ಚಾಮರಾಜನಾಗರ : ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಕುಟುಂಬದವರೊಂದಿಗೆ ನಾಗಮಲೆಗೆ ಪಾದಯಾತ್ರೆ ತೆರಳುತ್ತಿದ್ದ ಬಾಲಕನೋರ್ವ ಚಿರತೆ ದಾಳಿಗೆ ಬಲಿಯಾಗಿರುವ ದುರ್ಘಟನೆ ಇಂದು ಬೆಳಿಗ್ಗೆ ನಡೆದಿದೆ. ಬೆಂಗಳೂರಿನ ಲಗ್ಗೆರೆ ನಿವಾಸಿ ಸುರೇಶ್ ಪುತ್ರ ಹರ್ಷಿತ್ (10) ಮೃತ ಬಾಲಕ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಪೋಷಕರೊಂದಿಗೆ ತೆರಳಿದ್ದ ಬಾಲಕ ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ನಾಗಮಲೆಗೆ ದೇವರ ದರ್ಶನಕ್ಕೆ ತೆರಳುವಾಗ ಇಂಡಿಗನತ್ತ ಅರಣ್ಯ ಪ್ರದೇಶದಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಎಳೆದೊಯ್ದಿದೆ. ಪೋಷಕರ ಮುಂದೆಯೇ ಚಿರತೆ ಬಾಲಕನನ್ನು ಎಳೆದೊಯ್ದ ದೃಶ್ಯ ಕರಳು ಹಿಂಡುವಂತಿತ್ತು.
ಸುಮಾರು ಅರ್ಧ ತಾಸಿನ ಬಳಿಕ ಬಾಲಕನ ಮೃತದೇಹ ಬಂಡೆಗಳ ಮಧ್ಯೆ ಪತ್ತೆಯಾಗಿದ್ದು, ಬಾಲಕನ ಕತ್ತು ಸೇರಿದಂತೆ ಅಂಗಾಂಗಳು ರಕ್ತಸಿಕ್ತವಾಗಿತ್ತು ಎಂದು ತಿಳಿದುಬಂದಿದೆ. ವಿಷಯ ತಿಳಿದ ಅರಣ್ಯ ಇಲಾಖೆ ವಾಚರ್ಗಳು ಸ್ಥಳದಲ್ಲಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಭಕ್ತರು ನಾಗಮಲೆಗೆ ತೆರಳಲು ಅರಣ್ಯ ಇಲಾಖೆಯವರು ಬೆಳಿಗ್ಗೆ 7 ಗಂಟೆ ಬಳಿಕ ಟಿಕೆಟ್ ನೀಡುತ್ತಿದ್ದರು. ಆದರೆ, ಇಂದು 6 ಗಂಟೆಗೆ ಟಿಕೆಟ್ ನೀಡಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದುಈ ಸಾವಿಗೆ ಅರಣ್ಯ ಇಲಾಖೆಯವರೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ಮನುಷ್ಯರಿಗೆ ಹರಡಬಲ್ಲಂಥ ಹೊಸ ಕೊರೊನಾ ವೈರಸ್ ಪತ್ತೆ : ವಿಜ್ಞಾನಿಗಳಿಂದ ಎಚ್ಚರಿಕೆ


















