ಹುಬ್ಬಳ್ಳಿ : ಪ್ರೀತಿಯ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ಪೊಲೀಸ್ ಠಾಣೆಯಲ್ಲೇ ರಣರಂಗ ಸೃಷ್ಟಿಯಾದ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಈಶ್ವರ ತಾಳಂಬರಿ ಹಾಗೂ ನಿಖಿತಾ ನಡುವೆ ಪ್ರೀತಿ ಸಂಬಂಧವಿದ್ದು, ಈ ಸಂಬಂಧಕ್ಕೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಯುವತಿಯ ಸಹೋದರ ಗಿರೀಶ್, ಯುವಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಹಲ್ಲೆಯಿಂದ ಗಾಯಗೊಂಡ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೂರು ನೀಡಲು ಠಾಣೆಗೆ ಬಂದ ವೇಳೆ ಮತ್ತೆ ಗಲಾಟೆ ನಡೆದಿದೆ. ಠಾಣೆಯಲ್ಲೇ ಕಟ್ಟಿಗೆಯಿಂದ ಹಲ್ಲೆ ನಡೆಸಿರುವ ಆರೋಪವೂ ಕೇಳಿಬಂದಿದೆ.
ಘಟನೆಯಲ್ಲಿ ಯುವಕನ ಕುಟುಂಬಸ್ಥರ ಮೇಲೂ ಹಲ್ಲೆ ನಡೆದಿದ್ದು, ಗರ್ಭಿಣಿ ಮಹಿಳೆಯ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಪೊಲೀಸ್ ಸಿಬ್ಬಂದಿ ಎದುರಲ್ಲೇ ಗಲಾಟೆ ನಡೆದಿದ್ದು, ಸಾರ್ವಜನಿಕರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಈ ಸಂಬಂಧ ಎರಡು ಕುಟುಂಬಗಳಿಂದ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಗ್ರಾ.ಪಂ ಮಾಜಿ ಅಧ್ಯಕ್ಷನ ಬರ್ಬರ ಕೊಲೆ..!



















