ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಗೌಡ ಸೇರಿದಂತೆ 17 ಜನ ಆರೋಪಿಗಳು ಜೈಲಿನಲ್ಲಿದ್ದಾರೆ. ಈಗಾಗಲೇ ದರ್ಶನ್ ಸೇರಿದಂತೆ ಹಲವರನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. ಆರೋಪಿಗಳ ಪೈಕಿ ನಾಲ್ವರು ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯಿತು.
ನಾಲ್ವರ ಜಾಮೀನು ಅರ್ಜಿಯ ವಿಚಾರಣೆ ಕುರಿತು ಸುಧೀರ್ಘವಾದ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆಗಸ್ಟ್ 31ಕ್ಕೆ ಆದೇಶ ಕಾಯ್ದಿರಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿಗಳಾದ ಪವಿತ್ರಗೌಡ, ವಿನಯ್, ಕೇಶವಮೂರ್ತಿ ಹಾಗೂ ಅನುಕುಮಾರ್ ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಗೆ ಅರ್ಜಿ ಹಾಕಿದ್ದರು. ಆರೋಪಿಗಳ ಪರ ವಕೀಲರು ವಾದ ನಡೆಸಿದ್ದು, ಪವಿತ್ರಾಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದ್ದರು. ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದರು.
ಒಂದು ಗಂಟೆಯ ಕಾಲ ವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಕಿಡ್ನಾಪ್ ನಿಂದ ಹಿಡಿದು ಕೊಲೆಯ ಆಗಿ ಸಾಕ್ಷ್ಯನಾಶದ ಕುರಿತು ಇಂಚಿಂಚೂ ಮಾಹಿತಿ ಕೋರ್ಟ್ಗೆ ನೀಡಿದ್ದು, ಯಾವುದೇ ಕಾರಣಕ್ಕೂ ಜಾಮೀನು ಕೊಡದಂತೆ ಮನವಿ ಮಾಡಿದರು. ಆದರೆ, ಎರಡೂ ಕಡೆ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆಗಸ್ಟ್ 3 ಕ್ಕೆ ಪವಿತ್ರಗೌಡ ಹಾಗೂ ಅನುಕುಮಾರ್ ಅರ್ಜಿಯ ಆದೇಶ ಕಾಯ್ದಿರಿಸಿದರೆ, ಸೆ.2ಕ್ಕೆ ವಿನಯ್ ಹಾಗೂ ಕೇಶವಮೂರ್ತಿ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿತು.
ಇನ್ನೊಂದೆಡೆ ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಬದುಕು ಸಾಗಿಸುತ್ತಿರುವ ಆರೋಪ ಹೊತ್ತಿರುವ ದರ್ಶನ್ ಮೇಲೆ ಮತ್ತೆ ಮೂರು ಕೇಸ್ದಾಖಲಾಗಿದ್ದು, ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇನ್ನುಳಿದಂತೆ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ.