ಕಠ್ಮಂಡು : ನೇಪಾಳದಲ್ಲಿ ಕಳೆದ ಬುಧವಾರ ಸಂಭವಿಸಿದ ಭೀಕರ ಪ್ರವಾಹದ ನಡುವೆಯೂ ಪವಾಡವೆಂಬಂಥ ಘಟನೆಯೊಂದು ನಡೆದಿದೆ. ದುರಂತ ಸಂಭವಿಸಿ ಬರೋಬ್ಬರಿ 9 ದಿನಗಳು ಕಳೆದ ಬಳಿಕ, ಕೆಸರು-ಮಣ್ಣಿನಿಂದ ಮುಚ್ಚಿಹೋಗಿದ್ದ ತ್ರಿಶೂಲಿ-3 ‘ಎ’ ಜಲವಿದ್ಯುತ್ ಯೋಜನೆ ಸುರಂಗದೊಳಗಿಂದ ಇಬ್ಬರು ಕಾರ್ಮಿಕರನ್ನು ರಕ್ಷಣಾ ಸಿಬ್ಬಂದಿ ಜೀವಂತವಾಗಿ ಹೊರತೆಗೆದಿದ್ದಾರೆ. ಈ ಘಟನೆಯು ಸುರಂಗಗಳಲ್ಲಿ ಸಿಲುಕಿರುವ ಇತರ ನೂರಾರು ಜನರ ಕುಟುಂಬಗಳಲ್ಲಿ ಭರವಸೆಯ ಹೊಸ ಕಿರಣವನ್ನು ಮೂಡಿಸಿದೆ.

ಈ ಮೃತ್ಯುಂಜಯರನ್ನು ನೇಪಾಳ ವಿದ್ಯುತ್ ಪ್ರಾಧಿಕಾರದ (ಎನ್ಇಎ) ಯಾಂತ್ರಿಕ ಫೋರ್ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ 30 ವರ್ಷದ ಸಂಜಯ್ ಶಾ ಮತ್ತು ಜಲವಿದ್ಯುತ್ ಯೋಜನೆಯ ಮೇಲ್ವಿಚಾರಕರಾದ 45 ವರ್ಷದ ಕಬೀರ್ ಮಹರ್ಜನ್ ಎಂದು ಗುರುತಿಸಲಾಗಿದೆ. ಸುರಂಗದ ದ್ವಾರದಲ್ಲಿ ಕೆಸರು ಆವರಿಸಿ, ಮುಚ್ಚಿ ಹೋಗಿದ್ದರಿಂದ ಹೊರಬರಲಾಗದೆ ಆ ಕತ್ತಲಲ್ಲಿಯೇ ತೆವಳಿಕೊಂಡು ಬಂದಿದ್ದರಿಂದ ಇಬ್ಬರ ಕೈಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಹೆಗಲ ಮೇಲೆ ಮತ್ತು ಸ್ಟ್ರೆಚರ್ಗಳ ಮೂಲಕ ಕೆಸರುಮಯ ದೇಹದೊಂದಿಗೆ ಹೊರಬಂದ ಇಬ್ಬರಿಗೂ ಕಠ್ಮಂಡುವಿನ ಚೌನಿ ಸೇನಾ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
900ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆ: ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ
ಆಗಸ್ಟ್ 26ರಂದು ಹಿಮನದಿ ಕುಸಿತದಿಂದ ಸಂಭವಿಸಿದ ಜಲಪ್ರಳಯದಲ್ಲಿ ನೇಪಾಳದ ವಿವಿಧ 12 ಜಲವಿದ್ಯುತ್ ಯೋಜನೆಗಳ ಸುಮಾರು 900 ಕಾರ್ಮಿಕರು ನಾಪತ್ತೆಯಾಗಿದ್ದು, ಈ ಪೈಕಿ 500ಕ್ಕೂ ಹೆಚ್ಚು ಜನರು ಇನ್ನೂ ಸುರಂಗಗಳಲ್ಲೇ ಸಿಲುಕಿರಬಹುದು ಎಂದು ಸ್ಥಳೀಯ ಆಡಳಿತ ಶಂಕಿಸಿದೆ. ದುರಂತದ ಸ್ಥಳಗಳಲ್ಲಿ ಇಂಜಿನಿಯರ್ಗಳು ಪೈಪ್ಗಳ ಮೂಲಕ ಸುರಂಗಗಳಿಗೆ ಗಾಳಿಯನ್ನು ಪಂಪ್ ಮಾಡಲಾಗುತ್ತಿದ್ದು, ಜೀವ ಉಳಿಸುವ ಕೊನೆಯ ಹಂತದ ಪ್ರಯತ್ನಗಳು ಸಾಂಗವಾಗಿ ಸಾಗಿವೆ. ಸುರಂಗದಿಂದ ಮತ್ತಷ್ಟು ಶಬ್ದಗಳು ಕೇಳಿಬರುತ್ತಿರುವುದರಿಂದ ಇನ್ನಷ್ಟು ಜನರು ಜೀವಂತವಾಗಿ ಸಿಗುವ ನಿರೀಕ್ಷೆಯಿದೆ.
1,200 ದಾಟಿದ ಸಾವಿನ ಸಂಖ್ಯೆ
ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆಯ ವರದಿಗಳ ಪ್ರಕಾರ, ಈ ಜಲಪ್ರಳಯಕ್ಕೆ ಇದುವರೆಗೆ ಕನಿಷ್ಠ 1,259 ಜನರು ಬಲಿಯಾಗಿದ್ದು, 5,000ಕ್ಕೂ ಹೆಚ್ಚು ಜನರು ಸುಳಿವೇ ಇಲ್ಲದೆ ನಾಪತ್ತೆಯಾಗಿದ್ದಾರೆ. ನೇಪಾಳ ಗಡಿಗೆ ಹೊಂದಿಕೊಂಡಿರುವ ಚೀನಾದ ಟಿಬೆಟ್ ಭಾಗದಲ್ಲೂ 21 ಜನರು ಮೃತಪಟ್ಟು, 541 ಜನರು ನಾಪತ್ತೆಯಾಗಿದ್ದಾರೆ. ಒಟ್ಟಾರೆ ಆಸ್ತಿಪಾಸ್ತಿ ನಷ್ಟ ಹಾಗೂ ರಕ್ಷಣಾ ಸವಾಲುಗಳ ನಡುವೆಯೂ ನೇಪಾಳ ಸರ್ಕಾರ ಹಾಗೂ ರಕ್ಷಣಾ ಪಡೆಗಳು ರಾತ್ರಿ-ಹಗಲೆನ್ನದೆ ಕಾರ್ಯಾಚರಣೆಯನ್ನು ಮುಂದುವರಿಸಿವೆ. ಸುರಂಗ ರಕ್ಷಣಾ ಕಾರ್ಯಾಚರಣೆಯಲ್ಲಿ ನೇಪಾಳದ ಸಿಬ್ಬಂದಿಗೆ ಭಾರತ ಮತ್ತು ಚೀನಾದ ರಕ್ಷಣಾ ಸಿಬ್ಬಂದಿಯೂ ಕೈಜೋಡಿಸಿದ್ದಾರೆ.
ಇದನ್ನೂ ಓದಿ : ವಯಸ್ಸಿನ ದಾಖಲೆಗಳಲ್ಲಿ ಗೊಂದಲ ; ಭಾರತ ಅಂಡರ್-19 ಆಟಗಾರ ರೋಹಿತ್ ಯಾದವ್ಗೆ BCCI 2 ವರ್ಷ ನಿಷೇಧ



















