಶ್ವಿನ್ ತಮ್ಮ ಮಾತು ಮುಕ್ತಾಯಗೊಳಿಸಿದ್ದಾರೆ.
ಇದನ್ನೂ ಓದಿ : IPLನಲ್ಲಿ ‘ಹಾರ್ದಿಕ್’ ಸಂಚಲನ : ಅಕ್ಷರ್ನ ಬಿಟ್ಟು ಮುಂಬೈ ನಾಯಕನನ್ನು ಸೆಳೆಯಲು DC ಪ್ಲಾನ್!



















